Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಪುರಸಭೆ ತೆರಿಗೆ ಏರಿಕೆ ವಿರೋಧಿಸಿ ಸಾಮಾನ್ಯ ಸಭೆಯಲ್ಲಿ ಪ್ರತಿಪಕ್ಷ ಸಭಾತ್ಯಾಗ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೋವಿಡ್– 19 ಸಂಕಷ್ಟದಲ್ಲಿ ಜನರಿರುವಾಗ ತೆರಿಗೆ ಏರಿಕೆ ಮಾಡಿರುವುದು ಜನ ವಿರೋಧಿಯಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷದ ಕಾಂಗ್ರೆಸ್ ಸದಸ್ಯರು, ಯಾವುದೇ ಕಾರಣಕ್ಕೂ ತೆರಿಗೆ ಏರಿಕೆ ಮಾಡಬಾರದು, ಒಂದು ವೇಳೆ ಏರಿಕೆ ಮಾಡಿದಲ್ಲಿ, ಜನರೊಂದಿಗೆ ಸೇರಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ಸಭಾತ್ಯಾಗ ಮಾಡಿದ ಮಾಡಿದ ಘಟನೆ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಕುಂದಾಪುರದ ಪುರಸಭೆಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಪುರಸಭೆಯ ಸಾಮಾನ್ಯ ಸಭೆ ಸಭೆಯಲ್ಲಿ ಆಮೆಗತಿಯಲ್ಲಿ ಸಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಅವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸದಸ್ಯರು, ದಶಕದಿಂದ ಶಾಸ್ತ್ರಿ ಸರ್ಕಲ್ ಬಳಿ ಫ್ಲೈಓವರ್ ಕಾಮಗಾರಿ ಅವ್ಯವಸ್ಥೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಗುತ್ತಿಗೆ ಕಂಪನಿಯ ಅಧಿಕಾರಿ ಇದೇ 31 ರೊಳಗೆ ಒಳಗೆ ಕಾಮಗಾರಿ ಮುಗಿಸಿ ಕೊಡುವ ಭರವಸೆ ವ್ಯಕ್ತಪಡಿಸಿದರು. ಫ್ಲೈಓವರ್ ಕಾಮಗಾರಿ ಹಾಗೂ ಜಲಸಿರಿ ಯೋಜನೆಗಳನ್ನು ಅವಧಿಯೊಳಗೆ ಪೂರೈಸದೇ ಇದ್ದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸುವ ಜತೆಗೆ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗುತ್ತದೆ ಎಂದು ಮುಖ್ಯಾ ಧಿಕಾರಿ ಗೋಪಾಲಕೃಷ್ಣ  ಎಚ್ಚರಿಕೆ ನೀಡಿದರು.

ಕುಂದೇಶ್ವರ ವಾರ್ಡ್ ಜನರು ಉಪ್ಪು ನೀರು ಕುಡಿಯುವ ಸ್ಥಿತಿ ಇದೆ. 2 ತಿಂಗಳಿಂದ ನೀರಿನ ಸಂಪರ್ಕಕ್ಕೆ ಮನವಿ ಮಾಡಿದರೂ, ಸುಳ್ಳು ಭರವಸೆ ನೀಡುತ್ತಿದ್ದೀರಿ ಎಂದು ವಿ.ಪ್ರಭಾಕರ ಅಸಮಾಧಾನ ವ್ಯಕ್ತಪಡಿಸಿದರು. ಕುಡಿಯುವ ನೀರಿನ ವಿಷಯದಲ್ಲಿ ಸುಳ್ಳು ಭರವಸೆ ನೀಡುತ್ತಿದ್ದೀರಿ ಎಂದು ಜಲಸಿರಿ ಯೋಜನೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಪೂರಕವಾಗಿ ಮಾತನಾಡಿದ ಹಿರಿಯ ಸದಸ್ಯ ಮೋಹನ್ದಾಸ್ ಶೆಣೈ ಅವರು, ಕಾಮಗಾರಿ ಆಮೆ ನಡಿಗೆಯಲ್ಲಿ ಸಾಗುತ್ತಿದೆ. ನೀರು ಪೂರೈಕೆ ಮಾಡುವ ಟ್ಯಾಂಕ್ ಸೋರುತ್ತಿದೆ. ಕಾಮಗಾರಿಗಳ ಬಗ್ಗೆ ಪ್ರಶ್ನೆ ಮಾಡಿದರೇ, ಕೆಲಸಗಾರರ ಕೊರತೆ ಇದೆ ಎಂಬು ಸಬೂಬು ಹೇಳಲಾಗುತ್ತದೆ ಎಂದು ಆಕ್ಷೇಪ ವ್ಯಕ್ತ ಪಡಿಸಿದರು. ಆಸಿಫ್ ಕೋಡಿ, ಕಮಲ ಹಾಗೂ ಲಕ್ಷ್ಮೀ ಕೋಡಿ ನೀರಿನ ಸಮಸ್ಯೆಗಳನ್ನು ಕ್ಷಿಪ್ರವಾಗಿ ಬಗೆಹರಿಸುವಂತೆ ಒತ್ತಾಯಿಸಿದರು.

