Kundapra.com ಕುಂದಾಪ್ರ ಡಾಟ್ ಕಾಂ

ಆಕಾಶವಾಣಿ ಕಲೆ, ಸಂಸ್ಕೃತಿ ಪ್ರತಿಬಿಂಬಿಸುವ ಮಾಧ್ಯಮವಾಗಿದೆ: ಚಂದ್ರಶೇಖರ್ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಆಕಾಶವಾಣಿಯು ಸಮಾಜದಲ್ಲಿ ಬೆರೆತು, ಆಯಾ ಪ್ರದೇಶದ ಕಲೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮಾಧ್ಯಮವಾಗಿ ಜನರಿಗೆ ಹತ್ತಿರವಾಗಿದೆ ಎಂದು ಆಕಾಶವಾಣಿ ಹಾಗೂ ದೂರದರ್ಶನದ ಇಂಜಿನಿಯರ್‌ಗಳ ನೌಕರರ ಸಂಘದ ವಕ್ತಾರ ಚಂದ್ರಶೇಖರ್ ಶೆಟ್ಟಿ ಹೇಳಿದರು.

ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ವತಿಯಿಂದ ವಿಶ್ವರೇಡಿಯೋ ದಿನದ ಪ್ರಯುಕ್ತ ಆಯೋಜಿಸಲಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ರೇಡಿಯೋ – ಏನ್‌ಎವರ್‌ಗ್ರೀನ್ ಆಡಿಯೋ ವಿಷಯದ ಹಿನ್ನಲೆಯಲ್ಲಿ ಮಾತನಾಡಿದ ಅವರು, ಕಾಲಕ್ಕೆ ತಕ್ಕಂತೆ ರೇಡಿಯೋ ಸಹ ಬದಲಾಗುತ್ತಿದೆ. ಈ ಇಂಟರ್ನೆಟ್ ಯುಗದಲ್ಲಿ ರೇಡಿಯೋ ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ. ಹೊರದೇಶದ ಸ್ಟೇಶನ್‌ಗಳನ್ನೂ ನಾವು ನಮ್ಮ ಮನೆಯಲ್ಲೆ ಕುಳಿತು ಕೇಳಬಹುದಾಗಿದೆ ಎಂದರು.

ಟಿವಿ ಬಂದಾಗ ರೇಡಿಯೋತನ್ನ ಮಹತ್ವ ಕಳೆದುಕೊಳ್ಳುತ್ತದೆ ಎಂದು ಹಲವರು ಭಾವಿಸಿದ್ದರು. ಆದರೆ, ಪ್ರಸ್ತುತದಲ್ಲಿ ಟಿವಿ ಚಾನೆಲ್‌ಗಳು ತಮ್ಮ ನಂಬಿಕೆ ಹಾಗೂ ವಿಶ್ವಾಸವನ್ನು ಕಳೆದುಕೊಳ್ಳುತ್ತಿವೆಯೇ ವಿನಃ ಆಕಾಶವಾಣಿ ಅಲ್ಲ. ಖಾಸಗೀ ರೇಡಿಯೋ ಸ್ಟೇ?ನ್‌ಗಳು ತಮ್ಮ ಅಸ್ತಿತ್ವ ಉಳಿಸಲು ಪರದಾಡುತ್ತಿವೆ ಎಂದು ಹೇಳಿದರು.

ಕಾರ‍್ಯಕ್ರಮದಲ್ಲಿ ರೇಡಿಯೋ ನಡೆದು ಬಂದ ದಾರಿಯನ್ನು ವಿವರಿಸಿದ ಅವರು, ರೇಡಿಯೋ ಪ್ರಾರಂಭವಾದ ಕಾಲಘಟ್ಟದಲ್ಲಿ ಬಳಸಲ್ಪಡುತ್ತಿದ್ದ ಸಾಧನಗಳಾದ ಆಲ್ಟ್ರಪೋರ್ಟೆಬಲ್ ರೇಕಾರ್ಡ ಪ್ಲೇಯರ್, ಸ್ಟೂಡರ್, ಎಲ್‌ಪಿ ಪ್ಲೇಯರ್, ವಾಲ್ವ್‌ಗಳನ್ನು ತೋರಿಸಿ ವಿವರಿಸಿದರು.

ಕಾರ‍್ಯಕ್ರಮದಲ್ಲಿ ಆಳ್ವಾಸ್ ನ್ಯೂಸಿಯಂನ ಸಂಯೋಜಕ ಶ್ರೀಕರ ಭಂಡಾರ್ಕರ್, ಮಂಗಳೂರು ಆಕಾಶವಾಣಿಯ ಬ್ರಾಡ್‌ಕಾಸ್ಟ್ ಇಂಜಿನಿಯರ್ ಮೊಹಮ್ಮದ್ ಶನಾಝ್ ಕೆ, ಸ್ನಾತಕೋತ್ತರ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ, ಸಹಾಯಕ ಪ್ರಾಧ್ಯಪಕಿ ಡಾ. ಸಫಿಯಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪ್ರಥ್ವಿನಿ ಕಾರ್ಯಕ್ರಮವನ್ನು ನಿರೂಪಿಸಿದರು.

Exit mobile version