Kundapra.com ಕುಂದಾಪ್ರ ಡಾಟ್ ಕಾಂ

ಕೇಂದ್ರದ ಅನುದಾನದ ಮೂಲಕ ಮೀನುಗಾರಿಕೆ ಅಭಿವೃದ್ಧಿಗೆ ಚಿಂತನೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೇಂದ್ರ ಸರ್ಕಾರ ಮೀನುಗಾರರಿಗೆ ಇಪ್ಪತ್ತು ಸಾವಿರ ಕೋಟಿ ಹಣ ತೆಗೆದಿಡುವ ಮೂಲಕ ಅತ್ಯುತ್ತಮ ಕೊಡುಗೆ ನೀಡಿದ್ದು, ಇದರಲ್ಲಿ ಮೂರುವರೆಯಿಂದ ನಾಲ್ಕು ಸಾವಿರ ಕೋಟಿ ಹಣ ರಾಜ್ಯಕ್ಕೆ ಬರಲಿದೆ. ಈ ಅನುದಾನದ ಮೂಲಕ ಕಾರವಾರದಿಂದ ಉಳ್ಳಾಲದ ತನಕ 320 ಕಿಮೀ ವ್ಯಾಪ್ತಿಯಲ್ಲಿ ಕಡಲು ಮೀನುಗಾರಿಕೆ ಹಾಗೂ ಬೇರೆ ರೀತಿಯ ಮೀನುಗಾರಿಕೆ ಹೇಗೆ ಅಭಿವೃದ್ಧಿ ಮಾಡಬಹುದು ಎನ್ನುವ ಬಗ್ಗೆ ಯೋಜನೆ ತಯಾರಿಸಲಾಗುತ್ತಿದೆ ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಮಂಗಳವಾರ ಕುಂದಾಪುರ ಮಿನಿ ವಿಧಾನಸೌಧ ವೀಡಿಯೋ ಕಾನ್ಪರೆನ್ಸ್ ಹಾಲ್‌ನಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಒಳನಾಡಲ್ಲಿ 30 ರಿಂದ 40 ಸಾವಿರ ಕೆರೆಗಳಿದ್ದು, ಅವುಗಳ ಅಭಿವೃದ್ಧಿ ಪಡಿಸಿ, ಕಡು ಬಡವರಿಗೆ ರೈತರಿಗೆ ಕೊಡುವಂತೆ ಕಿಸಾನ್ ಕಾರ್ಡ್ ನೀಡಿ, ಮೀನು ಸಾಕಣಿಕೆಗೆ ಉತ್ತೇಜನ ನೀಡುವ ಬಗ್ಗೆಯೂ ಸಮಾಲೋಚನೆ ನಡೆಸಲಾಗುತ್ತದೆ ಎಂದು ಹೇಳಿದರು.

ಕರಾವಳಿಯಲ್ಲಿ ಮೀನುಗಾರರಿಗೆ ಹಾಗೂ ಮೀನುಗಾರಿಕೆ ಮೂಲಕ ಬದುಕು ಕಟ್ಟಿಕೊಳ್ಳುತ್ತಿರುವ ಮಹಿಳೆಯರಿಗೆ ಶೂನ್ಯ ಬಡ್ಡಿಯಲ್ಲಿ ಸಾಲ ಕೊಡುವ ಯೋಜನೆ ರೂಪಿಸುತ್ತಿದ್ದು, ಇಡೀ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸುವ ಹಾಗೂ ಪ್ರಧಾನಮಂತ್ರಿ ತುಮಕೂರಲ್ಲಿ ಮೀನುಗಾರರಿಗೆ ಕಿಸಾನ್ ಕಾರ್ಡ್ ಯಾವ ರೀತಿ ವಿತರಣೆ ಮಾಡಿದ್ದಾರೋ ಹಾಗೆ ಕಾರ್ಡ್‌ಗಳನ್ನು ಬಡವರಿಗೆ ತಲುಪಿಸುವ ಕೆಲಸ ಪ್ರಾರಂಭ ಮಾಡದ್ದೇವೆ ಎಂದು ತಿಳಿಸಿದರು.

