Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ಸರಿಪಡಿಸಲು ಆಗ್ರಹಿಸಿ ಪ್ರತಿಭಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಈ ಭಾಗದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ– 66ರಲ್ಲಿನ ಚತುಷ್ಪಥ ಕಾಮಗಾರಿಯ ಸ್ಥಿತಿ- ಗತಿಯನ್ನು ನೋಡಿದರೆ ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆ ಕಂಪನಿ ಸರ್ಕಾರಗಳಿಗಿಂತಲೂ ಬಲವಾಗಿ ಬೆಳೆದಿದೆಯೇ ಎನ್ನುವ ಭಾವನೆ ಬಲವಾಗುತ್ತಿದೆ. ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಹಾಗೂ ದೊಡ್ಡ ವೈಫಲ್ಯದಿಂದಾಗಿ ಇಲ್ಲಿನ ಜನ ನಿತ್ಯ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ ಎಂದು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸ್ತ್ರಿ ಸರ್ಕಲ್‍ನಿಂದ ವಿನಾಯಕವರೆಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿನ ಬಸ್ರೂರು ಮೂರುಕೈ ಹಾಗೂ ಟಿ.ಟಿ ರಸ್ತೆಯ ಸಮೀಪ ನಿರ್ಮಾಣವಾಗಿರುವ ಅಂಡರ್ಪಾಸ್ ತೆರವು ಹಾಗೂ ಕೆಇಬಿ ಸಮೀಪದ ಬೊಬ್ಬರ್ಯನ ಕಟ್ಟೆ ಬಳಿ ಪಾದಚಾರಿ ಸಂಚಾರಕ್ಕಾಗಿ ಜೀಬ್ರಾ ಕ್ರಾಸಿಂಗ್ ನಿರ್ಮಾಣಕ್ಕೆ ಒತ್ತಾಯಿಸಿ ತಾಲ್ಲೂಕು ಡಿವೈಎಫ್ಐ ನೇತೃತ್ವದಲ್ಲಿ, ತಾಲ್ಲೂಕು ಆಟೊ ರಿಕ್ಷಾ ಮತ್ತು ವಾಹನ ಚಾಲಕರ ಸಂಘ (ಸಿಐಟಿಯು ) ಹಾಗೂ ವಿವಿಧ ಸಂಘಟನೆಳು ಜತೆಯಾಗಿ ನಡೆಸಿದ ಪ್ರತಿಭಟನೆ ಹಾಗೂ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.

ಅಂಡರ್ ಪಾಸ್ಗಳನ್ನು ಸಂಚಾರಕ್ಕೆ ಮುಕ್ತ ಮಾಡದೆ ಇರುವುದರಿಂದ, ಶಾಸ್ತ್ರಿ ಸರ್ಕಲ್ನಿಂದ ವಿನಾಯಕವರೆಗೆ ಹೆದ್ದಾರಿಯಲ್ಲಿ ತಡೆಗೋಡೆ ನಿರ್ಮಾಣವಾಗಿದೆ. ಹೆದ್ದಾರಿ ಅಕ್ಕ-ಪಕ್ಕದ ಪ್ರದೇಶಗಳಲ್ಲಿ ಶಾಲಾ, ಕಾಲೇಜು ಗಳು, ಆಸ್ಪತ್ರೆಗಳು, ಸರ್ಕಾರಿ ಕಚೇರಿಗಳು, ಹೋಟೆಲ್ಗಳು, ಕಲ್ಯಾಣ ಮಂಟಪ, ಜನವಸತಿ ಪ್ರದೇಶಗಳಿದ್ದು, ಇಲ್ಲಿಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೋಗುವುದಾದರೂ ಹೇಗೆ ಎನ್ನುವ ಕನಿಷ್ಠ ಜ್ಞಾನವೂ ಸಂಬಂಧಪಟ್ಟವರಿಗೆ ಇಲ್ಲ. ವಾಹನಗಳು ಅನಗತ್ಯ ಇಂಧನ ವ್ಯಯ ಮಾಡಿ ಕಿ.ಮೀ ದೂರವನ್ನು ಸುತ್ತುಹಾಕಿ ಬರಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.

ಪ್ರಾಸ್ತಾವಿಕ ಮಾತನಾಡಿದ ಡಿವೈಎಫ್ಐ ತಾಲ್ಲೂಕು ಘಟಕದ ಅಧ್ಯಕ್ಷ ರಾಜೇಶ ವಡೇರಹೋಬಳಿ, ಬೊಬ್ಬರ್ಯನ ಕಟ್ಟೆ ದೇವಸ್ಥಾನ, ಶಾಲೆ, ಹೈಸ್ಕೂಲ್, ಕಾಲೇಜು, ವಸತಿಗೃಹ, ಕೆಇಬಿ, ಎಲ್ಐಸಿ, ಆಸ್ಪತ್ರೆ, ಬಾಲಭವನ, ಗಾಂಧಿ ಪಾರ್ಕ್ ಸೇರಿದಂತೆ ನಿತ್ಯ ಜನಸಂಚಾರ ಇರುವ ಅನೇಕ ಕಚೇರಿಗಳಿರುವ ಈ ಪ್ರದೇಶಕ್ಕೆ ಬರಬೇಕಾದರೆ, ಸುತ್ತಿ ಬಳಸಿ ಬರಬೇಕಾಗುತ್ತದೆ. ಈ ಅವೈಜ್ಞಾನಿಕ ಕಾಮಗಾರಿಯಿಂದ ಸಾರ್ವಜನಿಕರು, ವಿದ್ಯಾರ್ಥಿಗಳು, ರಿಕ್ಷಾ ಚಾಲಕರು ಪ್ರತಿ ಕ್ಷಣ ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದು ದೂರಿದರು.

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಕೆ.ಶಂಕರ, ತಾಲ್ಲೂಕು ಸಂಚಾಲಕ ಎಚ್.ನರಸಿಂಹ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಮಾತನಾಡಿದರು. ಕುಂದಾಪುರ ತಾಲ್ಲೂಕು ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘ (ಸಿಐಟಿಯು ) ಪ್ರಧಾನ ಕಾರ್ಯದರ್ಶಿ ರಾಜು ದೇವಾಡಿಗ, ಪುರಸಭೆ ಸದಸ್ಯ ಚಂದ್ರಶೇಖರ ಖಾರ್ವಿ, ಸಿಐಟಿಯು ಸಂಘಟನೆಯ ಮುಖಂಡರಾದ ಮಹಾಬಲ ವಡೇರಹೋಬಳಿ, ಬಾಲಕೃಷ್ಣ ಶೆಟ್ಟಿ, ಸಮುದಾಯ ಸಂಘಟನೆಯ ಬಾಲಕೃಷ್ಣ ಕೆ., ಜನವಾದಿ ಮಹಿಳಾ ಸಂಘಟನೆಯ ಆರತಿ, ಶೀಲಾವತಿ, ಆದಿವಾಸಿ ಸಂಘಟನೆಯ ಶ್ರೀಧರ ನಾಡ, ನಾಗರತ್ನ ನಾಡ, ಡಿವೈಎಫ್ಐ ಸಂಘಟನೆಯ ಗಣೇಶ ದಾಸ್, ಕಿರಣ್, ರವಿ, ಬೀಡಿ ಕಾರ್ಮಿಕರ ಸಂಘಟನೆಯ ಬಲ್ಕಿಸಾ ಬಾನು ಹಾಗೂ ಚಂದ್ರಶೇಖರ ವಿ. ಇದ್ದರು.

Exit mobile version