ಜಲಸಿರಿ ಯೋಜನೆ ಎಂಜಿನಿಯರ್ ಹರೀಶ್ ಉತ್ತರಿಸಿ, ಚಲನ್ ಕಟ್ಟಿದವರಿಗೆ ನೀರಿನ ಸಂಪರ್ಕ ನೀಡಲಾಗುತ್ತಿದೆ. ಕೋಡಿಯಲ್ಲಿ 650 ಮನೆಗಳ ಸರ್ವೆ ಮಾಡಿದ್ದು, 184 ಹೊಸ ಅರ್ಜಿ ಬಂದಿದೆ. 68 ಮನೆಯವರು ಚಲನ್ ಕಟ್ಟಿದ್ದು, ಅವರಿಗೆ ನೀರಿನ ಸಂಪರ್ಕ ನೀಡಲಾಗುತ್ತದೆ. ಹೊಸ ಕಾಮಗಾರಿಗಳನ್ನು ಹೊರತು ಪಡಿಸಿ ಉಳಿದ ಕಾಮಗಾರಿಗಳನ್ನು ಮಾ.31ರ ಒಳಗೆ ಪೂರ್ಣಗೊಳಿಸುವುದಾಗಿ ತಿಳಿಸಿದರು.

ಪುರಸಭಾ ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ತಾವೇ ಶೌಚಾಲಯ ಸ್ವಚ್ಛ ಮಾಡಿಕೊಳ್ಳುತ್ತಾರೆ ಎನ್ನುವ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಚಂದ್ರಶೇಖರ ಖಾರ್ವಿ ಅವರು, ವಿದ್ಯಾಭ್ಯಾಸಕ್ಕೆ ಹೋಗುವ ಮಕ್ಕಳು ಶೌಚಾಲಯ ಸ್ವಚ್ಛ ಮಾಡುವುದು ಸರಿಯಲ್ಲ, ಸರ್ಕಾರವೇ ಶೌಚಾಲಯ ಸ್ವಚ್ಛತೆಗಾಗಿ ವ್ಯವಸ್ಥೆ ಮಾಡುವಂತೆ ನಿರ್ಣಯ ಮಂಡಿಸಿ ಸಂಬಂಧಪಟ್ಟವರಿಗೆ ಕಳುಹಿಸುವಂತೆ ಸಲಹೆ ನೀಡಿದರು.

ರಸ್ತೆ ಕಟ್ಟಿಂಗ್, ಇಂಟರ್ಲಾಕ್ ಅಳವಡಿಕೆ, ಬೀದಿ ದೀಪ, ಯುಜಿಡಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಯಿತು.

ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಂದೀಪ ಖಾರ್ವಿ, ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ ಪೂಜಾರಿ, ಇದ್ದರು. ಸಾಮಾನ್ಯ ಸಭೆ ಮೊದಲು ನಡೆದ ಸ್ಥಾಯಿ ಸಮಿತಿ ಆಯ್ಕೆ ಪ್ರಕ್ರಿಯೆಯಲ್ಲಿ ಶೇಖರ ಪೂಜಾರಿ ಸ್ಥಾಯಿ ಸಮಿತಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು.

 

Exit mobile version