Kundapra.com ಕುಂದಾಪ್ರ ಡಾಟ್ ಕಾಂ

ಆಳ್ವಾಸ್‌ನಲ್ಲಿ ಎನ್‌ಸಿಸಿ ಶಿಬಿರದ ಸಮಾರೋಪ ಸಮಾರಂಭ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಎನ್‌ಸಿಸಿ 18 ಕರ್ನಾಟಕ ಬೆಟಾಲಿಯನ್ ಮಂಗಳೂರು ವತಿಯಿಂದ ಆಳ್ವಾಸ್ ಕಾಲೇಜಿನಲ್ಲಿ ಆಯೋಜಿಸಿದ್ದ5 ದಿನಗಳ ಎನ್‌ಸಿಸಿ ಶಿಬಿರವು ಸಂಪನ್ನಗೊಂಡಿತು.

ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಹಾವೀರ ಕಾಲೇಜಿನ ಪ್ರಾಂಶುಪಾಲ ಮೇಜರ್ ರಾಧಾಕೃಷ್ಣರವರು ತಮ್ಮ 26 ವರ್ಷಗಳ ಎನ್‌ಸಿಸಿ ಅನುಭವ ಹಾಗೂ ಕಲಿತ ಶಿಸ್ತಿನ ಬಗ್ಗೆ ಕೆಡೆಟ್‌ಗಳ ಜತೆಗೆ ಹಂಚಿಕೊಂಡರು. ಸ್ವಾಮಿ ವಿವೇಕಾನಂದರ ಮಾತಿನಂತೆ ನಾವು ಗೆದ್ದರೆ ಮುನ್ನಡೆಸಬಹುದು, ಸೋತರೆ ಇನ್ನೊಬ್ಬರಿಗೆ ಮಾರ್ಗದರ್ಶನ ನೀಡಬಹುದು ಎಂಬುದನ್ನು ಅರಿತುಕೊಂಡು ಮುನ್ನಡೆಯಬೇಕೆಂದು ಎನ್‌ಸಿಸಿ ಕೆಡೆಟ್‌ಗಳನ್ನು ಹುರಿದುಂಬಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಸೋಸಿಯೇಟ್ ಎನ್‌ಸಿಸಿ ಆಫೀಸರ್ ಕ್ಯಾಪ್ಟನ್ ಡಾ. ರಾಜೇಶ್ ಬಿ ಮಾತನಾಡಿ, ಕೆಡೆಟ್‌ಗಳು ಸಮವಸ್ತ್ರದಲ್ಲಿರದಿದ್ದರೂ ತಮ್ಮ ಶಿಸ್ತು ಸಂಯಮಗಳನ್ನು ಮೀರಿ ನಡೆಯಬಾರದು. ಇದರಿಂದ ಭಾರತದ ಯುವಶಕ್ತಿಯಲ್ಲಿ ಅದ್ಭುತಗಳನ್ನು ನೋಡಲು ಸಾಧ್ಯ ಎಂದರು.

ಐದು ದಿನಗಳ ಶಿಬಿರದಲ್ಲಿ ಡ್ರಿಲ್, ನಕ್ಷೆ ಓದುವಿಕೆ, ದೂರ ನಿರ್ಣಯ, ರೈಫಲ್‌ನ ನಿರ್ವಹಣೆ, ಫೀಲ್ಡ್‌ಕ್ರಾಫ್ಟ್, ಬ್ಯಾಟಲ್‌ಕ್ರಾಫ್ಟ್, ಫೀಲ್ಡ್ ಸಿಗ್ನಲ್ಸ್, ವಿಪತ್ತು ನಿರ್ವಹಣೆ ಮುಂತಾದ ಪ್ರಾಯೋಗಿಕ ವಿಷಯಗಳಂದಿಗೆ ಮಿಲಿಟರಿ ಮತ್ತು ಶಸಸ್ತ್ರ ಪಡೆಗಳ ಇತಿಹಾಸ, ಆರೋಗ್ಯ ಮತ್ತು ನೈರ್ಮಲ್ಯತೆ ಹಾಗೂ ವ್ಯಕ್ತಿತ್ವ ವಿಕಸನ ತರಬೇತಿಯನ್ನು ನೀಡಲಾಯಿತು.

ಮಹಾವೀರ, ಧವಳಾ ಹಾಗೂ ಆಳ್ವಾಸ್ ಕಾಲೇಜಿನ ಆರ್ಮಿ ವಿಂಗ್‌ನ 172 ಕೆಡೆಟ್‌ಗಳು, 2 ಅಸೋಸಿಯೇಟ್ ಎನ್‌ಸಿಸಿ ಆಫಿಸರ್‌ಗಳು ಶಿಬಿರದಲ್ಲಿ ಭಾಗವಹಿಸಿದ್ದರು. 18 ಬಿಎನ್‌ನ ಪಿಐ ಸಿಬ್ಬಂದಿಗಳಾದ ಹವಾಲ್ದಾರ್ ಕೆಂಚಪ್ಪ, ಹವಾಲ್ದಾರ್ ಸುನಿ ಎನ್, ಸುಬೇದಾರ್ ಕುಲದೀಪ್ ಸಿಂಗ್, ಸುಬೇದಾರ್ ವಿಠ್ಠಲ್ ಲಗಾಲಿ ಉಪಸ್ಥಿತರಿದ್ದರು. ಕೆಡೆಟ್ ವೈಷ್ಣವಿ ಚೌಹಣ್ ನಿರೂಪಿಸಿ, ಕೆಡೆಟ್ ಲಾವಣ್ಯ ಸ್ವಾಗತಿಸಿ, ಕೆಡೆಟ್ ಜೆಸ್ಸಿಕಾ ಗ್ರೇಸ್ ವಂದಿಸಿದರು.

Exit mobile version