Kundapra.com ಕುಂದಾಪ್ರ ಡಾಟ್ ಕಾಂ

ಗ್ರಾಮ ಪಂಚಾಯಿತಿ ಮಾರ್ಗದರ್ಶಿ ’ಜನಾಧಿಕಾರ’ ಪುಸ್ತಕ ಬಿಡುಗಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜನರ ಕೈಗೆ ಅಧಿಕಾರ ಕೊಡಬೇಕು ಎನ್ನುವ ನಿಲುವು ಇದ್ದರೂ ಕೂಡಾ ಅದು ಪರಿಣಾಮಕಾರಿಯಾಗಿ ಅನುಷ್ಠಾನ ಆಗದೇ ಇರುವುದನ್ನು ಕಾಣುತ್ತೇವೆ. ವ್ಯವಸ್ಥೆಯೊಳಗಿರುವ ಭ್ರಷ್ಟಚಾರ ಹೊರ ಬಂದರೆ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತದೆ. ಪಂಚಾಯತಿ ಪ್ರತಿನಿಧಿಗಳು ಕಾಯ್ದೆಗಳನ್ನು ತಿಳಿದುಕೊಂಡು ತಮ್ಮ ಹಕ್ಕು, ಕರ್ತವ್ಯಗಳನ್ನು ಪಾಲಿಸಬೇಕು. ಆ ಹಿನ್ನೆಲೆಯಲ್ಲಿ ’ಜನಾಧಿಕಾರ’ ಕೃತಿ ಮಾರ್ಗದರ್ಶಿಯಾಗಬಲ್ಲದು ಎಂದು ವಿಧಾನ ಪರಿಷತ್ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಹೇಳಿದರು.

ಗ್ರಾಮ ಪಂಚಾಯತ್ ಹಕ್ಕೋತ್ತಾಯ ಆಂದೋಲನ ಮತ್ತು ಪಂಚಾಯತ್ ರಾಜ್ ಒಕ್ಕೂಟ ಇವರ ಸಹಕಾರದೊಂದಿಗೆ ಕುಂದಾಪುರ ತಾಲೂಕು ಪಂಚಾಯತಿ ಸಭಾಭವನದಲ್ಲಿ ನಡೆದ ಜನಪ್ರತಿನಿಧಿ ಪ್ರಕಾಶನ ಕುಂದಾಪುರ ಪ್ರಕಟಿಸಿರುವ ಪಂಚಾಯತ್ ರಾಜ್ ತಜ್ಞ ಎಸ್.ಜನಾರ್ದನ ಮರವಂತೆ ಸಂಕಲಿಸಿರುವ ಜನಾಧಿಕಾರ ಗ್ರಾಮ ಪಂಚಾಯಿತಿ ಮಾರ್ಗದರ್ಶಿ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರಕಾರಗಳು ಜನಹಿತವಾಗಿ ಕೆಲಸ ಮಾಡಬೇಕು. ಆದರೆ ಇವತ್ತು ಕೆಳಸ್ತರದಿಂದ ಲೋಕಸಭೆಯ ತನಕ ಮನಸ್ಸು ಬಿಚ್ಚಿ ಮಾತನಾಡುವ ಸ್ಥಿತಿ ಇದ್ದಂತಿಲ್ಲ. ಕೆಲವೊಂದು ಬಾರಿ ಅಧಿಕಾರವನ್ನು ಅಧಿಕಾರಿಗಳು ಕಬಳಿಸುತ್ತಾರೆ ಎನ್ನುವ ಆರೋಪಗಳು ಕೇಳಿ ಬರುತ್ತವೆ. ರದ್ದು ಮಾಡುವುದು, ಒಪ್ಪದಿರುವುದು, ತಡೆಹಿಡಿಯುವುದು ಈ ಮೂರರ ಅಡಿಯಲ್ಲಿಯೇ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಆ ನಿಟ್ಟಿನಲ್ಲಿ ಪಂಚಾಯತ್ ವ್ಯವಸ್ಥೆಯಲ್ಲಿ ಕಾಯ್ದೆಗಳು ಪರಿಣಾಮಕಾರಿ ಅನುಷ್ಠಾನ ಆಗಬೇಕಾದ ಅಗತ್ಯತೆ ಇದೆ ಎಂದರು.

ಜನಾಧಿಕಾರ ಪುಸ್ತಕದಲ್ಲಿ ಎಸ್. ಜನಾರ್ದನ ಮರವಂತೆಯವರ ಆಶಾವಾದವನ್ನು ಕಾಣಬಹುದು. ಇದು ಪ್ರಸ್ತುತ ಅಗತ್ಯವೂ ಕೂಡಾ. ಪಂಚಾಯುತ್ ರಾಜ್ ವ್ಯವಸ್ಥೆ ಇನ್ನಷ್ಟು ಬಲಿಷ್ಟವಾಗಬೇಕಾಗಿದೆ. ಆ ಹಿನ್ನೆಲೆಯಲ್ಲಿ ಈ ಪುಸ್ತಕದ ಸದುಪಯೋಗವನ್ನು ಜನತೆ ಪಡೆದುಕೊಳ್ಳಬೇಕು ಎಂದರು.

