Site icon Kundapra.com ಕುಂದಾಪ್ರ ಡಾಟ್ ಕಾಂ

ಮಾ.13ರಂದು ಚಂದ್ರಶೇಖರ ನಾವಡರ ‘ಸೇನಾನುಭವ’ ಕೃತಿ ಬಿಡುಗಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ದಶಕದಿಂದ ರಕ್ಷಣೆ, ಪ್ರಚಲಿತ ವಿದ್ಯಮಾನ, ಕಲೆ, ಸಂಸ್ಕೃತಿ ಕುರಿತು ಪತ್ರಿಕಾ ಅಂಕಣ ಬರಹಗಳಿಂದ ಪರಿಚಿತರಾಗಿರುವ ಮಾಜಿ ಸೈನಿಕ ಬೈಂದೂರು ಚಂದ್ರಶೇಖರ ನಾವಡರ ಸೈನಿಕ ಜೀವನಾನುಭವದ ‘ಸೇನಾನುಭವ’ ಕೃತಿ ಬಿಡುಗಡೆ ಮಾ.13ರಂದು ಸಂಜೆ 4 ಗಂಟೆಗೆ ಉಡುಪಿಯ ಸುಹಾಸಂ ಆಶ್ರಯದಲ್ಲಿ ಕಿದಿಯೂರು ಹೋಟೆಲ್‌ನ ಪವನ್ ರೂಫ್‌ಟಾಪ್‌ನಲ್ಲಿ ನಡೆಯಲಿದೆ. ಹಿರಿಯ ಸಾಹಿತಿ ಡಾ. ನಾ. ಮೊಗಸಾಲೆ ಬಿಡುಗಡೆ ಮಾಡಲಿದ್ದಾರೆ.

ಸಾಲಿಗ್ರಾಮದ ಲೇಖಕರ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರೊ. ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಕೃತಿ ಪರಿಚಯ ಮಾಡಲಿದ್ದಾರೆ. ಸುಹಾಸಂನ ಅಧ್ಯಕ್ಷ ಶಾಂತರಾಜ ಐತಾಳರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕುಂದಪ್ರಭದ ಸಂಪಾದಕ ಯು. ಎಸ್. ಶೆಣೈ ಪಾಲ್ಗೊಳ್ಳಲಿದ್ದಾರೆ. ಸಾಹಿತ್ಯಾಸಕ್ತರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರು ಇರುವಂತೆ ಸುಹಾಸಂ ಕಾರ್ಯದರ್ಶಿ ಎಚ್. ಗೋಪಾಲ ಭಟ್ ತಿಳಿಸಿದ್ದಾರೆ.

ಪ್ರಸ್ತುತ ಚಂದ್ರಶೇಖರ ನಾವಡ ಅವರು ಸಾರ್ವಜನಿಕ ರಂಗದ ಯೂನಿಯನ್ ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಕ್ಷಣೆ, ವಿದೇಶಾಂಗ, ನೀತಿ, ಬ್ಯಾಂಕಿಂಗ್ ಸಂಬಂಧಿಸಿದ ಲೇಖನ, ವ್ಯಕ್ತಿ ಪರಿಚಯ ನಾಟಕ ಯಕ್ಷಗಾನ ಮತ್ತಿತರ ಕಲೆಗೆ ಸಂಬಂಧಿಸಿದ ಇವರ ಬರಹಗಳು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ರಾಷ್ಟ್ರೀಯತೆ, ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ.

ಜಮ್ಮು ಕಾಶ್ಮೀರ, ಪಂಜಾಬ್ ಗಡಿ ಪ್ರದೇಶಗಳಲ್ಲಿ ನಿಯೋಜಿತ ಸೇನೆ ವಿವಿಧ ಬಟಾಲಿಯನ್‌ಗಳಲ್ಲಿ, ಹೈದರಾಬಾದ್ ಆರ್ಟಿಲರಿ ಸೆಂಟರ್, ಪಚಮಡಿ ಆರ್ಮಿ ಎಜುಕೇಷನಲ್ ಕೋರ್ ಟ್ರೈನಿಂಗ್ ಕಾಲೇಜು, ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಯಲ್ಲಿ ಒಟ್ಟು 22 ವರ್ಷ ಸೇವೆ ಸಲ್ಲಿಸಿದ ಅನುಭವವನ್ನು ಈ ಕೃತಿ ಒಳಗೊಂಡಿದೆ ಎಂದು ಚಂದ್ರಶೇಖರ ನಾವಡ ತಿಳಿಸಿದ್ದಾರೆ.

Exit mobile version