Kundapra.com ಕುಂದಾಪ್ರ ಡಾಟ್ ಕಾಂ

ಮೀನುಗಾರರ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ: ಸಚಿವ ಎಸ್. ಅಂಗಾರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕರ್ನಾಟಕ ರಾಜ್ಯ ಮೀನುಗಾರಿಕೆ ಹಾಗೂ ಬಂದರು ಸಚಿವರಾಗಿ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಪ್ರಥಮ ಬಾರಿ ಆಗಮಿಸಿದ ಎಸ್. ಅಂಗಾರ ಇವರಿಗೆ ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘ ಉಪ್ಪುಂದ ಇವರ ವತಿಯಿಂದ ಉಪ್ಪುಂದ ಮಾತೃಶ್ರೀ ಸಭಾಭವನದಲ್ಲಿ ಅಭಿನಂದಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವ ಮೀನುಗಾರಿಕೆ ಸಚಿವ ಎಸ್. ಅಂಗಾರ,ನಾನು ಸಾಮಾನ್ಯ ಕುಟುಂಬದಲ್ಲಿ ಜನಿಸಿ, ಕಷ್ಟಗಳನ್ನು ನೋಡಿ ಈ ಸ್ಥಾನಕ್ಕೇರಿದ್ದೇನೆ. ಸಾಮಾನ್ಯ ಜನರ ಕಷ್ಟಗಳು, ನೋವುಗಳ ಅರಿವು ನನಗಿದೆ. ಸಮಾಜ ಋಣ ತೀರಿಸಲು ನನ್ನ ಜವಾಬ್ದಾರಿ ಅರಿತು ಕೆಲಸ ನಿರ್ವಹಿಸುತ್ತೇನೆ. ಮೀನುಗಾರರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಎ. ಆನಂದ ಖಾರ್ವಿ ಮಾತನಾಡಿ, ಕಳೆದ ಎರಡು ತಿಂಗಳಿಂದ ಸೀಮೆಎಣ್ಣೆ ಸಿಗುತ್ತಿಲ್ಲ, 300ಲೀ ನೀಡುವಲ್ಲಿ 170ಲೀ ಮಾತ್ರ ಸಿಗುತ್ತಿದೆ, 400ಲೀ ಸೀಮೆಎಣ್ಣೆ ಬೇಡಿಕೆ ಇದೆ. ಸೀಮಿತ ಮೀನುಗಾರರಿಗೆ ಮಾತ್ರ ಇಂಜಿನ್ ಸಬ್ಸಿಡಿ ನೀಡಲಾಗಿದೆ. ಇದು ಎಲ್ಲಾ ಅರ್ಹ ಫಲಾನುಭವಿಗಳಿಗೆ ಸಿಗುವಂತೆ ಸಚಿವರು ಗಮನ ಹರಿಸಬೇಕು. ಕೊಡೇರಿ ಬಂದರಿನ ಎರಡು ಪ್ರದೇಶಗಳ ಜೆಟ್ಟಿ ವಿಸ್ತರಣೆ, ಈ ಭಾಗದ ಮೀನುಗಾರಿಕಾ ರಸ್ತೆ ದುರಸ್ತಿ, ಡ್ರಜಿಂಗ್ ಸಮಸ್ಯೆಗಳನ್ನು ಸರಿಪಡಿಸಬೇಕಿದೆ, ಮೀನುಗಾರರ ಸಾಮನ್ನಾ ಪೂರ್ಣ ಪ್ರಮಾಣದಲ್ಲಿ ಅಗಿಲ್ಲ. ಇದರ ತಾಂತ್ರಿಕ ದೋಷಗಳನ್ನು ನಿವಾರಿಸಬೇಕು, ಶೂನ್ಯ ಬಡ್ಡಿದರದ ಸಾಲ ಸಿಗುತ್ತಿಲ್ಲ. ಇವುಗಳ ಬಗ್ಗೆ ತುರ್ತು ಗಮನ ಹರಿಸಿಬೇಕು ಎಂದು ಸಮಸ್ತ ಮೀನುಗಾರರ ಪರವಾಗಿ ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಸಚಿವರು, ಮೀನುಗಾರರ ಸೀಮೆಎಣ್ಣೆ ಸಮಸ್ಯೆಗೆ 60 ಸಾವಿರ ಸೀಮೆಎಣ್ಣೆ ಬಿಡುಗಡೆಗೆ ಅದೇಶ ನೀಡಲಾಗಿದೆ. ಹೆಚ್ಚುವರಿ ಸೀಮೆಎಣ್ಣೆ ಬೇಡಿಕೆಯನ್ನು ಕೇಂದ್ರ ಸರಕಾರದೊಂದಿಗೆ ಚರ್ಚಿಸಿ ಕ್ರಮಕೈಗೊಳಲಾಗುವುದು. ಸರಕಾರದ ಯೋಜನಗಳು ಜನರಿಗೆ ಸುಲಭವಾಗಲಿ ದೊರಕಲು ಅದರೊಳಗಿನ ನೂನ್ಯತೆಗಳನ್ನು ಸರಿಪಡಿಸಿ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ. ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿ. ಪಂ ಸದಸ್ಯ ಸುರೇಶ ಬಟ್ವಾಡಿ, ಬಿಜೆಪಿ ಮಂಡಲ ಅಧ್ಯಕ್ಷ ನೆಲ್ಯಾಡಿ ದೀಪಕ್‌ಕುಮರ್ ಶೆಟ್ಟಿ, ವಲಯ ನಾಡದೋಣಿ ಮೀನುಗಾರರ ಸಂಘದ ಮಾಜಿ ಅಧ್ಯಕ್ಷ ನವೀನಚಂದ್ರ ಉಪ್ಪುಂದ, ಮೀನುಗಾರಿಕಾ ಇಲಾಖೆಯ ನಿರ್ದೇಶಕ ರಾಮಾಚಾರಿ, ಜಂಟಿ ನಿರ್ದೇಶಕ ತಿಪ್ಪೆಸ್ವಾಮಿ, ಅಭಿಯಂತರ ಚಂದ್ರಶೇಖರ್, ಕೆಎಫ್‌ಡಿಸಿ ಎಂಡಿ ದೊಡ್ಡಮನಿ ಉಪಸ್ಥಿತರಿದ್ದರು. ಪುರುಷೋತ್ತಮ ಖಾರ್ವಿ ಕಾರ್ಯಕ್ರಮ ನಿರ್ವಹಿಸಿದರು.

ಸಚಿವ ಎಸ್. ಅಂಗಾರ, ಬಿಜೆಪಿ ಕಚೇರಿಯಲ್ಲಿ ಶಾಸಕರು ಹಾಗೂ ಕಾರ್ಯಕರ್ತರೊಡನೆ ಸಮಾಲೋಚಿಸಿದರು. ನಂತರ ಜೀರ್ಣೋದ್ಧಾರಗೊಂಡು ಫೆ.07ರಂದು ಲೋಕಾರ್ಪಣೆಗೊಳ್ಳಲಿರುವ ಅರಮಕೋಡಿ ಶ್ರೀ ಈಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಅಲ್ಲಿಂದ ಕೋಡೇರಿ ಬಂದರು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Exit mobile version