Kundapra.com ಕುಂದಾಪ್ರ ಡಾಟ್ ಕಾಂ

ಗುಜ್ಜಾಡಿ ಗ್ರಾ.ಪಂ ಎದುರು ಸಿಪಿಎಂ ಪ್ರತಿಭಟನೆ

ಗಂಗೊಳ್ಳಿ: ಗುಜ್ಜಾಡಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿಯಲ್ಲಿ ಕೆಲಸ ನಿರ್ವಹಿಸಿದ ಬಹಳಷ್ಟು ಕೂಲಿಕಾರರಿಗೆ ಪಂಚಾಯತ್ ಕೂಲಿ ಹಣ ಪಾವತಿ ಮಾಡಿಲ್ಲ, ಕೂಡಲೇ ಕೆಲಸ ಮಾಡಿದ ಬಡಕೂಲಿಕಾರರಿಗೆ ವೇತನ ಪಾವತಿ ಮಾಡಬೇಕು, ಅಲ್ಲದೇ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಸಿಪಿಎಂ ಮುಖಂಡ ವೆಂಕಟೇಶಕೋಣಿ ಹೇಳಿದರು.

ಅವರು ಸಿಪಿಎಂ ಪಕ್ಷದ ಜನಾಂದೋಲನದ ಪ್ರತಿಭಟನೆಯ ಅಂಗವಾಗಿ ಗುಜ್ಜಾಡಿ ಗ್ರಾಮಪಂಚಾಯತ್ ಎದುರು ಪ್ರತಿಭಟನಾಕಾರರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಸಿಪಿಎಂ ಪಕ್ಷದ ಬೈಂದೂರು ವಲಯ ಕಾರ್ಯದರ್ಶಿ ಸುರೇಶ್‌ ಕಲ್ಲಾಗರ್ ಮಾತನಾಡಿ; ಗುಜ್ಜಾಡಿಯ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ನೂರಾರು ಜನರು ನಿವೇಶನ ರಹಿತರು ಅರ್ಜಿ ಸಲ್ಲಿಸಿದ್ದಾರೆ. ಪಂಚಾಯತ್‌ನವರು ಸರಕಾರಿ ಜಾಗ ಗುರುತಿಸಿ ಅರ್ಹ ಫಲಾನುಭವಿಗಳಿಗೆ ನ್ಯಾಯ ಒದಗಿಸಬೇಕು. ಇಲ್ಲಿನ ಜನಸಾಮಾನ್ಯರಿಗೆ ಕುಡಿಯುವ ನೀರು ಸಮರ್ಪಕ ದಾರಿ ಮುಂತಾದ ಮೂಲ ಸೌಕರ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರಾಜೀವ ಪಡುಕೋಣೆ, ಶೀನಪ್ಪ, ಶ್ರೀನಿವಾಸ ಪೂಜಾರಿ, ದಿನೇಶ್, ಗಂಗಾಧರ ಜಿ. ಸಂಜೀವ, ಶ್ಯಾಮಲ, ಮುತ್ತು ಉಪಸ್ಥಿತರಿದ್ದರು. ಅನಂತರ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.

Exit mobile version