Kundapra.com ಕುಂದಾಪ್ರ ಡಾಟ್ ಕಾಂ

ಧ್ವನಿ ಬೆಳಕಿನವರಿಂದ ಹೊಸ ಸಾಧ್ಯತೆಗಳಿಗೆ ನಾಂದಿ: ಓಂಗಣೇಶ್

ಬೈಂದೂರು: ಸಾಂಸ್ಕೃತಿಕ ಕ್ಷೇತ್ರಕ್ಕೆ ಧ್ವನಿ ಬೆಳಕಿನವರ ಕೊಡುಗೆ ನಿರಂತರವಾಗಿದ್ದು ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳುವಲ್ಲಿ ಅವರ ಸಹಕಾರ ಯಾರೂ ಮರೆಯುವಂತಿಲ್ಲ. ಕಲಾವಿದರಾಗಲಿ ಜನನಾಯಕರಾಗಲಿ ವೇದಿಕೆಯಿಂದ ಜನರಿಗೆ ತಲುಪುವುದಿದ್ದರೆ ಅದು ಸೌಂಡ್ ಲೈಟ್‌ನವರ ಸಹಕಾರದಿಂದ. ಮಳೆ ಚಳಿ ಲೆಕ್ಕಿಸದ ಅವರ ಪ್ರಾಮಾಣಿಕ ಪ್ರಯತ್ನದಿಂದ ಹಲವು ಕ್ಷೇತ್ರದಲ್ಲಿ ಇಂದು ಅದ್ಭುತ ಸಾಧನೆಯಾಗಿದೆ. ಹಳ್ಳಿ ಪಟ್ಟಣಗಳಲ್ಲಿನ ಉತ್ಸವಗಳಿಗೆ ವೈಭವದ ಮೆರಗು ಸೃಷ್ಠಿಯಾಗಿದ್ದಲ್ಲದೆ ಪ್ರತಿ ಕಾರ್ಯಕ್ರಮದ ಯಶಸ್ಸು ಕೂಡಾ ಇವರನ್ನೇ ಅವಲಂಬಿರಿಸಿರುತ್ತದೆ ಎಂದು ಅಂತರ್ರಾಷ್ಟ್ರೀಯ ಜಾದೂಗಾರ ಸಾಹಿತಿ ಓಂಗಣೇಶ್ ಹೇಳಿದರು.

ಅವರು ಉಪ್ಪುಂದ ಮಾತೃ ಶ್ರೀ ಸಭಾ ಭವನದಲ್ಲಿ ಜರಗಿದ ಬೈಂದೂರು ವಲಯ ಧ್ವನಿ-ಬೆಳಕು ಸಂಯೋಜಕರ ಸಂಘಟನೆಯ ಚತುರ್ಥ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಲೋಕದ ಧ್ವನಿ ಬೆಳಕಿನ ಸಂಯೋಜನೆ ಭಗವಂತನ ಕೆಲಸ. ಅಂತೆಯೆ ನಾವು ಆ ದೇವರಿಗೆ ಪ್ರಿಯರಾಗುವಂತೆ ದುಡಿಯೋಣಾ. ಕೀಳರಿಮೆ ಬಿಟ್ಟು ನಮ್ಮ ವೃತ್ತಿಯನ್ನು ನಾವು ಗೌರವಿಸಿಕೊಳ್ಳುವುದರ ಮೂಲಕ ಸಮಾಜದಲ್ಲಿ ಎದ್ದು ನಿಲ್ಲೋಣಾ. ಆಧುನಿಕತೆಯ ಭರದಲ್ಲಿ ಮಾನವೀಯತೆ ಮರೆಯದೆ ಪರಸ್ಪರ ಸಾಮರಸ್ಯದಿಂದ ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸೋಣಾ ಎಂದರು.

ಧ್ವನಿ ಬೆಳಕು ಸಂಯೋಜಕರ ಸಂಘಟನೆಯ ಉಡುಪಿ ಜಿಲ್ಲಾ ಅಧ್ಯಕ್ಷರಾದ ವಿಜಯಕುಮಾರ್ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಕಳೆದ ನಾಲ್ಕು ವರ್ಷಗಳಿಂದ ಉಡುಪಿ ಜಿಲ್ಲೆಯಲ್ಲೇ ಅದ್ವಿತೀಯ ವಲಯವೆಂಬ ಹೆಗ್ಗಳಿಕೆಗೆ ಪಾತ್ರವಾದ ಹಿನ್ನೆಲೆಯಲ್ಲಿ ಈ ಬೈಂದೂರು ಸಂಘಟನೆ ಇನ್ನುಳಿದವರಿಗೆ ಮಾದರಿಯಾಗಿದೆ. ಇಲ್ಲಿನ ಆಡಳಿತ ಮಂಡಳಿಯ ಅವಿರತ ಪ್ರಯತ್ನಕ್ಕೆ ಅಭಿನಂದಿಸುತ್ತೇನೆ ಎಂದರು.

ಮುಖ್ಯ ಅತಿಥಿಗಳಾಗಿ ಟಿ ಎಂ ಟಿ ಎಲ್ ಸಂಸ್ಥೆಯ ಏರಿಯಾ ಸೇಲ್ಸ್ ಮ್ಯಾನೆಜರ್ ಮಹೇಶ್ ಬೆಂಗಳೂರು, ಓರಿಯಂಟಲ್ ಇನ್ಸುರೆನ್ಸ್ ಕಂಪನಿಯ ಅಭಿವೃದ್ಧಿ ಅಧಿಕಾರಿ ಪುರಂದರ ಶೆಣೈ, ವರ್ಧಮಾನ್ ಮೇಗಾ ಟೆಕ್ ಸಂಸ್ಥೆಯ ಮುಖ್ಯಸ್ಥ ಸತ್ಯಜೀತ್ ಮುಂಬಯಿ, ಧ್ವ.ಬೆ.ಸಂ.ಸಂ. ಜಿಲ್ಲಾ ಕಾರ್ಯದರ್ಶಿ ದಾಮೋದರ್, ಕೋಶಾಧಿಕಾರಿ ಗಣೇಶ್ ದೇವಾಡಿಗ, ಗೌರವ ಸಲಹೆಗಾರ ಬಾಲಕೃಷ್ಣ ಪೂಜಾರಿ, ಸಭಾ ಭವನದ ಮಾಲಕ ಮಂಜು ದೇವಡಿಗ ಹಾಗೂ ಎಲ್ಲಾ ವಲಯಾಧ್ಯಕ್ಷರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕಾರ್ಮಿಕರ ಅಪಘಾತ ವಿಮಾ ಪತ್ರವನ್ನು ಬೈಂದೂರು ವಲಯಾಧ್ಯಕ್ಷ ಶಶಿಧರ ಶೆಣೈ ಸ್ವೀಕರಿಸಿ ವಂದಿಸಿದರು, ಕಾರ್ಯದರ್ಶಿ ವಿನಾಯಕ ಪ್ರಭು ವರದಿಮಂಡಿಸಿ ವಲಯ ಜಿಲ್ಲಾ ಪ್ರತಿನಿಧಿ ಪ್ರಭಾಕರ ಸ್ವಾಗತಿಸಿ ಉದಯ್ ಆಚಾರ್ ನಿರೂಪಿಸಿದರು.

Exit mobile version