Kundapra.com ಕುಂದಾಪ್ರ ಡಾಟ್ ಕಾಂ

ಯೋಚಿತ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಹಠ ನಮ್ಮಲ್ಲಿ ಬೆಳೆಸಿಕೊಳ್ಳಬೇಕು: ಜಯಪ್ರಕಾಶ್ ರಾವ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಆಳ್ವಾಸ್ ಎಂಬಿಎ ವಿಭಾಗದ ವತಿಯಿಂದ ಅತಿಥಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ಐಆರ್‌ಎಸ್ ಅಧಿಕಾರಿ ಜಯಪ್ರಕಾಶ್ ರಾವ್ ಮಾತನಾಡಿ, ಯೋಚಿತ ಯೋಜನೆಗಳನ್ನು ಕಾರ‍್ಯರೂಪಕ್ಕೆ ತರುವ ಹಠ ನಮ್ಮಲ್ಲಿ ಬೆಳೆಸಿಕೊಳ್ಳಬೇಕು. ನಮ್ಮ ಜನನಾಯಕರನ್ನು ಆಯ್ಕೆ ಮಾಡುವಾಗ ಅವರು ತಮ್ಮ ಕ್ಷೇತ್ರದಲ್ಲಿ ಯಾವ ಪ್ರಮಾಣದ ಅಭಿವೃದ್ಧಿ ಮಾಡುತ್ತಾರೆ ಎನ್ನುವ ಆಧಾರದ ಮೇಲೆ ಆಯ್ಕೆ ಮಾಡಬೇಕೆ ಹೊರತು ಜಾತಿ, ಧರ್ಮ ನೋಡಿ ಆಯ್ಕೆ ಮಾಡಬಾರದು. ನಮ್ಮ ಭವಿಷ್ಯ ನಮ್ಮ ಕೈಯಲ್ಲಿದೆ ಅದನ್ನು ನಾವೇ ರೂಪಿಸಬೇಕು ಎಂದರು. ಔಪಚಾರಿಕ ಶಿಕ್ಷಣದಲ್ಲಿ ಕಲಿತ ವಿದ್ಯೆಯನ್ನು ನಾವು ಜೀವನದಲ್ಲಿ ಎಷ್ಟು ಅಳವಡಿಸಿಕೊಳ್ಳುತ್ತವೆಯೋ ಅಷ್ಟು ಉನ್ನತಿಯನ್ನು ಹೊಂದಲು ಸಾಧ್ಯ. ನಮಗೆ ಶಿಕ್ಷಣ ನೀಡಿದ ಶಿಕ್ಷಕರಿಗೆ, ಆಹಾರ ಪದಾರ್ಥಗಳನ್ನು ನೀಡುವ ರೈತರಿಗೆ ಮತ್ತು ದೇಶ ಕಾಯುವ ಯೋಧರಿಗೆ ನಾವು ಸದಾ ಕೃತಜ್ಞರಾಗಿರಬೇಕು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟ್ ವಿವೇಕ್ ಆಳ್ವ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ ಎಂಬಿಏ ವಿಭಾಗದ ಸಂಯೋಜಕಿ ಡಾ. ಕ್ಲಾರೆಟ್ ಮೆಂಡೊನ್ಸಾ, ಸಹಾಯಕ ಪ್ರಾಧ್ಯಪಕರಾದ ಡಾ ಅಶೋಕ್ ಡಿಸೋಜಾ, ಅನಂತ ಶಯನ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಪಕಿ ಪ್ರಿಯಾ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿದರು.

Exit mobile version