Kundapra.com ಕುಂದಾಪ್ರ ಡಾಟ್ ಕಾಂ

ತಾಲೂಕಿನ ಆಶಾ ಕಾರ್ಯಕರ್ತರಿಗೆ ನಂದಿನಿ ಉತ್ಪನ್ನಗಳ ಕಿಟ್ ವಿತರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕೊರೊನಾ ಮಹಾಮಾರಿಯಿಂದ ಜನರು ತತ್ತರಿಸಿರುವ ಸಂದರ್ಭ ಆಶಾ ಕಾರ್ಯಕರ್ತರು ತಮಗೆ ಸಿಗುವ ಕನಿಷ್ಠ ಸಂಭಾವನೆಯನ್ನು ಗಣನೆಗೆ ತೆದುಕೊಳ್ಳದೆ ಸಮಾಜದ ಸ್ವಾಸ್ಥ್ಯ ಕಾಪಾಡುವ ದೃಷ್ಟಿಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಸೋಂಕು ತಗಲುವ ಭೀತಿಯಿಂದ ಜನರು ಮನೆಗಳಿಂದ ಹೊರಬರಲು ಅಂಜುತ್ತಿರುವ ಸನ್ನಿವೇಶದಲ್ಲಿ ಅವರು ಮನೆಮನೆಗೆ ತೆರಳಿ ತಮಗೆ ಒಪ್ಪಿಸಿದ ಕರ್ತವ್ಯ ನೆರವೇರಿಸುತ್ತಿದ್ದಾರೆ. ಅವರ ಈ ಕೊಡುಗೆಯನ್ನು ಸಮಾಜ ಬಹುಕಾಲ ಸ್ಮರಿಸಲಿದೆ ಎಂದು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು.

ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ರೈತಸಿರಿ ಸಭಾಭವನದಲ್ಲಿ ಮಂಗಳವಾರ ತಾಲ್ಲೂಕಿನ ಆಶಾ ಕಾರ್ಯಕರ್ತರಿಗೆ ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ವತಿಯಂದ ನಂದಿನಿ ಉತ್ಪನ್ನಗಳ ಕಿಟ್ ವಿತರಿಸಿ ಮಾತನಾಡಿದರು.

ಕೊರೊನಾ ಕಾಟ ಇನ್ನೂ ಕೆಲಕಾಲ ಇರಲಿದೆ. ಆಶಾ ಕಾರ್ಯಕರ್ತರ ಇದೇ ತೆರನಾದ ಸೇವೆ ಮುಂದೆಯೂ ಅಗತ್ಯ ಇದೆ. ಅವರಿಗೆ ದೊರೆಯುತ್ತಿರುವ ಸೇವಾ ಸೌಲಭ್ಯಗಳನ್ನು ಸುಧಾರಿಸುವ ನಿಟ್ಟಿನಲ್ಲಿ ತಾವು ಶ್ರಮಿಸುವುದಾಗಿ ಭರವಸೆ ನೀಡಿದ ಸುಕುಮಾರ ಶೆಟ್ಟಿ ಹಾಲು ಉತಪಾದಕರ ಒಕ್ಕೂಟ ಉಭಯ ಜಿಲ್ಲೆಗಳ ೨,೫೦೦ಕ್ಕೂ ಮಿಕ್ಕಿ ಆಶಾ ಕಾರ್ಯಕರ್ತರನ್ನು ಗೌರವಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಉಪಾಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ಕೊರೊನಾ ಸಂಕಷ್ಟದ ವೇಳೆ ಒಕ್ಕೂಟ ರೂ 2 ಕೋಟಿಗೂ ಅಧಿಕ ಮೊತ್ತವನ್ನು ವಿವಿಧ ವರ್ಗಗಳ ಶ್ರೇಯೋಭಿವೃದ್ಧಿಗೆ ವೆಚ್ಚ ಮಾಡಿದೆ ಎಂದರು.

ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಡಾ. ರವಿರಾಜ ಉಡುಪ ಸ್ವಾಗತಿಸಿದರು. ವಿಸ್ತರಣಾಧಿಕಾರಿ ರಾಜಾರಾಮ ವಂದಿಸಿದರು. ಸಹಾಯಕ ವ್ಯವಸ್ಥಾಪಕ ಸುಧಾಕರ ನಿರ್ವಹಿಸಿದರು. ಒಕ್ಕೂಟದ ನಿರ್ದೇಶಕರಾದ ಹದ್ದೂರು ರಾಜೀವ ಶೆಟ್ಟಿ, ಡಿ. ಗೋಪಾಲಕೃಷ್ಣ ಕಾಮತ್ ಸಿದ್ಧಾಪುರ, ಸಹಾಯಕ ವ್ಯವಸ್ಥಾಪಕ ಡಾ. ಮನೋಹರ, ವಿಸ್ತರಣಾಧಿಕಾರಿ ವಾಸುದೇವ ಪುರಾಣಿಕ, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕ ಬಿ. ಎಸ್. ಸುರೇಶ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಷ್ಣು ಪೈ ಇದ್ದರು.

 

Exit mobile version