Site icon Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ಅಕ್ರಮ ಬಾಕ್ಸೈಟ್ ಸಾಗಾಟ. ಪೊಲೀಸರು, ಗಣಿ ಅಧಿಕಾರಿಗಳಿಂದ ದಾಳಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿಗೆ ಸಮೀಪದ ಸೆಳ್ಳೆಕುಳ್ಳಿಯ ಖಾಸಗಿ ವ್ಯಕ್ತಿಯ ಜಾಗದಲ್ಲಿ ಅಕ್ರಮವಾಗಿ ಬಾಕ್ಸೈಟ್ ಅಗೆದು ಸಾಗಾಟ ಮಾಡುತ್ತಿದ್ದು, ಬೈಂದೂರು ಪೊಲೀಸರು ದಾಳಿ ನಡೆಸಿ ಲಾರಿ, ಹಿಟಾಚಿ ಹಾಗೂ ಬಾಕ್ಸೈಟ್ ಅದಿರನ್ನು ವಶಪಡಿಸಿಕೊಂಡಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಬಾಕ್ಸೈಟ್ ಅದಿರನ್ನು ಅಕ್ರಮವಾಗಿ ಅಗೆದು ಸಾಗಾಟ ಮಾಡುತ್ತಿದ್ದಾರೆ ಎಂಬ ಬಗ್ಗೆ ದೂರು ಬಂದಿದ್ದವು. ಇಲ್ಲಿನ ಬಾಕ್ಸೈಟನ್ನು ಶ್ರೀಕಾಂತ್ ಶೆಟ್ಟಿ ಎಂಬ ವ್ಯಕ್ತಿಯು ಆಂಧ್ರಪ್ರದೇಶದ ಸಿಮೆಂಟ್ ಕಂಪೆನಿ ಹಾಗೂ ತಮಿಳುನಾಡಿಗೆ ಅಕ್ರಮವಾಗಿ ಸಾಗಾಟ ಮಾಡಿಸುತ್ತಿದ್ದರು ಎನ್ನಲಾಗಿದೆ.

ಮಂಗಳವಾರ ಬೆಳಿಗ್ಗೆ ಬೈಂದೂರು ಎಸ್ಐ ಸಂಗೀತಾ ಅವರ ನೇತೃತ್ವದಲ್ಲಿ ಸಾಗಾಟ ಮಾಡುತ್ತಿದ್ದ ಸ್ಥಳಕ್ಕೆ ಪೊಲೀಸರು ಬಾಕ್ಸೈಟ್ ಅಗೆಯುತ್ತಿದ್ದ ಪ್ರದೇಶದಲ್ಲಿ ದಾಳಿ ನಡೆಸಿದ್ದು ಈ ಸಂದರ್ಭ ಎರಡು ಲಾರಿ ಹಾಗೂ ಒಂದು ಹಿಟಾಚಿ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ. ಸರಕಾರದ ರಾಜಧನ ವಂಚಿಸಿ ಈಗಾಗಲೇ ಸಾಕಷ್ಟು ಬಾಕ್ಸೈಟ್ ಸಾಗಾಟ ಮಾಡಲಾಗಿದ್ದು, ಸ್ಥಳದಲ್ಲಿದ್ದ 30 ಮೆಟ್ರಿಕ್ ಟನ್ ಬಾಕ್ಸೈಟ್ ವಶಕ್ಕೆ ಪಡೆದಿರುವ ಗಣಿ ಅಧಿಕಾರಿಗಳು ಒಂದೂವರೆ ಲಕ್ಷ ರೂ. ದಂಡ ವಿಧಿಸಿದ್ದಾರೆ.

ಈ ಬಗ್ಗೆ ಜಾಗದ ಮಾಲಿಕ, ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ್ ಬಟವಾಡಿ ಪ್ರತಿಕ್ರಿಯಿಸಿ ಜಾಗ ಸಮತಟ್ಟು ಮಾಡುವ ಸಲುವಾಗಿ ಬೇರೊಬ್ಬ ವ್ಯಕ್ತಿಗೆ ಗುತ್ತಿಗೆ ನೀಡಲಾಗಿದ್ದು, ಅಲ್ಲಿ ಬಾಕ್ಸೈಟ್ ಇರುವ ಬಗ್ಗೆ ಮಾಹಿತಿ ಇರಲಿಲ್ಲ. ಜಾಗ ಸಮತಟ್ಟು ಮಾಡುವ ಬಗ್ಗೆ ಅನುಮತಿ ಪಡೆಯದ ಕಾರಣ ದಾಳಿ ನಡೆಸಿರಬಹುದು ಎಂದಿದ್ದಾರೆ.

Exit mobile version