Kundapra.com ಕುಂದಾಪ್ರ ಡಾಟ್ ಕಾಂ

‘ಲಿವಿಂಗ್ ವಿದ್ ಸ್ನೇಕ್ಸ್’ ಕಾರ್ಯಾಗಾರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಸ್ನಾತಕೋತ್ತರ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ವತಿಯಿಂದ, ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ) ಸಹಯೋಗದೊಂದಿಗೆ ‘ಲಿವಿಂಗ್ ವಿದ್ ಸ್ನೇಕ್ಸ್ – ಹಾವು ಕಡಿತ ತಗ್ಗಿಸುವ ಯೋಜನೆ’ ಕಾರ್ಯಾಗಾರ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ “ಹಾವು ಮತ್ತು ನಾವು” ಇದರ ಪ್ರಾಜೆಕ್ಟ್ ಮ್ಯಾನೇಜರ್ ಸ್ಪೂರ್ತಿ ಶೆಟ್ಟಿ ಹಾಗೂ ಹಾವು ಕಡಿತದ ಶಿಕ್ಷಣತಜ್ಞ ವಿಪಿನ್ ರಾಯ್, ಹಾವು ಕಡಿತದಿಂದ ಪಾರಾಗುವ ಮಾರ್ಗಗಳು, ಕಡಿತಕ್ಕೊಳಗಾದ ಸಂತ್ರಸ್ತರಿಗೆ ಚಿಕಿತ್ಸೆ ನೀಡುವ ವಿಧಾನಗಳ ಕುರಿತು ಪ್ರಾಯೋಗಿಕ ಮಾಹಿತಿ ನೀಡಿದರು.

ಒಟ್ಟು ಎರಡು ಅವಧಿಗಳಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಮೊದಲ ಅವಧಿಯಲ್ಲಿ, ಮಾನವ ಹಾಗೂ ಹಾವಿನ ನಡುವಿನ ಸಂಘ ಮತ್ತು ಹಾವು ಕಡಿತದ ಸಂತ್ರಸ್ತರಿಗೆ ಚಿಕಿತ್ಸೆ ನೀಡುವ ಸರಿಯಾದ ವಿಧಾನಗಳನ್ನು ಸ್ಪೂರ್ತಿ ಶೆಟ್ಟಿ ಪ್ರಾಯೋಗಿಕವಾಗಿ ತಿಳಿಸಿದರು. ಅದಲ್ಲದೆ, ಭಾರತದಲ್ಲಿ ಕಂಡುಬರುವ ವಿಷಪೂರಿತ ಹಾವುಗಳ ಬಗ್ಗೆ ಕೆಲವು ಆಸಕ್ತಿದಾಯಕ ಸಂಗತಿಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

ಎರಡನೇ ಅವಧಿಯನ್ನು ವಿಪಿನ್ ರಾಯ್ ನಡೆಸಿಕೊಟ್ಟರು. ಈ ಸಂದರ್ಭ, ಹಾವಿನ ಕಡಿತದಿಂದ ನಮ್ಮನ್ನು ರಕ್ಷಿಸುವ ಬಗ್ಗೆ ಮಾಹಿತಿ ನೀಡಿದರಲ್ಲದೆ, ಹಾವಿನ ಕಡಿತದಿಂದ ಜನರನ್ನು ಪಾರು ಮಾಡುವ ಸಂದರ್ಭ ತಮಗಾದ ಅನುಭವ ಮತ್ತು ಜ್ಞಾನವನ್ನು ಹಂಚಿಕೊಂಡು, ಹಾವಿನ ಕಡಿತ ಮತ್ತು ಭಾರತದ ಮಾರಕ ಹಾವುಗಳ ಬಗ್ಗೆ 3 ವೀಡಿಯೋಗಳನ್ನು ಪ್ರದರ್ಶಿಸಿದರು.

ಕಾಲೇಜಿನ ಸ್ನಾತಕೋತ್ತರ ವಿಭಾಗದ 250ವಿದ್ಯಾರ್ಥಿಗಳು, ಎನ್‌ಎಸ್‌ಸ್, ಎನ್‌ಸಿಸಿ, ರೆಡ್‌ಕ್ರಾಸ್ ಹಾಗೂ ರೋವರ್ಸ್-ರೇಂಜರ್ಸ್ ಘಟಕದ ಸುಮಾರು 250 ಸ್ವಯಂಸೇವಕ ವಿದ್ಯಾರ್ಥಿಗಳು ಈ ಕಾರ್ಯಾಗಾರದ ಲಾಭವನ್ನು ಪಡೆದರು. ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ| ಕುರಿಯನ್, ಸ್ನಾತಕೋತ್ತರ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ಸಂಯೋಜಕರು ಡಾ| ರಶ್ಮಿ ಕೆ, ಐಕ್ಯೂಎಸಿ ಕಾರ್ಯಕಾರಿ ಸಮಿತಿಯ ಸದಸ್ಯರಾದ ಡಾ| ಶೃತಿ ಎಸ್ ಮತ್ತು ಅಖಿಲೇಶ್, ಸ್ನಾತಕೋತ್ತರ ಪ್ರಾಣಿಶಾಸ್ತ್ರ ವಿಭಾಗದ ಉಪನ್ಯಾಸಕರು ಪುಷ್ಪಾ ಜಿ.ಆರ್ ಉಪಸ್ಥಿತರಿದ್ದರು.

ಶ್ರೀಹರಿ ಸ್ವಾಗತಿಸಿ, ಜೆನ್ನಿಫರ್ ಶೆರ್ರಿ ಪಿಂಟೋ ವಂದಿಸಿದರು. ಶೃತಿ ಪ್ರಕಾಶ್ ಅತಿಥಿಗಳ ಪರಿಚಯವನ್ನುನೀಡಿದರು. ಸಮೃದ್ಧಿ ಶೆಣೈ ಕಾರ್ಯಕ್ರಮವನ್ನು ನಿರೂಪಿಸಿದರು.

Exit mobile version