Kundapra.com ಕುಂದಾಪ್ರ ಡಾಟ್ ಕಾಂ

ರಾಜ್ಯ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ: ಬಡವ, ರೈತರ ಪಾಲಿಗೆ ಕರಾಳ ದಿನ

ರಾಜ್ಯ ಸರ್ಕಾರ ತಂದಿರುವ ಭೂಸುಧಾರಣೆ ಕಾಯ್ದೆ ತಿದ್ದುಪಡಿಯು , ಬಡವರಿಂದ ಭೂಮಿ ಕಿತ್ತುಕೊಂಡು ಬಂಡವಾಳ ಶಾಹಿಗಳಿಗೆ ನೀಡುವುದೇ ಸರ್ಕಾರದ ಅಜೆಂಡಾ. ರಾಜ್ಯದಲ್ಲಿ ಕೋವಿಡ್-19 ಸೋಂಕು ತೀವ್ರವಾಗಿ ಹರಡುತ್ತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಬಡವರ ಮತ್ತು ಕೃಷಿಕರ ವಿರುದ್ಧದ ಸುಗ್ರೀವಾಜ್ಞೆ ಹೊರಡಿಸಿರುವುದು ರಾಜ್ಯದ ಪಾಲಿಗೆ ಕರಾಳ ದಿನ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ ಶೆಟ್ಟಿ ಆರೋಪಿಸಿದ್ದಾರೆ.

ರಾಜ್ಯ ಸರ್ಕಾರ ಇಂತಹ ಸಂಧರ್ಭವನ್ನು ತನ್ನ ಸರ್ವಾಧಿಕಾರ ಬಳಸುತ್ತಿದೆ. ಸರ್ಕಾರ ತಿದ್ದುಪಡಿ ತರಲು ಹೊರಟಿರುವ ಭೂಸುಧಾರಣೆ ಕಾಯ್ದೆ, ರೈತರ, ಕೂಲಿಕಾರ್ಮಿಕರ, ಹಿಂದುಳಿದವರ ವಿರೋಧಿಯಾದಂತಹ ತಿದ್ದುಪಡಿಯ ಸುಗ್ರೀವಾಜ್ಞೆ ಹೊರಡಿಸಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಿದೆ. ಹಸಿರು ಶಾಲು ಹೊದ್ದು ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿರುವುದು ಕಪಟ ನಾಟಕವಾಗಿದೆ.

ಭೂಸುಧಾರಣೆ ಕಾಯ್ದೆ(1961)ಗೆ 1974ರಲ್ಲಿ ದೇವರಾಜ ಅರಸು ಅವರು ಸೆಕ್ಷನ್ 63, ಸೆಕ್ಷನ್ 79 ಎ , ಸೆಕ್ಷನ್ 79 ಬಿ ,ಸೆಕ್ಷನ್ 79 ಸಿ ಹಾಗೂ ಸೆಕ್ಷನ್ 80 ಇವುಗಳನ್ನು ಸೇರ್ಪಡೆಗೊಳಿಸಿ ಪ್ರಗತಿಪರವಾದ, ಸಾಮಾಜಿಕ ನ್ಯಾಯದಿಂದ ಕೂಡಿದಂತಹ ಕ್ರಾಂತಿಕಾರಕ ನಿರ್ಣಯ ತೆಗೆದುಕೊಂಡರು. ʼಉಳುವವನೇ ಹೊಲದೊಡೆಯʼ ಎಂಬ ಘೋಷವ್ಯಾಕ್ಯದಂತೆ ಗೇಣಿಗೆ ಹೊಲ ಉಳುತ್ತಿದ್ದ ರೈತರಿಗೆ ಗೇಣಿ ಮಾಡುತ್ತಿದ್ದವರಿಗೆ ಭೂಮಿಯ ಮಾಲಿಕತ್ವದ ಹಕ್ಕು ನೀಡಿದ್ದರು.

