Kundapra.com ಕುಂದಾಪ್ರ ಡಾಟ್ ಕಾಂ

ಕರಾವಳಿ ಫ್ರೆಂಡ್ಸ್ ಬೆಳ್ಳಿ ಹಬ್ಬ ಸಂಭ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಂದಿನ ದಿನದಲ್ಲಿ ಯುವಕರಿಂದ ಹಾದಿ ತಪ್ಪುವ ಕೆಲಸಗಳಾಗುತ್ತಿದೆ. ಇತಂಹ ಕಾಲಘಟ್ಟದಲ್ಲಿ ಸಾರ್ವಜನಿಕರ ಸೇವೆಗಾಗಿ ಕರಾವಳಿ ಫ್ರೆಂಡ್ಸ್ ಎಂಬ ಯುವ ಸಂಘಟನೆ ಸಮಾಜಕ್ಕೆ ಮಾದರಿ ಕೆಲಸಗಳನ್ನು ನೀಡುವ ಮೂಲಕ ಬೀಚ್ ಗಾರ್ಡನ್ ಕೊಡುಗೆ ನೀಡಿರುವುದು ಶ್ಲಾಘನೀಯ ಕಾರ್ಯವಾಗಿದೆ. ಈ ಸಂಘಟನೆ ನಮ್ಮ ಭಾಗದ ದೊಡ್ಡ ಆಸ್ತಿ ಎಂದು ಬೀಜಾಡಿ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ ಹೇಳಿದರು.

ಅವರು ಬೀಜಾಡಿ ಕರಾವಳಿ ಫ್ರೆಂಡ್ಸ್ ಇವರ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಅಂಗವಾಗಿ ದಾನಿಗಳ ಸಹಕಾರದಿಂದ ಕೊಡುಗೆಯಾಗಿ ನೀಡಿದ ಬೀಚ್ ಗಾರ್ಡನ್ ಉದ್ಘಾಟಿಸಿ ಮಾತನಾಡಿದರು.

ಉದ್ಯಮಿ ಸುರೇಶ್ ಬೆಟ್ಟಿನ್ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ವಲಯ ಅರಣ್ಯಧಿಕಾರಿ ಲೋಹಿತ್ ಸಸಿನೆಟ್ಟು ವನಪಾರ್ಕ್‌ಗೆ ಚಾಲನೆ ನೀಡಿದರು. ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಳದ ಆಡಳಿತ ಮಂಡಳಿ ಮಾಜಿ ಸದಸ್ಯ ಅಶೋಕ್ ಪೂಜಾರಿ ವಡ್ಡಿನಮನೆ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಬೀಜಾಡಿ ಗ್ರಾಮ ಪಂಚಾಯತ್ ಸದಸ್ಯ ಶೇಖರ ಚಾತ್ರಬೆಟ್ಟು, ಕುಂದಾಪುರ ಸನ್‌ರೈಸ್ ರೋಟರಿ ಅಧ್ಯಕ್ಷೆ ಪೂರ್ಣಿಮಾ ಭವಾನಿ ಶಂಕರ್, ಕುಂದಾಪುರ ಪೊಲೀಸ್ ಠಾಣಾಧಿಕಾರಿ ಸದಾಶಿವ ಗೌವರೋಜಿ, ಕುಂದಾಪುರ ಕ್ಷೀನ್ ಪ್ರೋಜೆಕ್ಟ್ ಮುಖ್ಯಸ್ಥ ಶಿವರಾಮ ಶೆಟ್ಟಿ, ಕರಾವಳಿ ಫ್ರೆಂಡ್ಸ್ ಅಧ್ಯಕ್ಷ ಲೊಕೇಶ್ ಬೀಜಾಡಿ, ಗೌರವಧ್ಯಕ್ಷ ಸುರೇಂದ್ರ ಬೀಜಾಡಿ ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸ್ಥಳೀಯ ವೈದ್ಯರಾದ ಡಾ. ಶ್ರೀಪಾದ್ ಹೆಗ್ಡೆ ಇವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸ್ಥಳೀಯ ಮಕ್ಕಳಿಗೆ ಗಾಳಿಪಟ ಉತ್ಸವ ಮತ್ತು ಸ್ಥಳೀಯರಿಗೆ ಹಗ್ಗ ಜಗ್ಗಾಟ ಸ್ಪರ್ಧೆ, ಕಾರ್ಯಕ್ರಮದ ಅಂಗವಾಗಿ ಸಂಗೀತ ಸುಧೆ, ಕುಂದಗನ್ನಡ ಹಾಸ್ಯಮಯ ನಾಟಕ ಕೋಳಿಕಳ್ಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಬಾಬಣ್ಣ ಪೂಜಾರಿ ಸ್ವಾಗತಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು. ದಿನೇಶ್ ವಂದಿಸಿದರು.

Exit mobile version