ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಕುಂದಾಪುರ ಹಾಗೂ ಬೈಂದೂರು ತಾಲೂಕಿನಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿದ್ದು ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದರೆ, ಹಳ್ಳಗಳು ತುಂಬಿ ಹರಿಯುತ್ತಿವೆ. ಭತ್ತದ ಗದ್ದೆಗಳಲ್ಲೂ ನೀರು ಭರ್ತಿಯಾಗಿದ್ದು, ಬೀಳುವ ಮಳೆ ಒಣಗುವ ಹಂತ ತಲಪಿದ್ದ ಫಸಲಿಗೆ ಹಾನಿ ಮಾಡುತ್ತಿದೆ.
ಸೋಮವಾರ ರಾತ್ರಿಯಿಂದಲೇ ಗಾಳಿ ಸಹಿತ ಭಾರೀ ಮಳೆಯಾಗಿದೆ. ಮಂಗಳವಾರ ಬೆಳಗ್ಗಿನಿಂದ ಮತ್ತೆ ಆರಂಭಗೊಂಡ ಮಳೆ ಮಧ್ಯಾಹ್ನದವರೆಗೂ ಆ ಬಳಿಕವೂ ಭಾರೀ ಮಳೆಯಾಗಿದೆ. ಬುಧವಾರವೂ ರಾತ್ರಿ ಹಾಗೂ ಬೆಳಿಗ್ಗೆ ಮಳೆಯಾಗಿದ್ದು, ದಿನವಿಡಿ ಮೋಡ ಕವಿದ ವಾತಾವರಣವಿತ್ತು.
ಉಭಯ ತಾಲೂಕುಗಳ ತೆಕ್ಕಟ್ಟೆ, ಕುಂಭಾಶಿ, ಕೋಟೇಶ್ವರ, ಬಿದ್ಕಲ್ಕಟ್ಟೆ, ಹಾಲಾಡಿ, ಗೋಳಿಯಂಗಡಿ, ಬೆಳ್ವೆ, ಮಡಾಮಕ್ಕಿ, ಅಮಾಸೆಬೈಲು, ಶಂಕರನಾರಾಯಣ, ಸಿದ್ದಾಪುರ, ಹೊಸಂಗಡಿ, ಅಂಪಾರು, ಕಂಡೂರು, ನೇರಳಕಟ್ಟೆ, ಆಜ್ರಿ, ಕೊಲ್ಲೂರು, ವಂಡ್ಸೆ, ಕುಂದಾಪುರ, ತಲ್ಲೂರು, ಹೆಮ್ಮಾಡಿ, ತ್ರಾಸಿ, ಗಂಗೊಳ್ಳಿ, ಮರವಂತೆ, ಹಕ್ಲಾಡಿ, ನಾವುಂದ, ಉಪ್ಪುಂದ, ಬೈಂದೂರು, ಶಿರೂರು ಸೇರಿದಂತೆ ಎಲ್ಲ ಕಡೆಗಳಲ್ಲಿ ನಿರಂತರ ಮಳೆಯಾಗಿದೆ.
ಕುಂದಾಪುರ ಬೈಂದೂರು ಭಾಗದಲ್ಲಿ ಹಿಂದಿಗಿಂತ ಹೆಚ್ಚು ಪ್ರದೇಶಗಳಲ್ಲಿ ಭತ್ತದ ಕೃಷಿ ಮಾಡಲಾಗಿದ್ದು, ಆದರೆ ಈಗ ಭತ್ತದ ತೆನೆಗಳು ಫಸಲು ಬಿಟ್ಟು, ಬೆಳೆಯುವ ಸಮಯವಾಗಿದ್ದು, ಈ ಸಂದರ್ಭ ಮಳೆ ಬಂದರೆ ಸಂಪುರ್ಣ ಫಸಲೇ ನಾಶವಾಗುವ ಭೀತಿ ರೈತರದ್ದಾಗಿದೆ. ಈಗಾಗಲೇ ಜೂನ್, ಆಗಸ್ಟ್, ಸೆಪ್ಟಂಬರ್ನಲ್ಲಿ ಬಂದ ನೆರೆಗೆ ನಾವುಂದ ಗ್ರಾಮದ ಸಾಲ್ಬುಡ, ಕಂಡಿಕೇರಿ, ಸಸಿಹಿತ್ಲ ಭಾಗ, ಹಕ್ಲಾಡಿ, ತೋಪ್ಲು, ಕೋಡಿ ಮತ್ತಿತರ ಭಾಗಗಳಲ್ಲಿ ಭತ್ತದ ಪೈರು ಕೊಳೆತು ಹಾನಿಯಾಗಿತ್ತು. ಈಗ ಮತ್ತೆ ಫಸಲು ಬಿಡುವ ಸಮಯದಲ್ಲಿ ಹೀಗೆ ಮಳೆ ಬೀಳುತ್ತಿದ್ದು, ಕಟಾವಿಗೆ ಬಂದಿದ್ದ ಫಸಲಿಗೆ ಹಾನಿಯಾಗಲಿದೆ.
