Kundapra.com ಕುಂದಾಪ್ರ ಡಾಟ್ ಕಾಂ

ಕಾಲಕ್ಕೆ ತಕ್ಕಂತೆ ಉಪನ್ಯಾಸಕರಲ್ಲೂ ಬದಲಾವಣೆ ಅಗತ್ಯ: ಡಾ. ಶಶಿಧರ್ ಭಟ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಪಿ. ಜಿ. ಕಂಪ್ಯೂಟರ್ ಸೈನ್ಸ್ ಲ್ಯಾಬ್ ನಲ್ಲಿ ವೃತ್ತಿಪರ ವಾಣಿಜ್ಯ ವಿಭಾಗ ಆಯೋಜಿಸಿದ್ದ ಒಂದು ದಿನದ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮ ನಡೆಯಿತು

ಸಂಪನ್ಮೂಲ ವ್ಯಕ್ತಿಯಾಗಿ ಆಳ್ವಾಸ್ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ಸಂಯೋಜಕ ಡಾ. ಶಶಿಧರ ಭಟ್ ಮಾತನಾಡಿ, ಇಂದಿನ ಶಿಕ್ಷಣ ವ್ಯವಸ್ಥೆ ಹೊಸ ಆಧುನಿಕ ತಂತ್ರಜ್ಞಾನವನ್ನು ಹೆಚ್ಚು ಅವಲಂಬಿಸಿದ್ದು, ಶಿಕ್ಷಕರು ಈ ಕಾಲದ ಅಗತ್ಯಕ್ಕೆ ತಕ್ಕಂತೆ ತಮ್ಮಲ್ಲಿ ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ’ಇ – ಕಂಟೆಂಟ್ ಡೆವೆಲೆಪ್‌ಮೆಂಟ್’ ವಿಷಯದ ಕುರಿತು ಮಾತನಾಡಿದರು.

ಪ್ರತಿಭಾವಂತ ವಿದ್ಯಾರ್ಥಿಗಳು ಮಾತ್ರ ವೃತ್ತಿಪರ ವಾಣಿಜ್ಯ ಕೋರ್ಸ್ ಗಳನ್ನು ಆಯ್ಕೆ ಮಾಡುತ್ತಾರೆ. ಸಿ. ಎ, ಸಿ.ಎಸ್, ಅಥವಾ ಅಂತಾರಾಷ್ಟ್ರೀಯ ಕೋರ್ಸ್‌ಗಳಾದ ಎ. ಸಿ. ಸಿ. ಎ; ಸಿ. ಎಮ್. ಎ. ಕೋರ್ಸ್‌ಗಳು ಬಹು ಸ್ಪರ್ಧಾತ್ಮಕ ಕೋರ್ಸ್‌ಗಳಾಗಿದ್ದು, ಇದಕ್ಕೆ ಸಾಮಾನ್ಯ ತರಗತಿಗಳಿಗಿಂತ ಬೇರೆ ರೀತಿಯ ತಯಾರಿ ಬೇಕಾಗುತ್ತದೆ. ಹಳೆಕಾಲದ ನೋಟ್ಸ್ ಮಾದರಿ ಸಾಧ್ಯವೇ ಇಲ್ಲ. ವಿದ್ಯಾರ್ಥಿಗಳ ಅಗತ್ಯತೆಯನ್ನು ಅರಿತು ಕೆಲಸ ಮಾಡುವ ಹಂತದಲ್ಲಿ ನಾವಿದ್ದೇವೆ. ಈ ನಿಟ್ಟಿನಲ್ಲಿ ಉಪನ್ಯಾಸಕರಿಗೆ ತರಬೇತಿ ಕಾರ್ಯಕ್ರಮಗಳು ನಡೆಯಬೇಕಿದೆ ಎಂದರು.

ಕಾರ‍್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಕಾಲೇಜಿನ ಮ್ಯಾನೇಜ್‌ಮೆಂಟ್ ಮತ್ತು ಬಿ. ಎಚ್. ಆರ್. ಡಿ. ವಿಭಾಗದ ಡೀನ್ ಸುರೇಖಾ, ಕೆಲಸದ ಒತ್ತಡದ ನಡುವೆ ನಮ್ಮ ಮನಸ್ಥಿತಿ, ವಿಚಾರದ ಗುರಿ ಬದಲಾಗಬಹುದು, ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಪರಿಸ್ಥಿತಿಯೂ ಬರಬಹುದು. ಇ – ಕಂಟೆಂಟ್, ಆನ್ಲೈನ್ ಮಾದರಿ ಇನ್ನು ಸರ್ವೇ ಸಾಮಾನ್ಯವಾಗಿ ಬಿಡಬಹುದು. ಹಾಗಾಗಿ ಉಪನ್ಯಾಸಕರೂ ಹೊಸತನ್ನು ಕಲಿಯಲು ತರಬೇತಿ ಕಾರ್ಯಕ್ರಮಗಳ ಅಗತ್ಯವಿದೆ ಎಂದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ವೃತ್ತಿಪರ ವಾಣಿಜ್ಯ ವಿಭಾಗದ ಮುಖ್ಯಸ್ಥ ಅಶೋಕ್. ಕೆ. ಜಿ., ತರಬೇತಿ ಕಾರ್ಯಕ್ರಮಗಳು ಒಬ್ಬರಿಗೆ ಮಾತ್ರ ಸೀಮಿತವಾಗಿರದೆ ಅದು ಅನೇಕ ಹೊಸ ನಾಯಕರನ್ನು ಹುಟ್ಟು ಹಾಕುವಲ್ಲಿ ಪ್ರೇರೇಪಿಸುತ್ತದೆ. ಪ್ರತಿಯೊಬ್ಬ ಉಪನ್ಯಾಸಕನೂ ಒಬ್ಬ ನಾಯಕನಾಗಿ, ತರಬೇತುದಾರನಾಗಿ ಕೆಲಸ ಮಾಡುವ ಅನಿವಾರ್ಯತೆಯಿದೆ ಎಂದು ತಿಳಿಸಿದರು.

ಒಂದು ದಿನದ ತರಬೇತಿಯಲ್ಲಿ ಜೂಮ್ ಬಳಸಿಕೊಂಡು ತರಗತಿಗಳನ್ನು ಚಿತ್ರೀಕರಿಸುವುದು, ಗೂಗಲ್‌ಮೀಟ್‌ನಲ್ಲಿ ಚಿತ್ರೀಕರಿಸಿದ ವೀಡಿಯೋ ಹಾಕಿ ವಿದ್ಯಾರ್ಥಿಗಳಿಗೆ ತಲುಪಿಸುವುದು, ಗೂಗಲ್ ಫಾರ್ಮ್ ತಯಾರಿಸುವುದು, ಇ -ಸರ್ಟಿಫಿಕೇಟ್ ತಯಾರಿ, ಪಠ್ಯಪುಸ್ತಕಗಳನ್ನು ಸ್ಕ್ಯಾನ್ ಮಾಡಿ ಇ – ಗ್ರಂಥಾಲಯ ಮಾಡುವುದನ್ನು ಹೇಳಿಕೊಡಲಾಯಿತು.

ಉಪನ್ಯಾಸಕಿ ಪೂರ್ಣಿಮಾ ಕಾರ್ಯಕ್ರಮವನ್ನು ನಿರೂಪಿಸಿ, ಉಪನ್ಯಾಸಕಿ ಪ್ರತಿಷ್ಟಾ ಜೈನ್ ವಂದಿಸಿದರು.

Exit mobile version