Kundapra.com ಕುಂದಾಪ್ರ ಡಾಟ್ ಕಾಂ

ಕುಂಭಾಶಿ ‘ಮಕ್ಕಳ ಮನೆ’ಯ ಬಯಲು ರಂಗಮಂದಿರ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂಭಾಶಿಯ ಕೊರಗ ಕಾಲನಿ ಸಮೀಪದ ‘ಮಕ್ಕಳ ಮನೆ’ಗಾಗಿ ಚಾಲೆಂಜರ್ಸ್ ಫೌಂಡೇಶನ್ (ರಿ) ಕೊಡುಗೆಯಾಗಿ ನೀಡಿದ ಪ್ರಾಕೃತಿಕ ಬಯಲು ರಂಗಮಂದಿರ ವೇದಿಕೆಯನ್ನು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಗುರುವಾರ ಸಂಜೆ ಉದ್ಘಾಟಿಸಿದರು.

ಬಳಿಕ ಅವರು ಮಾತನಾಡಿ ಕುಂಭಾಶಿಯ ಮಕ್ಕಳ ಮನೆಗೆ ಪ್ರಾಕೃತಿಕ ಬಯಲು ರಂಗಮಂದಿರದಂತಹ ಅತ್ಯಮೂಲ್ಯ ಆಸ್ತಿ ಮಾಡಿಕೊಟ್ಟಿದ್ದಕ್ಕೆ ಚಾಲೆಂಜರ್ಸ್ ಫೌಂಡೇಶನ್ ಸಂಸ್ಥೆಗೆ ಜಿಲ್ಲಾಡಳಿತವು ಅಭಿನಂದನೆ ಸಲ್ಲಿಸುತ್ತದೆ. ಇದೊಂದು ಅದ್ಭುತ ಪರಿಕಲ್ಪನೆಯಾಗಿದ್ದು ಮುಂದಿನ ದಿನಗಳಲ್ಲಿ ಇಲ್ಲಿನ ಮಕ್ಕಳ ಪಾಠ ಹಾಗೂ ಇತರ ಉತ್ತಮ ಚಟುವಟಿಕೆಗೆ ಪೂರಕ ವಾತಾವರಣ ಸೃಷ್ಟಿಯಾಗಿದೆ ಎಂದು ಹೇಳಿದರು.

ಚಾಲೆಂಜರ್ಸ್ ಫೌಂಡೇಶನ್ ಅಧ್ಯಕ್ಷ ರಾಜೇಂದ್ರ ಶೆಟ್ಟಿ ಹಾಲಾಡಿ ಮಾತನಾಡಿ, ಚಾಲೆಂಜರ್ಸ್ ಫೌಂಡೇಶನ್ ಸಾಕಷ್ಟು ವರ್ಷಗಳಿಂದ ನಿರಂತರ ಸಮಾಜ ಸೇವೆಯಲ್ಲಿ ತೊಡಗಿದೆ. ಯಾರಿಂದಲೂ ದೇಣಿಗೆ, ನಿಧಿ ಸಂಗ್ರಹ, ಮಾಡದೇ ಸಂಸ್ಥೆ ಸದಸ್ಯರ ಆದಾಯದ ಒಂದಷ್ಟು ಭಾಗವನ್ನು ಸಮಾಜಕ್ಕೆ ನೀಡಲಾಗುತ್ತಿದೆ. ಸಮಾಜದಿಂದ ಪಡೆದುದ್ದನ್ನು ಸಮಾಜಕ್ಕೆ ಕೊಡಬೇಕು ಎನ್ನುವುದು ಚಾಲೆಂಜರ್ಸ್ ಫೌಂಡೇಶನ್ ಮೂಲಮಂತ್ರವಾಗಿದ್ದು ಸ್ವಾರ್ಥ ರಹಿತವಾಗಿ ಸಾಧನೆಯ ಜೊತೆಗೆ ನಾನು ಬೆಳೆಯುತ್ತಾ ಸಮಾಜವನ್ನು ಬೆಳೆಸಬೇಕು ಎಂದುಕೊಳ್ಳುವುದು ನಿಜವಾದ ಸಾರ್ಥಕತೆ ಮತ್ತು ಸಾಕ್ಷಾತ್ಕಾರ ಎಂಬುದು ಸಂಸ್ಥೆ ಉದ್ದೇಶ ಎಂದರು.

