Kundapra.com ಕುಂದಾಪ್ರ ಡಾಟ್ ಕಾಂ

ರಸ್ತೆಗೆ ಸೆಗಣಿ ಗುಂಡಿ ನೀರು: ಕ್ರಮಕ್ಕೆ ಆಗ್ರಹ

ಕುಂದಾಪ್ರ ಡಾಟ್ ಕಾಂ ಸುದ್ದಿ,
ಬೈಂದೂರು: ಮರವಂತೆಯ ಡಾ. ಶಿವರಾಮ ಕಾರಂತ ಮಾರ್ಗದ ಪಕ್ಕದ ಒಂದು ಮನೆಯವರು ರಸ್ತೆಯ ಅಂಚಿನಲ್ಲಿ ಗೊಬ್ಬರ ಗುಂಡಿ ನಿರ್ಮಿಸಿಕೊಂಡು ಅದರಲ್ಲಿ ರಾಶಿ ಹಾಕುತ್ತಿರುವ ಸೆಗಣಿಯಿಂದ ಅಸಹ್ಯಕರವೂ, ಸಾರ್ವಜನಿಕರ ಆರೋಗ್ಯಕ್ಕೆ ಹಾನಿಕಾರಕವೂ ಆದ ವಾತಾವರಣ ನಿರ್ಮಾಣವಾಗಿದ್ದು ಅದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಳಕಳಿ ಹೊಂದಿದ ಹಿರಿಯ ನಾಗರಿಕರೊಬ್ಬರು ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದಾರೆ.

ಈ ಗುಂಡಿಯಲ್ಲಿ ದೊಡ್ಡ ಗಾತ್ರದಲ್ಲಿ ಸಂಗ್ರಹವಾದ ಸೆಗಣಿ ಮತ್ತು ಅದರ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಜನರು ಅದನ್ನು ಮೆಟ್ಟಿಕೊಂಡು ಓಡಾಡಬೇಕಾಗಿದೆ. ಈ ಗುಂಡಿಯಲ್ಲಿ ದೀರ್ಘಕಾಲದಿಂದ ಸಂಗ್ರಹವಾಗಿ ಕೊಳೆಯುತ್ತಿರುವ ಸೆಗಣಿ ಸೊಳ್ಳೆ, ರೋಗಾಣು ಉತ್ಪತ್ತಿಯ ಕೇಂದ್ರವಾಗಿ ಮಾರ್ಪಟ್ಟಿದೆ. ಆ ಮನೆಯವರಿಗೆ ಮನೆ ಮತ್ತು ಕೊಟ್ಟಿಗೆಯ ಸಮೀಪ ಗೊಬ್ಬರ ಸಂಗ್ರಹಿಸಲು ಅಗತ್ಯ ಜಮೀನು ಇದ್ದರೂ ಅವುಗಳಿಂದ ದೂರದಲ್ಲಿ ಅನ್ಯ ಮನೆಗಳ ಹತ್ತಿರ, ಸಾರ್ವಜನಿಕ ರಸ್ತೆ ಹಾಗೂ ಸುತ್ತಲಿನ ಖಾಸಗಿ ಸ್ಥಳಗಳಿಂದ ಒಂದಂಗುಲವೂ ಅಂತರ ಬಿಡದೆ ಸೆಗಣಿ, ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಗುಂಡಿ ಆಳ ಇರುವುದರಿಂದ ರಸ್ತೆಯಲ್ಲಿ ಓಡಾಡುವ ಮಕ್ಕಳು, ಹಿರಿಯ ನಾಗರಿಕರಿಗೆ ಅಪಾಯಕಾರಿಯೂ ಆಗಿದೆ. ಇದು ಮರವಂತೆ ಗ್ರಾಮ ಪಂಚಾಯಿತಿ ಸಾಧಿಸಲು ಶ್ರಮಿಸುತ್ತಿರುವ ಸ್ವಚ – ಸುಂದರ ಮರವಂತೆ ಗುರಿಗೂ ಮಾರಕವಾಗಿದೆ. ಗ್ರಾಮ ಪಂಚಾಯಿತಿಗೆ ಪ್ರದತ್ತವಾದ ಅಧಿಕಾರ ಬಳಸಿ ಇಲ್ಲಿನ ಗುಂಡಿಯನ್ನು ಯಾರಿಗೂ ತೊಂದರೆಯಾಗದ ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ದೂರುದಾರರು ಆಗ್ರಹಿಸಿದ್ದಾರೆ.

ದೂರಿಗೆ ತಕ್ಷಣ ಸ್ಪಂದಿಸಿ ಈಚೆಗೆ ಸ್ಥಳಕ್ಕೆ ಬಂದು ಪರಿಶೀಲಿಸಿದ ಕಾರ್ಯದರ್ಶಿ ದಿನೇಶ ಶೇರುಗಾರ್ ಪಂಚಾಯಿತಿ ಮೇಲಾಧಿಕಾರಿಗಳಿಗೆ ವಾಸ್ತವ ಅಂಶಗಳ ಕುರಿತು ವರದಿ ನೀಡಿ ಕಾಯಿದೆಯಂತೆ ಕ್ರಮ ಕೈಗೊಳ್ಳಲು ಶಿಫಾರಸು ಮಾಡುವ ಭರವಸೆ ಕೊಟ್ಟಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ.

Exit mobile version