Kundapra.com ಕುಂದಾಪ್ರ ಡಾಟ್ ಕಾಂ

ಮರವಂತೆ: ವಿದ್ಯುತ್ ಉತ್ಪಾದನಾ ಘಟಕಕ್ಕೆ ಭೂಮಿಪೂಜೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮರವಂತೆ ಕಡಲತೀರದಲ್ಲಿ ಸಮುದ್ರ ಅಲೆಗಳ ಶಕ್ತಿ ಬಳಸಿ ವಿದ್ಯುತ್ ಉತ್ಪಾದಿಸುವ ಘಟಕ ಸ್ಥಾಪಿಸಲು ಶುಕ್ರವಾರ ಭೂಮಿಪೂಜೆ ನೆರವೇರಿತು.

ಶಿವಳ್ಳಿಯ ಸುಸಿ ಗ್ಲೋಬಲ್ ರಿಸರ್ಚ್ ಸೆಂಟರ್‌ನ ವಿಜಯಕುಮಾರ ಹೆಗ್ಡೆ ಮಾತನಾಡಿ, ಹಿಂದೆ ಮಲ್ಪೆ ಮತ್ತು ಕೆಮ್ಮಣ್ಣಿನ ಕಡಲತೀರಗಳಲ್ಲಿ ಸಮುದ್ರ ಅಲೆಗಳ ಶಕ್ತಿ ಬಳಸಿ ವಿದ್ಯುತ್ ಉತ್ಪಾದಿಸಲು ಪ್ರಾಯೋಗಿಕ ನೆಲೆಯಲ್ಲಿ ಸ್ಥಾಪಿಸಿದ ಘಟಕಗಳು ಯಶಸ್ವಿಯಾಗಿವೆ. ಮರವಂತೆ ತೀರ ಈ ಉದ್ದೇಶಕ್ಕೆ ಹೆಚ್ಚು ಪ್ರಶಸ್ತ ಎಂದು ಅಧ್ಯಯನದಿಂದ ದೃಢಪಟ್ಟಿರುವುದರಿಂದ ಇಲ್ಲಿ ದೊಡ್ಡಮಟ್ಟದ ಘಟಕ ಸ್ಥಾಪಿಸಲು ನಿರ್ಧರಿಸಲಾಗಿದೆ. ಜಾಗತಿಕ ತಾಪಮಾನ ಕುರಿತು ದೀರ್ಘಕಾಲದಿಂದ ಇದ್ದ ಆಸಕ್ತಿ ನನ್ನನ್ನು ಈ ಕ್ಷೇತ್ರದಲ್ಲಿ ಸಂಶೋಧನೆಗೆ ಪ್ರೇರೇಪಿಸಿತು. ನರೇಂದ್ರ ಮೋದಿ ಗುಜರಾತಿನ ಮುಖ್ಯ ಮಂತ್ರಿಯಾಗಿದ್ದಾಗ ಈ ಉದ್ದೇಶಕ್ಕೆ ನನ್ನನ್ನು ಆಹ್ವಾನಿಸಲಾಗಿತ್ತು. ಆದರೆ ಅಲ್ಲಿನ ತೀರ ಅಷ್ಟು ಅನುಕೂಲಕರ ಅಲ್ಲದ್ದರಿಂದ ಅದು ಸಾಧ್ಯವಾಗಲಿಲ್ಲ. ಮರವಂತೆಯಲ್ಲಿ ಸಧ್ಯ 10 ಕಿಲೊವಾಟ್ ಉತ್ಪಾದಿಸುವ ಘಟಕ ಸ್ಥಾಪಿಸಿ, ಅರ್ಹತಾ ದೃಢೀಕರಣ ಪಡೆದ ಬಳಿಕ ಅದನ್ನು ಮೇಲ್ದರ್ಜೆಗೇರಿಸಲಾಗುವುದು. ಪ್ರಧಾನಿ ಈಗಲೂ ಈ ವಿಚಾರದಲ್ಲಿ ಉತ್ಸುಕರಾಗಿದ್ದು, ಈ ತಿಂಗಳ 22 ಮತ್ತು 23ರಂದು ಅವರೊಂದಿಗೆ ಸಭೆ ನಡೆಯಲಿದೆ. ಕೇಂದ್ರದ ಹಸಿರು ನಿಶಾನೆ ದೊರೆತರೆ ಮರವಂತೆಯಲ್ಲಿ 500 ಮೆಗಾವಾಟ್ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.

ಈ ಸಂಶೋಧನೆಗೆ ಈಗಾಗಲೇ ಪೇಟೆಂಟ್ ಪಡೆಯಲಾಗಿದೆ. ಇದು ಪರಿಸರ ಸ್ನೇಹಿ. ಸಮುದ್ರದ ಭರತ ಮತ್ತು ಇಳಿತದ ಅವಧಿಯಲ್ಲಿ ಇದು ಒಂದೇ ರೀತಿ ಕಾರ್ಯನಿರ್ವಹಿಸುವುದು. ಮೀನುಗಾರಿಕೆಗೆ ತೊಂದರೆ ಆಗದ ಸ್ಥಳವನ್ನು ಆಯ್ಕೆ ಮಾಡಲಾಗಿದೆ. ಎಲ್ಲ ಸರಿಯಾಗಿ ನಡೆದರೆ ಮರವಂತೆಯಲ್ಲಿ ಟೈಡಲ್ ರಿಸರ್ಚ್ ಸೆಂಟರ್ ಆರಂಭಿಸುವ ಯೋಚನೆ ಇದೆ. ಈ ಉದ್ಯಮಕ್ಕೆ ಸುಸಿ ಮತ್ತು ಬೆಂಗಳೂರಿನ ಈಸ್ಟ್ ವೆಸ್ಟ್ ಸಮೂಹ ಸಹಯೋಗ ನೀಡುತ್ತವೆ ಎಂದರು.

ಅರ್ಚಕ ನರಸಿಂಹ ಅಡಿಗ ಪೂಜೆ ನೆರವೇರಿಸಿದರು. ಹೆಗ್ಡೆ ಅವರ ಪತ್ನಿ ಮೀನಾಕ್ಷಿ ಹೆಗ್ಡೆ, ಪುತ್ರ ಮೋಹಕರಾಜ್ ಹೆಗ್ಡೆ, ಸಹಯೋಗಿ ಸತೀಶ ಶೆಟ್ಟಿ ಪುತ್ತೂರು, ಗ್ರಾಮ ಪಂಚಾಯಿತಿ ಸದಸ್ಯರು, ಮಾಜಿ ಅಧ್ಯಕ್ಷರಾದ ಅನಿತಾ ಆರ್. ಕೆ, ಎಸ್. ಜನಾರ್ದನ, ವರಾಹ ದೇವಸ್ಥಾನದ ಮಾಜಿ ಧರ್ಮದರ್ಶಿ ಕೆ. ರಾಮಚಂದ್ರ ಹೆಬ್ಬಾರ್, ವಿವಿಧ ಸ್ಥಳೀಯ ಸಂಘಟನೆಗಳ ಪ್ರತಿನಿಧಿಗಳಾದ ನಾಗರಾಜ ಖಾರ್ವಿ, ಕರುಣಾಕರ ಆಚಾರ್, ದಯಾನಂದ ಬಳೆಗಾರ್, ಪ್ರಭಾಕರ ಖಾರ್ವಿ, ರವಿ ಮಡಿವಾಳ, ಮೀನುಗಾರ ಮುಖಂಡ ಸಂಜೀವ ಖಾರ್ವಿ ಇತರರು ಇದ್ದರು.

 

Exit mobile version