Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ರೋಟರಿ ಕ್ಷಬ್ ಪದಪ್ರದಾನ ಸಮಾರಂಭ

ಸಾಮಾಜಿಕ ಬದ್ಧತೆ ಎಲ್ಲರ ಕರ್ತವ್ಯ : ಜಯಪ್ರಕಾಶ್ ಹೆಗ್ಡೆ

ಕುಂದಾಪುರ: ಸಾಮಾಜಿಕ ಬದ್ಧತೆಯನ್ನಿಟ್ಟುಕೊಂಡು ಪ್ರತಿಯೊಬ್ಬರು ಕಾರ್ಯನಿರ್ವಹಿಸಿದಾಗ ದೇಶ ಸುಭಿಕ್ಷವಾಗುತ್ತದೆ. ಸಾಮಾಜಿಕ ಸುರಕ್ಷತೆ ಭದ್ರಗೊಂಡು ಪರಿಸರದಲ್ಲಿ ಹೊಸ ಪರಿವರ್ತನೆ ಸಾಧ್ಯವಾಗುತ್ತದೆ ಆದುದರಿಂದ ನಮ್ಮ ಕರ್ತವ್ಯ ಬದ್ಧತೆಯ ಬಗ್ಗೆ ಜಾಗೃತಿ ಅಗತ್ಯ. ಈ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ರೋಟರಿ ಕ್ಲಬ್‌ಗಳು ಕಾರ್ಯನಿರ್ವಹಿಸ ಬೇಕಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.

ಅವರು ಕುಂದಾಪುರದ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ರೋಟರಿ ಕ್ಲಬ್ ಕುಂದಾಪುರ ಇದರ 2015-16ನೇ ಸಾಲಿನ ಪದಪ್ರದಾನ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ನೂತನ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಹಾಗೂ ಪದಾಧಿಕಾರಿಗಳಿಗೆ ರೋಟರಿ ವಲಯ-1ರ ಸಹಾಯಕ ಗವರ್ನರ್ ಸತೀಶ್ ಎನ್. ಶೇರೆಗಾರ್ ಅವರು ಪದಗ್ರಹಣ ನೆರವೇರಿಸಿ ರೋಟರಿಯ ಕಾರ್ಯಯೋಜನೆ ಮತ್ತು ಸಾಮಾಜಿಕ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ವಲಯ ಲೆಪ್ಟಿನೆಂಟ್ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ ಅವರು ಕ್ಲಬ್‌ನ ಮುಖವಾಣಿ ಅಕಾರ್ಡ್‌ನ್ನು ಬಿಡುಗಡೆಗೊಳಿಸಿದರು. ಸಂಪಾದಕ ಶ್ರೀಧರ ಸುವರ್ಣ ಸಹಕರಿಸಿದರು.

ಅಧಿಕಾರ ಸ್ವೀಕರಿಸಿ ರೋಟರಿ ಕ್ಲಬ್ ಕುಂದಾಪುರ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅವರು ಮಾತನಾಡಿ ಸಮಾಜದಲ್ಲಿ ಸ್ವಾವಲಂಬನೆಗೆ ಹೆಚ್ಚಿನ ಒತ್ತನ್ನು ನೀಡುವ ಜೊತೆಗೆ ಸಾಮಾಜಿಕ ಪ್ರಜ್ಞೆಯ ಬಗ್ಗೆ ಅರಿವನ್ನು ಮೂಡಿಸಿ ಅವರಲ್ಲಿ ಆತ್ಮ ವಿಶ್ವಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲ ರೋಟರಿ ಸದಸ್ಯರ ಸಹಕಾರದೊಂದಿಗೆ ಕಾರ್ಯೋನ್ಮುಖನಾಗಲಿದ್ದೇನೆ ಎಂದರು

ನಿರ್ಗಮನ ಸಹಾಯಕ ಗವರ್ನರ್ ಗಣೇಶ್ ಶೆಟ್ಟಿ ಮೊಳಹಳ್ಳಿ ಹಾಗೂ ನಿರ್ಗಮನ ವಲಯ ಲೆಫ್ಟಿನೆಂಟ್ ಕೆ. ಕೆ. ಕಾಂಚನ್ ಅವರನ್ನು ಗೌರವಿಸಲಾಯಿತು. ನೂತನ ಸದಸ್ಯರಾಗಿ ವೆಂಕಟೇಶ ಪ್ರಭು ಪ್ರಮಾಣವಚನ ಸ್ವೀಕರಿಸಿದರು. 2014-15ನೇ ಸಾಲಿನ ನಿಕಟಪೂರ್ವ ಹಾಗು ನಿರ್ಗಮಿತ ಅಧ್ಯಕ್ಷ ಮನೋಜ್ ನಾಯರ್ ಅವರು  ಸ್ವಾಗತಿಸಿದರು. ನಿಕಟಪೂರ್ವ ಕಾರ್ಯದರ್ಶಿ ಕೆ.ವಿ.ನಾಯಕ್ ಅವರು ಕಳೆದ ಸಾಲಿನ ಕಾರ್ಯ ಚಟುವಟಿಕೆಗಳ ವರದಿ ವಾಚಿಸಿದರು. ನ್ಯಾಯವಾದಿ ಟಿ. ಬಿ. ಶೆಟ್ಟಿ ಅತಿಥಿಗಳನ್ನು ಪರಿಚರಿಯಿಸಿದರು. ಯುವಜನ ಸೇವೆ ನಿರ್ದೇಶಕ ಟಿ. ಪ್ರವೀಣ್‌ಕುಮಾರ್, ರೋಟರಿ ಸಾಕ್ಷರತ ಛೇರ್‌ಮೆನ್ ಗೋಪಾಲ ಶೆಟ್ಟಿ, ನಿಯೋಜಿತ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ನಿಯೋಜಿತ ಕಾರ್ಯದರ್ಶಿ ಸಾಲಗದ್ದೆ ಶಶಿಧರ ಶೆಟ್ಟಿ ಇನ್ನಿತರರು ಸಹಕರಿಸಿದರು. ಪ್ರಸ್ತಕ 2015-16 ನೇ ಸಾಲಿನ ಕಾರ್ಯದರ್ಶಿ ಸಂತೋಷ ಕೋಣಿ ವಂದಿಸಿದರು.

Exit mobile version