Site icon Kundapra.com ಕುಂದಾಪ್ರ ಡಾಟ್ ಕಾಂ

ಜಗತ್ತಿನಲ್ಲಿ ಗುರುವಿಗೆ ಮಿಗಿಲಾದವರು ಯಾರೂ ಇಲ್ಲ: ಬಿ. ಎಂ. ಸುಕುಮಾರ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಂಬದಕೋಣೆಯ ಸಂವೇದನಾ ವಿಜ್ಞಾನ ಮತ್ತು ವಾಣಿಜ್ಯ ಪ್ರಥಮದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮ ನಡೆಯಿತು.

ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟಿ, ಮಾತನಾಡಿ, ಯಾರು ಎಷ್ಟೇ ದೊಡ್ಡ ಹುದ್ದೆಗೇರಿದರೂ ತನಗೆ ಅಕ್ಷರ ಕಲಿಸಿದ ಗುರುಗಳನ್ನು ಮರೆಯುವುದಿಲ್ಲ. ತಂದೆತಾಯಿ ನಮಗೆ ಜನ್ಮ ನೀಡಿದರೆ ಗುರು ನಮ್ಮಲ್ಲಿ ಅರಿವಿನ ದೀಪವನ್ನು ಹಚ್ಚುತ್ತಾರೆ. ವಿದ್ಯೆಯಿಲ್ಲದ ಮನುಷ್ಯನ ಜೀವನ ಪಶುವಿಗೆ ಸಮಾನ ಎಂಬಂತೆ ವ್ಯಕ್ತಿಯ ವ್ಯಕ್ತಿತ್ವ ವಿಕಸನವಾಗಲು ಶಿಕ್ಷಣದ ಅಗತ್ಯವಿದೆ. ನಮಗೆ ದಾರಿತೋರಿದ ಗುರುಗಳನ್ನು ಸ್ಮರಿಸಿ, ಗೌರವಿಸುವುದು ಶಿಷ್ಯರಾದವರ ಆದ್ಯ ಕರ್ತವ್ಯವಾಗಿದೆ . ಜ್ಞಾನಿಗಳ ಸರಿಯಾದ ಮಾರ್ಗದರ್ಶನವಿದ್ದರೆ ಎಂತಹ ವ್ಯಕ್ತಿಯಾದರೂ ಸಾಧನೆ ಮಾಡಬಲ್ಲ. ಶೃದ್ದೆ, ನಿಷ್ಠೆ, ಗುರುಭಕ್ತಿಯಿಂದ ವಿದ್ಯಾರ್ಥಿ ಕಲಿತಾಗ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರಬಲ್ಲ. ಇಂದು ಇಲ್ಲಿ ತಮ್ಮ ಗುರುಗಳನ್ನು ಗುರುತಿಸಿ, ಗುರುವಂದನೆ ಮಾಡುತ್ತಿರುವುದು ಸ್ತುತ್ಯಾರ್ಹ ಎಂದರು ಹೇಳಿದರು.

ವಿಶ್ರಾಂತ ಉಪನ್ಯಾಸಕ ಪಿ.ಶೇಷಪ್ಪಯ್ಯ ಹೆಬ್ಬಾರ್, ನಿವೃತ್ತ ಶಿಕ್ಷಕಿಯರಾದ ಸೀತಾಲಕ್ಷ್ಮೀ ಟೀಚರ್, ರೋಮನ್ ಲೋಬೋ, ಸುಶೀಲ ಗಾಣಿಗರವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಬೈಂದೂರು ಕಸಾಪದ ಅಧ್ಯಕ್ಷ ರವೀಂದ್ರ ಎಚ್.ವಹಿಸಿದ್ದರು.

ಕುಂದಾಪುರ ತಾಲೂಕು ಕಸಾಪದ ಅಧ್ಯಕ್ಷ ಡಾ.ಕಿಶೋರ ಕುಮಾರ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಾಹಿತಿ ಹಾಗೂ ಜೀವವಿಮಾ ಅಧಿಕಾರಿ ಡಾ.ಶ್ರೀನಿವಾಸ ಶೆಟ್ಟಿ, ಉಡುಪಿ ಜಿಲ್ಲಾ ಕಸಾಪದ ಗೌರವ ಕಾರ್ಯದರ್ಶಿ ಡಾ.ಸುಬ್ರಹ್ಮಣ್ಯ ಭಟ್, ಉದ್ಯಮಿ ಜಗನ್ನಾಥ ಶೆಟ್ಟಿ ನಾಕಟ್ಟೆ, ಕನಕ ಗ್ರೂಪ್‌ಆಫ್ ಹೊಟೇಲ್‌ನ ಮಾಲಕ ಜಗದೀಶ ಶೆಟ್ಟಿ, ಹಿರಿಯ ನಾಗರೀಕ ವೇದಿಕೆ ಅಧ್ಯಕ್ಷ ಗೋವಿಂದ ಎಂ., ಪುಂಡಲೀಕ್ ನಾಯಕ್, ಲಾವಣ್ಯ ಬೈಂದೂರಿನ ಅಧ್ಯಕ್ಷ ಉದಯ ಆಚಾರ್ ಉಪಸ್ಥಿತರಿದ್ದರು.

ಬಿ. ಪ್ರವೀಣ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಕ ಮಾತನಾಡಿದರು.ಡಾ. ಪ್ರತಿಭಾರೈ ಕಾರ್ಯಕ್ರಮ ನಿರೂಪಿಸಿ, ಬಾಡಾ ಭಾಸ್ಕರ ಶೆಟಿ ಧನ್ಯವಾದ ಸಮರ್ಪಿಸಿದರು.

Exit mobile version