Kundapra.com ಕುಂದಾಪ್ರ ಡಾಟ್ ಕಾಂ

ರತ್ತೂಬಾಯಿ ಜನತಾ ಪ್ರೌಢಶಾಲೆ: ಸುವರ್ಣ ಸೌರಭ ಸ್ಮರಣ ಸಂಚಿಕೆ ಬಿಡುಗಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕನ್ನಡ ಮಾಧ್ಯಮ ಶಾಲೆಯನ್ನು ನಡೆಸುವುದು ಮತ್ತು ಸುವರ್ಣ ಸಂಭ್ರಮ ಆಚರಿಸಿ ಐವತ್ತು ವರ್ಷಗಳ ಇತಿಹಾಸದಲ್ಲಿ ದಾಖಲಿಸುವುದು ಸುಲಭದ ಮಾತಲ್ಲ. ಸ್ಮರಣ ಸಂಚಿಕೆ ಸದಾ ನೆನಪಿನಲ್ಲಿ ಉಳಿಯುವಂತೆ ಮಾಡಿದ ಶಿಕ್ಷಕರ ಕಾರ್ಯ ಶ್ಲಾಘನೀಯ ಎಂದು ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು.

ಅವರು ಗುರುವಾರ ಇಲ್ಲಿನ ರತ್ತೂಬಾಯಿ ಜನತಾ ಪ್ರೌಢಶಾಲೆಯ ಸುವರ್ಣ ಸೌರಭ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ ಸ್ವಕಲಿಕೆ, ವೇಗದ ಕಲಿಕೆ, ಸಾಮರ್ಥ್ಯ ಆಧಾರದ ಕಲಿಕೆ ಮೂಲಕ ಪರಿಣಾಮಕಾರಿ ಶಿಕ್ಷಣ ಹಾಗೂ ಮಕ್ಕಳು ಸಂಪೂರ್ಣ ತೊಡಗಿಸಿಕೊಳ್ಳುವಿಕೆ ಸಾಧ್ಯವಿದೆ ಎಂದ ಅವರು ಕರಾವಳಿಯ ಜಿಲ್ಲೆಗಳ ಶಾಲೆಯ ಶಿಕ್ಷಕರ ಬದ್ಧತೆ ದೊಡ್ಡದಿರುವುದರಿಂದಲೇ ಜಿಲ್ಲೆ ಶಿಕ್ಷಣದಲ್ಲಿ ಮುಂಚೂಣಿಯಲ್ಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ , ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ ಅವರು ಮಾತನಾಡಿ ಶಿಕ್ಷಣದ ಗುಣಮಟ್ಟದಲ್ಲಿ ಯಾವುದೇ ರಾಜಿಯಿಲ್ಲದೇ ಉತ್ತಮ ಫಲಿತಾಂಶ ನೀಡುವಲ್ಲಿ ರತ್ತೂಬಾಯಿ ಜನತಾ ಪ್ರೌಢಶಾಲೆ ಸಫಲವಾಗಿದೆ ಎಂದ ಅವರು ಸುವರ್ಣ ಸಂಭ್ರಮವನ್ನು ನೆನಪಿನಲ್ಲಿ ಉಳಿಯುವಂತೆ ಆಯೋಜಿಸಲು ನೆರವಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಸುವರ್ಣ ಸಂಭ್ರಮ ಸಮಿತಿಯ ಕಾರ್ಯಾಧ್ಯಕ್ಷ ಎಸ್. ರಾಜು ಪೂಜಾರಿ, ಉದ್ಯಮಿ ಗೋವಿಂದ ಬಾಬು ಪೂಜಾರಿ, ನಿವೃತ್ತ ಉಪನ್ಯಾಸಕರಾದ ಶೇಷಪ್ಪಯ್ಯ ಹೆಬ್ಬಾರ್, ನಿವೃತ್ತ ಶಿಕ್ಷಕ ಟಿ. ಆರ್. ಹುದಾರ್, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಮುಂದಿನಮನಿ, ಆಡಳಿತ ಮಂಡಳಿ ನಿರ್ದೇಶಕ ರಘುರಾಮ ಕೆ. ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಸ್ಮರಣ ಸಂಚಿಕೆ ಸಂಪಾದಕ ಬಿ. ವಿಶ್ವೇಶ್ವರ ಅಡಿಗ ಸಂಚಿಕೆಯ ಕುರಿತು ಮಾತನಾಡಿದರು. ಮಖ್ಯೋಪಧ್ಯಾಯರಾದ ಮಂಜು ಕಾಳವಾರ ಅವರು ಸ್ವಾಗತಿಸಿ, ಸಹಶಿಕ್ಷಕ ಆನಂದ ಮದ್ದೋಡಿ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕ ಪ್ರಕಾಶ್ ಮೇಕೋಡು ವಂದಿಸಿದರು.

Exit mobile version