Kundapra.com ಕುಂದಾಪ್ರ ಡಾಟ್ ಕಾಂ

ಆಳ್ವಾಸ್‌ನಲ್ಲಿ ಕೆಡೆಟ್ ಕ್ಯಾಂಪ್‌ನ ಸಮಾರೋಪ ಸಮಾರಂಭ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಫೈವ್ ಕರ್ನಾಟಕ ಎನ್‌ಸಿಸಿ ನೇವಲ್ ಯುನಿಟ್ ಮಂಗಳೂರು ಹಾಗೂ ಆಳ್ವಾಸ್ ಕಾಲೇಜಿನ ಎನ್‌ಸಿಸಿ ನೇವಲ್ ವಿಂಗ್‌ನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಐದು ದಿನದ ಕೆಡೆಟ್ ಕ್ಯಾಂಪ್‌ನ ಸಮಾರೋಪ ಸಮಾರಂಭ ಜರುಗಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಕಾಲೇಜಿನ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ಶಿಸ್ತಿನ ವಾತಾವರಣ ಕಠಿಣ ಸನ್ನಿವೇಶವೆಂದು ಭಾವಿಸದೆ, ಅದು ನಮ್ಮ ಭವಿಷ್ಯವನ್ನು ಸತ್ಪತದಲ್ಲಿ ಕೊಂಡೊಯ್ಯಲು ಇರುವ ಉತ್ತಮ ಮಾರ್ಗವೆಂದು ತಿಳಿಯಿರಿ ಎಂದು ತಿಳಿಸಿದರು.

ಸಾವಧಾನ್ ಎನ್ನುವ ಪೇರೆಡ್ ಕಾಷನ್ ಅಲ್ಪಕಾಲಿಕವಾಗಿರಬಾರದು. ಅದು ದೀರ್ಘ ಕಾಲದವರೆಗೆ ನಮ್ಮ ಮನದಲ್ಲಿರಬೇಕು. ಜೀವನದಲ್ಲಿ ಯಾವುದನ್ನು ಕಡೆಗಣಿಸದೆ, ಸಿಕ್ಕಿರುವ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದರು.

ಕಾಲೇಜಿನ ಆಡಳಿತಾಧಿಕಾರಿ ಪ್ರೊ. ಬಾಲಕೃಷ್ಣ ಮಾತನಾಡಿ ವಿದ್ಯಾರ್ಥಿಗಳು ನಮ್ಮ ದೇಶದ ಆಸ್ತಿ ನಿಮ್ಮ ವಿಚಾರಗಳನ್ನ ಇನ್ನು ಎತ್ತರಕ್ಕೆ ಬೆಳೆಸಿಕೊಳ್ಳುವಂತರಾಗಿ. ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಎನ್‌ಸಿಸಿ ನೇವಲ್ ವಿಂಗ್‌ನ ವಾರ್ಷಿಕ ನಿಯತಕಾಲಿಕೆ ನಾವಿಕ 2020ಬಿಡುಗಡೆ ಮಾಡಲಾಯಿತು. ಎನ್‌ಸಿಸಿ ನೇವಲ್ ವಿಂಗ್‌ನಲ್ಲಿ ಉತ್ತಮ ಕಾರ‍್ಯಕ್ಷಮತೆ ತೋರಿದ ಕೆಡೆಟ್ ಕೀರ್ತನಾ ಕೆ ಶೆಟ್ಟಿಗೆ ’ಕೆಡೆಟ್ ಕ್ಯಾಪ್ಟನ್’ ಆಗಿ ಬಡ್ತಿಯನ್ನು, ಕೆಡೆಟ್ ಶರಣ್ಯ ಎಂ ನಾರಾಯಣ್ ಮತ್ತು ವರುಣ್ ಜಿ ಶೆಟ್ಟಿರವರಿಗೆ ‘ಪೆಟ್ಟಿ ಆಫೀಸರ್’ ಆಗಿ ಬಡ್ತಿಯನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ನೌಕಾಪಡೆ ಅಧಿಕಾರಿಗಳಾದ ಸಿ.ಐ ಮನೋಜ್ ಚೈತ್ರಿ ಹಾಗೂ ರಾಹುಲ್ ಪವಾರ್ ಕಾಲೇಜಿನ ಎನ್‌ಸಿಸಿ ನೇವಲ್ ವಿಂಗ್‌ನ ಅಧಿಕಾರಿ ಸಬ್ ಎಲ್‌ಟಿ ನಾಗರಾಜ್ ಎಂ ಉಪಸ್ಥಿತರಿದ್ದರು. ಕಾರ‍್ಯಕ್ರಮವನ್ನು ಸುಧಾ ನಿರೂಪಿಸಿ, ಚಂದನಾ ಸ್ವಾಗತಿಸಿ, ವಿಜೇತ್ ಶೆಟ್ಟಿ ವಂದಿಸಿದರು.

Exit mobile version