ಕೆ ಒಂದರಿಂದ ಕೆ ಎಡಕ್ಕೆ ನಮ್ಮ ಖಜಾನೆ ವರ್ಗಾವಣೆ ಆಗಿದ್ದರಿಂದ ಕೆಲವರಿಗೆ ಪೆನ್ಶನ್ ಬರೋದು ನಿಂತಿದೆ. ಇಡೀ ಜಿಲ್ಲೆಯಲ್ಲಿರುವ ಫಲಾನುಭವಿಗಳ ಅಂಕಿಅಂಶ ತೆಗೆದುಕೊಂಡು ಉಡುಪಿ ಜಿಲ್ಲಾಧಿಕಾರಿ ಮೂಲಕ ಖಜಾನೆ ಸಂಪರ್ಕ ಮಾಡುವ ಕೆಲಸ ಮಾಡಿದ್ದು, ಶೇ.60 ರಷ್ಟು ಫಲಾನುಭವಿಗಳಿಗೆ ಹಣ ಬಂದಿದೆ. ಶೇ.40ರಷ್ಟು ಜನರಿಗೆ ಹಣ ಬಂದಿಲ್ಲ. ಪುನಹಾ ಸರ್ವೇ ಮಾಡಿ ಯಾರಿಗೆ ಹಣ ಬಂದಿಲ್ಲವೋ ಅವರಿಗೆ ಹಣ ಸಿಗುವಂತೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.

ಕುಂದಾಪುರ ಎಸಿ ಕೆ. ರಾಜು, ದ.ಕ ಉಡುಪಿ ಹಸಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ, ಕುಂದಾಪುರ ಪ್ರಭಾರ ತಹಸಿಲ್ದಾರ್ ಆನಂದಪ್ಪ ನಾಯ್ಕ್, ಉಪ ತಹಸೀಲ್ದಾರ್ ವಿನಯ್, ಪುರಸಭೆ ಸದಸ್ಯರಾದ ಗಿರೀಶ್ ದೇವಾಡಿಗ, ಸಂತೋಷ್ ಕುಮಾರ್ ಶೆಟ್ಟಿ, ಪುರಸಭೆ ಮಾಜಿ ಅಧ್ಯಕ್ಷ ಗುಣರತ್ನಾ, ಮಾಜಿ ಸದಸ್ಯ ಸತೀಶ್ ಶೆಟ್ಟಿ, ಮೀನುಗಾರಿಕಾ ಪ್ರಕೋಷ್ಠ ಅಧ್ಯಕ್ಷ ಸದಾನಂದ ಬಳ್ಕೂರು, ಮಂಡಲ ಬಿಜೆಪಿ ಅಧ್ಯಕ್ಷ ಶಂಕರ ಅಂಕದಕಟ್ಟೆ ಮುಂತಾದವರು ಇದ್ದರು.

ಇದನ್ನೂ ಓದಿ:
► ಬೆಂಗಳೂರಿನಿಂದ ಕೋಟೇಶ್ವರಕ್ಕೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 25ವರ್ಷದ ಟೆಕ್ಕಿ ಸಾವು – https://kundapraa.com/?p=38668 .
► ಉಡುಪಿ ಜಿಲ್ಲೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿದ್ದಾರೆ 14,034 ಮಂದಿ ವಿದ್ಯಾರ್ಥಿಗಳು – https://kundapraa.com/?p=38652 .
► ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಮೇಲ್ದರ್ಜೆಗೆ ಕ್ರಮ: ಜಿಲ್ಲಾಧಿಕಾರಿ ಜಿ. ಜಗದೀಶ್ – https://kundapraa.com/?p=38663 .

Exit mobile version