Kundapra.com ಕುಂದಾಪ್ರ ಡಾಟ್ ಕಾಂ

ಬಡತನ ನಿವಾರಣೆಗೆ ಮೊದಲ ಆದ್ಯತೆ: ಸೊರಕೆ

ಕುಂದಾಪುರ: ರಾಜ್ಯ ವಿಧಾನಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಪಕ್ಷ ಜನರಿಗೆ ನೀಡಿದ್ದ 168 ಭರವಸೆಗಳಲ್ಲಿ ಕಳೆದ ಎರಡು ವರ್ಷಗಳಲ್ಲಿ 100 ಭರವಸೆಗಳನ್ನು ಈಡೇರಿಸಲಾಗಿದೆ. ಅವುಗಳಲ್ಲಿ ಹೆಚ್ಚಿನವುಗಳು ಬಡತನ ನಿವಾರಣೆಗೆ ಪೂರಕವಾಗುವ ಕಾರ್ಯಕ್ರಮಗಳು. ಇದು ರಾಜ್ಯ ಸರಕಾರವು ಬಡತನ ನಿವಾರಣೆಗೆ ನೀಡುತ್ತಿರುವ ಮಹತ್ವವನ್ನು ತೋರಿಸುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ ಸೊರಕೆ ಹೇಳಿದರು.

   ತ್ರಾಸಿಯ ಕ್ಲಾಸಿಕ್ ಸಭಾಭವನದಲ್ಲಿ ನಡೆದ ಆಶ್ರಯ ಸಾಲ ಮತ್ತು ಬಡ್ಡಿ ಮನ್ನಾ ದೃಢೀಕರಣ ಪತ್ರ ವಿತರಣೆಯ ಬೃಹತ್ ಸಮಾವೇಶವನ್ನು ಅವರು ಉದ್ಘಾಟಿಸಿ ಮಾತನಾಡಿದರು. ತಮ್ಮ ಮಾತಿಗೆ ಅವರು ಆಶ್ರಯ ಸಾಲ, ಬಡ್ಡಿ ಮನ್ನಾ, ಕಡಿಮೆ ಬಡ್ಡಿ ಸಾಲ ವಿತರಣೆ, ಪ್ರಸಕ್ತ ಆಶ್ರಯ ಮನೆಗಳಿಗೆ ಹೆಚ್ಚಿಸಿದ ಘಟಕ ವೆಚ್ಚವಾದ ರೂ ೧. ೨೫ ಲಕ್ಷ ಮೊತ್ತ ಪೂರ್ತಿ ಸಹಾಯಧನವಾಗಿ ಪರಿವರ್ತನೆ, ಅನ್ನಭಾಗ್ಯ, ಕ್ಷೀರಭಾಗ್ಯ, ಮನಸ್ವಿನಿ, ಬಿಪಿಎಲ್ ಪಡಿತರ ಚೀಟ ವಿತರಣೆ, ಎಪಿಎಲ್ ಚೀಟಿದಾರರಿಗೂ ರಿಯಾಯತಿ ದರದಲ್ಲಿ ಪಡಿತರ ವಿತರಣೆ, ೯೪ಸಿ ಅನ್ವಯ ಮನೆ ನಿವೇಶನ ನೀಡಿಕೆ, ಕೃಷಿ ಬೆಂಬಲ ಬೆಲೆ, ಡೀಮ್ಡ್ ಫಾರೆಸ್ಟ್ ಸಮಸ್ಯೆ ನಿವಾರಣೆ, ಕಸ್ತೂರಿರಂಗನ್ ಸಮಿತಿ ವರದಿಯಲ್ಲಿ ಮಾರ್ಪಾಡಿಗೆ ಶಿಫಾರಸು, ಕುಮ್ಕಿ ಭೂಮಿ ಪಟ್ಟಾ ನೀಡಿಕೆಗೆ ಕ್ರಮ ಮೊದಲಾದ ಯೋಜನೆಗಳನ್ನು ಅವರು ಉದಾಹರಣೆಯಾಗಿ ನೀಡಿದರು.

ಶಾಸಕ ಕೆ. ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸುಮಾರು ಐದು ಸಾವಿರ ಜನ ಸೇರಿದ್ದ ಸಮಾವೇಶದಲ್ಲಿ ಕುಂದಾಪುರ ತಾಲೂಕಿನ ಒಟ್ಟು ೫೬೫೪ ಫಲಾನುಭವಿಗಳ ರೂ. 7.1 ಕೋಟಿ ಆಶ್ರಯ ಸಾಲ ಮನ್ನಾ ಮತ್ತು ರೂ. 5.06 ಕೋಟಿ ಬಡ್ಡಿ ಮನ್ನಾ ಮಾಡಿದ ದೃಢೀಕರಣ ಪತ್ರ ವಿತರಿಸಲಾಯಿತು.

ಸಹಾಯಕ ಕೃಷಿ ನಿರ್ದೇಶಕ ಮೋಹನ್‌ರಾಜ್ ಸ್ವಾಗತಿಸಿದರು. ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಸೂರ್ಯನಾರಾಯಣ ವಂದಿಸಿದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸೀತಾರಾಮ ಶೆಟ್ಟಿ ನಿರೂಪಿಸಿದರು.

ತಾಲೂಕು ಪಂಚಾಯಿತಿ ಅಧ್ಯಕ್ಷ ಭಾಸ್ಕರ ಬಿಲ್ಲವ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಗೌರಿ ದೇವಾಡಿಗ, ಅನಂತ ಮೊವಾಡಿ, ಇಂದಿರಾ ಶೆಟ್ಟಿ, ತಾಲೂಕು ಪಂಚಾಯಿತಿ ಸದಸ್ಯರಾದ ಕೆ. ರಮೇಶ ಗಾಣಿಗ, ಎಸ್.ರಾಜು ಪೂಜಾರಿ, ಎಚ್. ಮಂಜಯ್ಯ ಶೆಟ್ಟಿ, ತ್ರಾಸಿ ಗ್ರಾಮ ಪಂಚಾಯತ್ ಅಧ್ಯಕ್ಷ ವೆಂಕಟ ಪೂಜಾರಿ, ಹೊಸಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪೂಜಾರಿ, ಕುಂದಾಪುರ ತಹಸಿಲ್ದಾರ್ ಗಾಯತ್ರಿ ನಾಯಕ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನಾರಾಯಣಸ್ವಾಮಿ, ಬೈಂದೂರು ವಿಶೇಷ ತಹಸಿಲ್ದಾರ್ ಕಿರಣ್ ಗೌರಯ್ಯ, ಇತರರು ಉಪಸ್ಥಿತರಿದ್ದರು.

Exit mobile version