Kundapra.com ಕುಂದಾಪ್ರ ಡಾಟ್ ಕಾಂ

ಕೊಲ್ಲೂರು ಶ್ರೀ ಮೂಕಾಂಬಿಕೆಗೆ ನಾಗಾಭರಣ ಅರ್ಪಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಪ್ರತಿದಿನ ರಾತ್ರಿ ನಡೆಯುವ ಕಷಾಯ ಮಂಗಳಾರತಿ ಸೇವೆ ದೇವಿ ಉದ್ಭವ ಮೂರ್ತಿಗೆ ತೊಡಿಸುವ ಬೆಳ್ಳಿಯ ನಾಗಾಭರಣಕ್ಕೆ ₹ 12 ಲಕ್ಷ ವೆಚ್ಚದಲ್ಲಿ ಚಿನ್ನದ ಲೇಪನವನ್ನು ಮಾಡಿ  ಅರ್ಪಿಸಲಾಯಿತು.

ದೇವಿಯ ಭಕ್ತರಾಗಿರುವ ಬೆಂಗಳೂರಿನ ಉದ್ಯಮಿ ವಿಜಯಕುಮಾರ ರೆಡ್ಡಿ ಅವರು ಬೈಂದೂರಿನ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅವರ ಸಲಹೆಯಂತೆ ಈ ಸೇವೆಯನ್ನು ಮಾಡಿದ್ದಾರೆ. ದೇವಸ್ಥಾನದಲ್ಲಿ ನಿತ್ಯ ಪೂಜೆಗೆ ಬಳಕೆಯಾಗುತ್ತಿದ್ದ ಬೆಳ್ಳಿಯ ನಾಗಾಭರಣಕ್ಕೆ ಅಂದಾಜು 201 ಗ್ರಾಂ ತೂಕದಲ್ಲಿ ಚಿನ್ನದ ಲೇಪನ ಮಾಡಲಾಗಿದೆ. 3 ದಿನಗಳ ಅವಧಿಯಲ್ಲಿ ದೇಗುಲದ ಪ್ರಾಂಗಣದಲ್ಲಿ ಮಂಗಳೂರಿನ ಚಿನ್ನದ ಕೆಲಸಗಾರರಿಂದ ಲೇಪನ ಕಾರ್ಯ ನಡೆದಿದೆ.

ಬೈಂದೂರು ಶಾಸಕರು ಬಿ.ಎಂ.ಸುಕುಮಾರ ಶೆಟ್ಟಿ ಮಾತನಾಡಿ, ಎಷ್ಟೇ ತೂಕದ ಚಿನ್ನ ನೀಡಿದರೂ, ಪ್ರತಿ ನಿತ್ಯ ದೇವರ ಸೇವೆಗೆ ಬಳಕೆಯಾಗುವುದಿಲ್ಲ. ನಾಗಾಭರಣಕ್ಕೆ ಚಿನ್ನದ ಲೇಪನ ನೀಡಿರುವುದರಿಂದ ವಿಜಯ್ಕುಮಾರ ರೆಡ್ಡಿ ಅವರಿಗೆ ದೇವಿಯ ನಿತ್ಯ ಸೇವೆಯ ಭಾಗ್ಯ ದೊರೆಕಿದೆ ಎಂದು ತಿಳಿಸಿದರು.

ಕ್ಷೇತ್ರದ ಅರ್ಚಕ ಎನ್.ಗೋವಿಂದ ಅಡಿಗ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ನಡೆದವು. ವಿಜಯಕುಮಾರ ರೆಡ್ಡಿ, ಪತ್ನಿ ಸುಧಾ ರೆಡ್ಡಿ, ಪುತ್ರ ಅಕ್ಷಯ್ ವಿ. ರೆಡ್ಡಿ, ಕಾರ್ಯನಿರ್ವಹಣಾಧಿಕಾರಿ ಎಸ್.ಪಿ.ಬಿ. ಮಹೇಶ್, ಮೂರ್ತಿ ಕಾಳಿದಾಸ್ ಭಟ್, ಕ್ಷೇತ್ರ ಪುರೋಹಿತರಾದ ನರಸಿಂಹ ಭಟ್, ಸುರೇಶ್ ಭಟ್, ಅಧೀಕ್ಷಕ ರಾಮಕೃಷ್ಣ ಅಡಿಗ, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ರಮೇಶ್ ಗಾಣಿಗ ಕೊಲ್ಲೂರು, ದೇಗುಲದ ಸಾರ್ವಜನಿಕ ಸಂಪರ್ಕಾಧಿಕಾರಿ ಜಯಕುಮಾರ ಇದ್ದರು.

Exit mobile version