Kundapra.com ಕುಂದಾಪ್ರ ಡಾಟ್ ಕಾಂ

ದಾನ ಮಾಡಿದ ದುಡಿಮೆಯ ಭಾಗ ದೇವರಿಗೆ ಸಮರ್ಪಣೆಯಾಗುತ್ತದೆ: ಜಗದ್ಗುರು ಶ್ರೀ ಶಾಂತಭೀಷ್ಮ ಸ್ವಾಮೀಜಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಅನ್ಯರಿಗೆ ವಂಚಿಸಿ, ಗಳಿಸಿದ ಹಣದಿಂದ ಭಗವಂತನಿಗೆ ಕೋಟ್ಯಾಂತರ ರೂ. ವ್ಯಯಿಸಿದ್ದರು ಅದನ್ನು ಭಗವಂತನಿಗೆ ಸಲ್ಲುವುದಿಲ್ಲ. ಬದಲಾಗಿ ಜನರು ತಮ್ಮ ಪ್ರಾಮಾಣಿಕ ದುಡಿಮೆಯ ಒಂದು ಭಾಗವನ್ನು ದಾನ ಮಾಡಿದಾಗ ಮಾತ್ರ ಅದು ಭಗವಂತನಿಗೆ ಅರ್ಪಿತವಾಗುತ್ತದೆ ಎಂದು ಹಾವೇರಿ ನರಸೀಪುರ ಜಗದ್ಗುರು ಶ್ರೀ ಶಾಂತಭೀಷ್ಮ ಸ್ವಾಮೀಜಿ ಹೇಳಿದರು.

ಅವರು ಉಪ್ಪುಂದ ಮಡಿಕಲ್ ಅರಮಕೋಡಿ ಶ್ರೀ ಈಶ್ವರ ದೇವಸ್ಥಾನದ ನೂತನ ಶಿಲಾದೇಗುಲ ಲೋಕಾರ್ಪಣೆ, ಪುನರ್ ಪ್ರತಿಷ್ಠೆ ಧಾರ್ಮಿಕ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಅಶೀರ್ವಚನ ನೀಡಿ ಮಾತನಾಡಿದರು.

ಹಿಂದಿನ ಕಾಲದಲ್ಲಿ ರಾಜಮಹಾರಾಜರು ಮಾತ್ರ ಇಂತಹ ದೇಗುಲಗಳನ್ನು ನಿರ್ಮಿಸಲು ಸಾಧ್ಯವಾಗಿತ್ತು, ಆದರೆ ಇಂದು ಕಡಲಿನಲ್ಲಿ ಕಠಿಣ ದುಡಿಮೆ ನಡೆಸುವ ಮೀನುಗಾರರ ಪರಿಶ್ರಮದಿಂದ ಹಾಗೂ ಇತರ ಭಕ್ತರು ಸೇರಿ ಭವ್ಯವಾದ ಶಿವಾ ದೇಗುಲ ನಿರ್ಮಾಣ ಮಾಡಿರುವುದು ಶ್ಲಾಘನೀಯ. ಮನುಷ್ಯ ಚಿಂತೆ ಮಾಡುವುದನ್ನು ಬಿಟ್ಟು ಚಿಂತನೆ ಮಾಡುವುದನ್ನು ರೂಢಿಸಿಕೊಂಡಾಗ ಜೀವನದ ನಿತ್ಯ ಯಾತ್ರೆಯಲ್ಲಿ ಉತ್ಸಾಹ, ಚೈನತ್ಯ ಮನಮಾಡುತ್ತದೆ, ಪರೋಪಕಾರ, ನಿಸ್ವಾರ್ಥ ಸೇವೆ ಮಾಡಿದಾಗ ಪರಮಾತ್ಮ ನಮ್ಮನ್ನು ಕಾಪಾಡುತ್ತಾನೆ. ನೊಂದವರ, ಶೋಷಿತರ, ಅನಾಥರಲ್ಲಿ ದೇವರನ್ನು ಕಾಣಬೇಕು ಎಂದ ಅವರು ಮೀನುಗಾರರ ಅಗತ್ಯ ಸೌಲಭ್ಯಗಳನ್ನು ದೊರಕಿಸಿಕೊಡುವ ಬಗ್ಗೆ ಸರಕಾರದ ಮಟ್ಟದಲ್ಲಿ ಮಾತುಕತೆಗೆ ಸಿದ್ದನಿದ್ದು, ಸಮುದಾಯದ ಎಲ್ಲ ಸಮಸ್ಯೆಗಳಿಗೆ ಧ್ವನಿಯಾಗಿರುತ್ತೇನೆ ಎಂದರು.

ಉಪ್ಪುಂದ ರಾಣಿಬಲೆ ಮೀನುಗಾರರ ಒಕ್ಕೂಟದ ಅಧ್ಯಕ್ಷ ವೆಂಕಟರಮಣ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಗೋಪಾಲ ಪೂಜಾರಿ, ರಾಜ್ಯ ಮೀನುಗಾರರ ಮುಖಂಡ ಗಣಪತಿ ಮಾಂಗ್ರೆ, ಜಿ.ಪಂ.ಮಾಜಿ ಸದಸ್ಯ ಮದನಕುಮಾರ್, ಬಂದೂರು ವಲಯ ನಾಡದೋಣಿ ಮನುಗಾರರ ಸಂಘದ ಅಧ್ಯಕ್ಷ ಎ.ಆನಂದ ಖಾರ್ವಿ, ಕಾರಾವಾರ ಅಭಿವೃದ್ಧಿ ಪ್ರಾಕಾರದ ಮಾಜಿ ಅಧ್ಯಕ್ಷ ಕೆ.ಟಿ.ತಾಂಡೇಲ್, ಕರ್ನಾಟಕ ಖಾರ್ವಿಯಾನೆ ಹರಿಕಾಂತ ಮಹಾಜನ ಸಂಘ ರಾಮಚಂದ್ರ ಖಾರ್ವಿ, ಆಡಳಿತ ಮಂಡಳಿ ಕಾರ್ಯದರ್ಶಿ ರತ್ನಕರ ಖಾರ್ವಿ, ಉಮೇಶ ಪೂಜಾರಿ ಸಂಕುಮನೆ ಹಾಗೂ ರಾಣಿಬಲೆ ಜೋಡಿಯ ಎಲ್ಲ ಪ್ರತಿನಿಗಳು ಉಪಸ್ಥಿತರಿದ್ದರು.

ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಪ್ರಸನ್ನಕುಮಾರ್ ಸ್ವಾಗತಿಸಿದರು. ಶಿಕ್ಷಕ ಸುಧಾಕರ ದೇವಾಡಿಗ ಮತ್ತು ಗೋವಿಂದ ಮಟ್ನಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

Exit mobile version