ತಿದ್ದುಪಡಿಯಲ್ಲಿ ಹಲವು ಕ್ರಾಂತಿಕಾರಕ ನಿಲುವು ತೆಗೆದುಕೊಳ್ಳಲಾಗಿತ್ತು. ಅದರಂತೆ ಕೃಷಿ ಭೂಮಿಯನ್ನು ರೈತರಲ್ಲದವರು ಯಾರೂ ಖರೀದಿ ಮಾಡದಂತೆ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಸೆಕ್ಷನ್ 79 (ಎ) ಪ್ರಕಾರ ಜಮೀನುದಾರರಿಗೆ ಕೃಷಿಯೇತರ ಆದಾಯ 25 ಲಕ್ಷಕ್ಕಿಂತ ಮೀರಿರಬಾರದು. ಸೆಕ್ಷನ್ 79 (ಬಿ) ಪ್ರಕಾರ ರೈತರಲ್ಲದೆ ಬೇರೆ ಯಾರೂ ಕೂಡ ಕೊಂಡುಕೊಳ್ಳುವಂತಿಲ್ಲ. ಸೆಕ್ಷನ್ 79 (ಸಿ) ಸಲ್ಲಿಸಿದ ಅಫಿಡವಿಟಿನಲ್ಲಿ ಸುಳ್ಳು ಕಂಡುಬಂದರೆ ಶಿಕ್ಷೆಗೆ ಒಳಪಡಿಸಬಹುದು, ಸೆಕ್ಷನ್ 80 ಪ್ರಕಾರ ಕೃಷಿಕರಲ್ಲದಿರೋರು ಕೊಂಡುಕೊಳ್ಳಕೂಡದು.1974ರಲ್ಲಿ ಅರಸು ಅವರು ತಂದಿದ್ದ ತಿದ್ದುಪಡಿ ಇಡೀ ದೇಶಕ್ಕೆ ಮಾದರಿಯಾಗಿತ್ತು. ಅಂತಹ ಪ್ರಗತಿಪರವಾದ ನಿರ್ಣಯವನ್ನು ಕರ್ನಾಟಕ ರಾಜ್ಯ ಸರ್ಕಾರ ಈಗ ರದ್ದು ಗೊಳಿಸುತ್ತಿದೆ. ಸೆಕ್ಷನ್ 63ಕ್ಕೆ ತಿದ್ದುಪಡಿ ತಂದು ಒಂದು ಕುಟುಂಬಕ್ಕೆ ಇದ್ದ 118ಎಕರೆ ಮಿತಿಯನ್ನು 436 ಎಕರೆಗೆ ಏರಿಸಿದ್ದಾರೆ. 436 ಎಕರೆ ಯಾರು ತೆಗೆದುಕೊಳ್ತಾರೆ? ರೈತರು ಅಷ್ಟು ಜಮೀನು ತೆಗೆದುಕೊಳ್ಳುತ್ತಾರಾ? ಇದು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ, ಬಂಡವಾಳಶಾಹಿಗಳಿಗೆ ಅನುಕೂಲ ಆಗಲಿದೆ. ಇದರಿಂದ ಆಹಾರ ಉತ್ಪಾದನೆಯಲ್ಲಿ ಕುಂಠಿತವಾಗಲಿದೆ.

ಕೋವಿಡ್-19ನಿಂದ ರಾಜ್ಯದ ಪ್ರಜೆಗಳು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಜನರನ್ನು ಸಂಕಷ್ಟದಿಂದ ಪಾರುಮಾಡುವ ಜನಪರವಾದ ಸುಗ್ರೀವಾಜ್ಞೆ ತರುವ ಬದಲು ದೇಶದ ಬೆನ್ನೆಲುಬಾದ ರೈತರ, ಬಡವರ ವಿರುದ್ಧದ ಸುಗ್ರೀವಾಜ್ಞೆ ಹೊರಡಿಸಿರುವುದು ನಾಚಿಗೆಗೇಡಿನ ಮತ್ತು ವಿಷಾದನೀಯ ಸಂಗತಿ ಎಂದು ಅವರು ಆರೋಪಿಸಿದ್ದಾರೆ.

 

Exit mobile version