ಕೋಡಿ, ಗಂಗೊಳ್ಳಿ, ತ್ರಾಸಿ, ಕಂಚುಗೋಡು, ಮರವಂತೆ, ಕೊಡೇರಿ, ಮಡಿಕಲ್, ಶಿರೂರು ಸೇರಿದಂತೆ ಎಲ್ಲೆಡೆಯೂ ಕಡಲು ಬಿರುಸಾಗಿದ್ದು, 3 ದಿನಗಳ ಕಾಲ ರೆಡ್ ಅಲರ್ಟ್ ಘೋಷಿಸಲಾಗಿತ್ತು. ಇದರಿಂದಾಗಿ ಮೀನುಗಾರರು ಕಡಲಿಗಿಳಿದಿರಲಿಲ್ಲ.
ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಕೆಸರಿನ ಹೊಂಡವಾಗಿ ಮಾರ್ಪಾಡಾಗಿದೆ. ಸರ್ವೀಸ್ ರಸ್ತೆಯೇ ಹೆದ್ದಾರಿಯಾಗಿ ಪ್ರತಿದಿನ ಸಾವಿರಾರು ವಾಹನಗಳು ಓಡಾಟಕ್ಕೆ ಇದನ್ನೇ ಅನಿವಾರ್ಯವಾಗಿ ಬಳಸುತ್ತಿವೆ. ಇನ್ನು ಕೆಲವೆಡೆ ಹೆದ್ದಾರಿ ಬದಿಗಳಲ್ಲಿ ಕೃತಕ ನೆರೆ ಸೃಷ್ಟಿಯಾಗಿ ವಾಹನ ಮತ್ತು ಜನಸಂಚಾರಕ್ಕೆ ತೊಡಕಾಗುತ್ತಿದೆ. ಹೆದ್ದಾರಿಯ ಕೆಲವೆಡೆ ಗುತ್ತಿಗೆದಾರರು ಈಗ ಚರಂಡಿ ನಿರ್ಮಾಣ ಮಾಡುತ್ತಿದ್ದಾರೆ. ಮಳೆಯ ಕಾರಣ ಅದನ್ನು ನಿಲ್ಲಿಸಲಾಗಿದೆ. ಹೆದ್ದಾರಿಗೆ ಊರಿನ ರಸ್ತೆಗಳು ಬಂದು ಸೇರುವ ಸ್ಥಳಗಳಲ್ಲಿ ಚರಂಡಿ ಸೌಲಭ್ಯವಿಲ್ಲದ ಕಾರಣ ಧಾರಾಕಾರ ಮಳೆಗೆ ಕಾಲು ಮುಳುಗುವಷ್ಟು ನೀರು ನಿಂತಿದೆ. ಹೆದ್ದಾರಿಗಿಂತ ತಗ್ಗಿನಲ್ಲಿರುವ ರಸ್ತೆಗಳಲ್ಲಿ, ವಾಹನ ನಿಲುಗಡೆ ಪ್ರದೇಶಗಳಲ್ಲಿ, ಅಂಗಡಿಗಳ ಮುಂದೆ ಕೃತಕ ಕೆರೆ ಉಂಟಾಗಿ ಜನರ ಕಷ್ಟಪಟ್ಟು ಓಡಾಡಬೇಕಾಗಿದೆ. ಹೆದ್ದಾರಿ ಇಲಾಖೆಗೆ, ಗುತ್ತಿಗೆದಾರರಿಗೆ, ಸ್ಥಳೀಯಾಡಳಿತಕ್ಕೆ ಶಾಪ ಹಾಕುತ್ತಿದ್ದಾರೆ.