Kundapra.com ಕುಂದಾಪ್ರ ಡಾಟ್ ಕಾಂ

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದಲ್ಲಿ ಸಪ್ತಪದಿ ಸರಳ ಸಾಮೂಹಿಕ ವಿವಾಹ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಸ್ವರ್ಣಮುಖಿ ರಂಗಮಂಟಪದಲ್ಲಿ ಸಪ್ತಪದಿ ಉಚಿತ ಸರಳ ಸಾಮೂಹಿಕ ವಿವಾಹ ಸಮಾರಂಭ ಜರುಗಿತು.

ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಮಾತನಾಡಿ, ಸರಳ ಮದುವೆ ಬಗ್ಗೆ ಯುವಪೀಳಿಗೆ, ಜನಸಾಮಾನ್ಯರು ಹಾಗೂ ಮಧ್ಯಮ ವರ್ಗದವರ ಆಶಯದಿಂದ ಈ ಸರಳ ವಿವಾಹ ಯೋಜನೆ ಆಯೋಜಿಸಲಾಗಿದ್ದು, ಈ ಮೂಲಕ ಸಮಾಜದಲ್ಲಿ ಆದರ್ಶ ಪ್ರಾಯ ಜೀವನ ನಡೆಸುವಂತಾಗಲಿ ಎಂಬ ಹರಕೆ, ಹಾರೈಕೆ ಸರಕಾರದ್ದು ಎಂದ ಹೇಳಿದರು.

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಅದ್ದೂರಿಯಲ್ಲಿ ಒಬ್ಬರನೊಬ್ಬರು ಮೀರಿಸುವಂತ ಪೈಪೋಟಿಯಲ್ಲಿ ತಮ್ಮ ಮಕ್ಕಳ ಮದುವೆಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಮೂಲಕ ಅನಗತ್ಯ ದುಂದುವೆಚ್ಚ ಮಾಡುತ್ತಿರುವುದು ಕಾಣಬಹುದಾಗಿದೆ. ಇದರಿಂದ ಸಾಮಾನ್ಯ ಜನರಿಗೆ ಆರ್ಥಿಕವಾಗಿ ಹಿನ್ನಡೆಯಾಗಿ ಸಾಲದ ಸುಳಿಯಲ್ಲಿ ಬೀಳುತ್ತಾರೆ. ಇದಕ್ಕಿಂತ ಸರಳ ಹಾಗೂ ಸಾಮೂಹಿಕ ವಿವಾಹ ಮಡಿಕೊಳ್ಳುವುದರಿಂದ ಆರ್ಥಿಕ ಹೊರೆ ತಗ್ಗಿಸಬಹುದು. ಈ ನಿಟ್ಟಿನಲ್ಲಿ ಕಂಕಣಭಾಗ್ಯ ಕೂಡಿಬಂದ ಯುವಜನತೆ ಸರ್ಕಾರದ ಸಪ್ತಪದಿ ಯೋಜನೆ ಪ್ರಯೋಜನ ಪಡೆಯಬೇಕು ಎಂದು ಸಲಹೆ ನೀಡಿದರು.

ಶಾಸಕರು ನವದಂಪತಿಗಳಿಗೆ ದೇವಳದ ವತಿಯಿಂದ ಕೊಡಮಾಡುವ ಪಂಚೆ, ಶಲ್ಯ ವರನಿಗೆ ಹಾಗೂ ವಧುವಿಗೆ 6 ಗ್ರಾಂ ಚಿನ್ನದ ಗುಂಡು ಇರುವ ಕರಿಮಣಿಸರವನ್ನು ಹಸ್ತಾಂತರಿಸಿದರು. ಒಟ್ಟು ನಾಲ್ಕು ಜೋಡಿಹಕ್ಕಿಗಳು ಕೊಲ್ಲೂರು ಶ್ರೀ ಮೂಕಾಂಬಿಕಾ ಸಾನಿಧ್ಯದಲ್ಲಿ ಸತಿಪತಿಗಳಾದರು.

ಕೊಲ್ಲೂರು ದೇವಳಕ್ಕೆ ಭೇಟಿನೀಡಿದ ಆರ್ಟ್ ಆಫ್ ಲೀವಿಂಗ್‌ನ ರವಿಶಂಕರ ಗುರೂಜಿ ಶ್ರೀ ಮೂಕಾಂಬಿಕೆಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ ನಂತರ ಸಪ್ತಪದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೂತನ ದಂಪತಿಗಳಿಗೆ ಶುಭಹಾರೈಸಿದರು. ಮಧ್ಯಾಹ್ನ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿತ್ತು.ದೇವಳದ ಕಾರ್ಯನಿರ್ವಹಣಾಧಿಕಾರಿ ಎಸ್. ಪಿ. ಬಿ. ಮಹೇಶ್, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಜಯಾನಂದ ಹೋಬಳಿದಾರ್, ಡಾ. ಅತುಲ್‌ಕುಮಾರ್ ಶೆಟ್ಟಿ, ಶೇಖರ ಪೂಜಾರಿ, ಗೋಪಾಲಕೃಷ್ಣ ನಾಡ, ಸಂಧ್ಯಾ ರಮೇಶ್, ರತ್ನಾ ರಮೇಶ್, ಮಾಜಿ ಸದಸ್ಯರಾದ ಕೆ. ರಮೇಶ ಗಾಣಿಗ, ಕೆ. ವಿ. ಶ್ರೀಧರ ಅಡಿಗ ಇದ್ದರು. ಸಂತೋಷ್ ಕೊಠಾರಿ ಕಾರ್ಯಕ್ರಮ ನಿರ್ವಹಿಸಿ, ವಿಘ್ನರಾಜ್ ಆಚಾರ್ಯ ವಂದಿಸಿದರು.

Exit mobile version