Kundapra.com ಕುಂದಾಪ್ರ ಡಾಟ್ ಕಾಂ

ಮೌಲ್ಯಗಳನ್ನು ಅಳವಡಿಸಿಕೊಂಡಾಗ ಶಿಕ್ಷಣ ಸಾರ್ಥಕ್ಯ

ಕುಂದಾಪುರ: ಶೈಕ್ಷಣಿಕ ಪ್ರಗತಿಯೆನ್ನುವುದು ಶೇಕಡಾ 100ರಷ್ಟು ಫಲಿತಾಂಶ ದಾಖಲಾತಿಗೆ ಮಾತ್ರ ಸೀಮಿತವಾಗಿರದೇ ಮಕ್ಕಳಲ್ಲಿ ಪರಿಪೂರ್ಣತೆ ಹಾಗೂ ವ್ಯಕ್ತಿತ್ವದ ಬೆಳವಣಿಗೆ ಪೂರಕವಾಗಿರಬೇಕು ಎಂದು ಅಕಾಡೆಮಿ ಆಫ್ ಜನರಲ್ ಎಜುಕೇಶನ್ ನ ಆಡಳಿತಾಧಿಕಾರಿ ಡಾ. ಎಚ್. ಶಾಂತರಾಮ್ ಹೇಳಿದರು

ಅವರು ಕೋಡಿ ಬ್ಯಾರಿಸ್ ಕಾಲೇಜಿನಲ್ಲಿ ಮರುನಿರ್ಮಾಣಗೊಂಡ ಬೀಹೈವ್ ಕನ್ವೆನ್‌ಶನ್ ಹಾಲ್‌ ಉದ್ಘಾಟಿಸಿ ಬಳಿಕ ನಡೆದ ಪೋಷಕರ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮಕ್ಕಳು ಶಿಕ್ಷಣದಿಂದ ಸ್ವಾವಲಂಬಿಗಳಾಗಿ ಬೆಳೆಯಬೇಕು. ಜೀವನದಲ್ಲಿ ನೈತಿಕತೆ ಹಾಗೂ ಮಾನವೀಯ ಗುಣಗಳನ್ನು ಅಳವಡಿಸಿಕೊಂಡಾಗ ಮಾತ್ರ ಶಿಕ್ಷಣಕ್ಕೆ ನಿಜವಾದ ಅರ್ಥ ಬರುತ್ತದೆ ಎಂದವರು ನುಡಿದರು

ವಿಶೇಷವಾಗಿ ಉಪಸ್ಥಿತರಿದ್ದ ವಾರ್ತಾಭಾರತಿ ಪತ್ರಿಕೆಯ ಪ್ರಧಾನ ಸಂಪಾದಕರಾದ ಅಬುಸ್ಸಲಾಮ್ ಪುತ್ತಿಗೆ ಮಾತನಾಡಿ, ಈ ಸುಂದರ ಕಡಲ ತಡಿಯ ವಾತವರಣ ಮನುಷ್ಯನಿಗೆ ಜೀವಂತಿಕೆ ನೀಡುತ್ತದೆ. ವಿದ್ಯೆ ಮಾತ್ರ ಗೌರವಕ್ಕೆ ಮಾನದಂಡವಲ್ಲ, ಒಳ್ಳೆಯ ಶಿಕ್ಷಣ, ಜ್ಞಾನ ಜೊತೆಗೆ ಕೌಶಲ್ಯಗಳನ್ನು ನೀಡುವುದರಿಂದ ವಿದ್ಯಾರ್ಥಿಯನ್ನು ಮನುಷ್ಯನನ್ನಾಗಿ ರೂಪಿಸಬಹುದು. ಮಗುವಿನ ಚಾರಿತ್ಯ ನಿರ್ಮಾಣದಲ್ಲಿ ಪೋಷಕರು ಹಾಗೂ ಶಿಕ್ಷಕರು ಕಾಳಜಿ ವಹಿಸಬೇಕಾಗಿದೆ ಎಂದರು.

ಬ್ಯಾರೀಸ್ ಶಿಕ್ಷಣ ಸಂಸ್ಥೆಯ ಸಂಚಾಲಕ ಸೈಯದ್ ಮೊಹಮ್ಮದ್ ಬ್ಯಾರಿ ಪ್ರಾಸ್ತಾವಿಕದಲ್ಲಿ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂರನ್ನು ಸಂಸ್ಮರಣೆ ಮಾಡುತ್ತಾ ಕಲಾಂ ಜಾತಿ ಮತ ಪಂತವನ್ನು ಮೀರಿ ಬೆಳೆದವರು ಜನರು ಅವರನ್ನು ಒಬ್ಬ ಶೇಷ್ಠ ವ್ಯಕ್ತಿಯಾಗಿ ಕಾಣುತ್ತಾರೆ, ಅಂತಹ ವ್ಯಕ್ತಿಗಳನ್ನು ರೂಪಿಸುವಂತಹ ಕೆಲಸವನ್ನು ಶಿಕ್ಷಣ ಸಂಸ್ಥೆಗಳು ಮಾಡಬೇಕು ಎಂದರು.

ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಜಿ ಮಾಸ್ಟರ್ ಮೆಹಮೊದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ನಿರ್ದೇಶಕರಾದ ಪ್ರೋ.ಚಂದ್ರಶೇಖರ ದೋಮ ಉಪಸ್ಥಿತರಿದ್ದರು.

ಕಳೆದ ಸಾಲಿನ ಎಸ್.ಎಸ್ ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್‌ನ ಮುಖ್ಯೋಪಾಧ್ಯಾಯ ರವೀಂದ್ರ ಸ್ವಾಗತಿಸಿದರು. ಸಹಶಿಕ್ಷಕಿ ರಹಮತ್ ಕೋಟ ವಂದಿಸಿದರು. ಕು.ಪಲ್ಲವಿ ಕಾರ್ಯಕ್ರಮ ನಿರೂಪಿಸಿದರು.

Exit mobile version