ಮಂಗಳೂರು ಡಿಸಿಪಿ ಹರಿರಾಂ ಶಂಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ, ಚಾಲೆಂಜರ್ಸ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಸಿರಿಯಾನ್ ಬಾರ್ಕೂರು, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಸುಬ್ರಮಣ್ಯ ಶೆಟ್ಟಿ, ಐಟಿಡಿಪಿ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಅನಿತಾ ವಿ. ಮಡ್ಲೂರು, ಕುಂಭಾಸಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಜಯರಾಮ ಶೆಟ್ಟಿ, ಕೊರಗ ಮುಖಂಡ ಲಕ್ಷ್ಮಣ ಮೊದಲಾದವರಿದ್ದರು.

ಮಕ್ಕಳ ಮನೆಯ ವಿದ್ಯಾರ್ಥಿಗಳಿಗೆ ಎಜುಕೇಶನ್ ಕೀಟ್ ವಿತರಿಸಲಾಯಿತು. ಮಕ್ಕಳ ಮನೆ ಶಿಕ್ಷಕಿ ವಿನಿತಾ ಸೇರಿದಂತೆ ಮಕ್ಕಳ ಮನೆಯ ಗಣೇಶ್ ಕುಂದಾಪುರ, ಗಣೇಶ್ ಬಾರ್ಕೂರು, ಶೇಖರ ಮರವಂತೆ, ಲಕ್ಷ್ಮಣ ಬೈಂದೂರು, ಸುದರ್ಶನ ಕೋಟ, ಶರತ್ ಅವರನ್ನು ಕುಂಭಾಸಿ ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ಮಕ್ಕಳ ಮನೆಯಿಂದ ಡಿಸಿ, ಡಿಸಿಪಿ ಹಾಗೂ ಅತಿಥಿಗಳನ್ನು ಕೊರಗ ಸಮುದಾಯದ ಸಾಂಪ್ರದಾಯಿಕ ವಾದನಗಳಾದ ಡೋಲು, ಚಂಡೆ, ಕೊಳಲು ವಾದನದ ಮೂಲಕ ವೇದಿಕೆಗೆ ಕರೆತರಲಾಯಿತು.

ಮಕ್ಕಳ ಮನೆ ಮುಖ್ಯಸ್ಥ ಗಣೇಶ್ ವಿ. ಕುಂದಾಪುರ ಸ್ವಾಗತಿಸಿದರು. ಮಕ್ಕಳ ಮನೆ ವಿದ್ಯಾರ್ಥಿಗಳಾದ ಆದರ್ಶ, ವೃರ್ಷಿಣಿ, ರಾಧಿಕಾ ಪ್ರಾರ್ಥಿಸಿದರು. ವಿದ್ಯಾರ್ಥಿನಿಯರಾದ ಸಾವಿತ್ರಿ, ಸುಮನಾ ರಂಗಮಂದಿರದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಮಹೇಶ್ ವಕ್ವಾಡಿ ಕಾರ್ಯಕ್ರಮ ನಿರೂಪಿಸಿ ಗಣೇಶ್ ಬಾರ್ಕೂರು ವಂದಿಸಿದರು.

ಕಾರ್ಯಕ್ರಮ ಉದ್ಘಾಟನೆಗೊಂಡು ಕೆಲ ಹೊತ್ತಿನಲ್ಲೇ ಗಾಳಿಯೊಂದಿಗೆ ವರ್ಷದಾರೆ ಆರಂಭಗೊಂಡಿತು. ಡಿಸಿ ಜಿ. ಜಗದೀಶ್ ಅವರು ಮಳೆಯಲ್ಲೇ ಕೆಲ ಹೋತ್ತು ಮಾತನಾಡಿದರು. ವೇದಿಕೆಯಲ್ಲಿದ್ದ ಡಿಸಿಪಿ ಹರಿರಾಂ ಶಂಕರ್ ಸಹಿತ ಎಲ್ಲಾ ಅತಿಥಿ ಗಣ್ಯರು ಮಳೆಯನ್ನು ಲೆಕ್ಕಿಸದೇ ಕಾರ್ಯಕ್ರಮ ಚಂದಾಗಾಣಿಸಲು ವೇದಿಕೆಯ ಆಸನದಲ್ಲೇ ಕೂತರು. ಸ್ಥಳೀಯರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಕಾರ್ಯಕ್ರಮಕ್ಕೆ ಪ್ರೇಕ್ಷಕರಾಗಿ ಆಗಮಿಸಿದವರು ಮಳೆಯಲ್ಲಿಯೇ ಪ್ಲಾಸ್ಟಿಕ್ ಕುರ್ಚಿ ತಲೆ ಮೇಲೆ ಹಿಡಿದುಕೊಂಡು ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು.

Exit mobile version