ಜನಾಧಿಕಾರ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ 3ನೇ ಹಣಕಾಸು ಆಯೋಗದ ಅನುಷ್ಠಾನ ಸಮಿತಿಯ ಅಧ್ಯಕ್ಷ ಎ.ಜಿ ಕೊಡ್ಗಿಯವರು, ಪಂಚಾಯತ್ ರಾಜ್ ವ್ಯವಸ್ಥೆಯ ಬಲವರ್ಧನೆ ಅತೀ ಅಗತ್ಯ. ಗ್ರಾಮ ಪಂಚಾಯತ್‌ಗಳಿಗೆ ಹೆಚ್ಚಿನ ಅಧಿಕಾರ, ಅನುದಾನ ಸಿಗುವಂತಾಗಬೇಕು. ಎಸ್. ಜನಾರ್ದನ ಮರವಂತೆಯವರು ಪಂಚಾಯತ್ ವ್ಯವಸ್ಥೆಯಲ್ಲಿ ಸ್ವತಃ ಇದ್ದವರು. ಅವರ ಸಂಕಲಿಸಿರುವ ಈ ಪುಸ್ತಕದ ಸದುಪಯೋಗವನ್ನು ಎಲ್ಲಾ ಪಂಚಾಯತಿ ಪ್ರತಿನಿಧಿಗಳು ಪಡೆದುಕೊಳ್ಳಬೇಕು ಎಂದರು.

ಕೃತಿಯನ್ನು ಪರಿಚಯಿಸಿದ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ ತಿದ್ದುಪಡಿ ಸಮಿತಿಯ ಸದಸ್ಯರಾದ ಟಿ.ಬಿ.ಶೆಟ್ಟಿ ಅವರು, ಪಂಚಾಯತ್ ರಾಜ್ ಕಾಯ್ದೆಯನ್ನು ಪಂಚಾಯತ್ ಪ್ರತಿನಿಧಿಗಳು ತಿಳಿದುಕೊಳ್ಳಬೇಕು. ಇಲ್ಲಿ ಸಾಕಷ್ಟು ಕಾಯ್ದೆಗಳಿವೆ. ಅವುಗಳನ್ನೆಲ್ಲವನ್ನು ಸರಳವಾಗಿ ಜನಾರ್ದನ ಮರವಂತೆಯವರು ಈ ಕೃತಿಯಲ್ಲಿ ನೀಡಿದ್ದಾರೆ. ಇದು ಉಪಯೂಕ್ತ ಕೃತಿಯಾಗಲಿದೆ ಎಂದರು.

ಪ್ರಕಾಶಕ ಸುಬ್ರಹ್ಮಣ್ಯ ಪಡುಕೋಣೆ ಸ್ವಾಗತಿಸಿದರು. ಜನಾಧಿಕಾರ ಕೃತಿಯ ಲೇಖಕರಾದ ಎಸ್.ಜನಾರ್ದನ ಮರವಂತೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೇದಾರ ಮರವಂತೆ ಪ್ರಾರ್ಥಿಸಿದರು. ಶಿಕ್ಷಕ ಉದಯ ಗಾಂವಕರ ಕಾರ್ಯಕ್ರಮ ನಿರ್ವಹಿಸಿ, ಹಕ್ಕೋತ್ತಾಯ ಆಂದೋಲನದ ಕೃಪಾ ಎಂ.ಎಂ ವಂದಿಸಿದರು. ಕಾರ್ಯಕ್ರಮ ಸರಳವಾಗಿ ಸರ್ಕಾಋದ ಕೋವಿಡ್ ನಿಯಮಾವಳಿ ಅನುಸಾರ ನಡೆದು, ಕುಂದಾಪ್ರ ಡಾಟ್ ಕಾಂನಲ್ಲಿ ನೇರ ಪ್ರಸಾರಗೊಂಡಿತು.

ಗ್ರಾಮ ಸರಕಾರ ಕಾರ್ಯಾಲಯದಿಂದ ’ಜನಾಧಿಕಾರ’ ಅನಾವರಣ
ಪುಸ್ತಕ ಬಿಡುಗಡೆಯನ್ನು ವಿಶಿಷ್ಠವಾಗಿ ಮಾಡಲಾಯಿತು. ಪಂಚಾಯತ್ ಕಟ್ಟಡ ಮಾದರಿಯ ಗ್ರಾಮ ಸರಕಾರ ಕಾರ್ಯಾಲಯ ’ಜನಾಧಿಕಾರ ಸೌಧ’ದ ಬಾಗಿಲು ತೆರೆದು ಎ. ಜಿ ಕೊಡ್ಗಿಯವರು ಪುಸ್ತಕವನ್ನು ಹೊರ ತಗೆದು ಅನಾವರಣಗೊಳಿಸಿದರು. ಪ್ರತಿಯನ್ನು ವೇದಿಕೆಯ ನೀಡುವುದರೊಂದಿಗೆ, ಪಂಚಾಯತ್ ಒಕ್ಕೂಟದ ಅಧ್ಯಕ್ಷ ಉದಯ ಕುಮಾರ ಶೆಟ್ಟಿ ಹಾಗೂ ಹಕ್ಕೋತ್ತಾಯ ಆಂಧೋಲನದ ಶ್ರೀನಿವಾಸ ಗಾಣಿಗರಿಗೆ ನೀಡಲಾಯಿತು.

Exit mobile version