Kundapra.com ಕುಂದಾಪ್ರ ಡಾಟ್ ಕಾಂ

ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್‌ನಿಂದ ಕಾನೂನು & ಆರೋಗ್ಯ ಮಾಹಿತಿ ಶಿಬಿರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಈಚಿನ ದಿನಗಳಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳಲ್ಲಿ ಯುವಜನರು ಮತ್ತು ಅಪ್ರಾಪ್ತ ವಯಸ್ಸಿನವರು ಸಾವುನೋವಿಗೆ ಒಳಗಾಗುತ್ತಿದ್ದಾರೆ. ನಿಯಂತ್ರಣ ಮೀರಿದ ವೇಗ ಮತ್ತು ನಿಯಮ ಮೀರಿದ ಚಾಲನೆ ಇದಕ್ಕೆ ಕಾರಣ. ಪೋಷಕರು ಈ ನಿಟ್ಟಿನಲ್ಲಿ ತಮ್ಮ ಮಕ್ಕಳನ್ನು ನಿಯಂತ್ರಿಸಬೇಕು ಎಂದು ಬೈಂದೂರು ಎಸ್‌ಐ ಸಂಗೀತಾ ಹೇಳಿದರು.

ಬೈಂದೂರು ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್‌ನ ನಾವುಂದ ಶಾಖೆಯಲ್ಲಿ ಈಚೆಗೆ ಆಯೋಜಿಸಿದ್ದ ಮಾಹಿತಿ ಶಿಬಿರದಲ್ಲಿ ಅವರು ರಸ್ತೆ ಅಪಘಾತ ತಡೆಗೆ ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಕೆಲವು ಅಪಘಾತಗಳನ್ನು ಉದಾಹರಿಸಿದ ಅವರು, ಹೆಚ್ಚು ಅಪಘಾತಗಳಲ್ಲಿ ದ್ವಿಚಕ್ರ ವಾಹನ ಚಾಲಕರು ಅಪಾಯಕ್ಕೀಡಾಗಿದ್ದಾರೆ. ಚಾಲನೆ ಪರವಾನಿಗೆ ಪಡೆಯಲು ಅನರ್ಹರಾದ ಅಪ್ರಾಪ್ತ ವಯೋಮಾನದವರೂ ಇದರಲ್ಲಿ ಸೇರಿರುವುದಕ್ಕೆ ಪೋಷಕರ ನಿರ್ಲಕ್ಷ್ಯವೇ ಕಾರಣ. ಇದಕ್ಕೆ ಕಡಿವಾಣ ಹಾಕಬೇಕು ಎಂದರು.

ಆರೋಗ್ಯ ಮಾಹಿತಿ ನೀಡಿದ ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸನ್ಮಾನ್ ಶೆಟ್ಟಿ ಜ್ವರ ಕಾಣಿಸಿಕೊಂಡಾಗ ವಹಿಸಬೇಕಾದ ಎಚ್ಚರ, ಕೋವಿಡ್ ನಿಯಂತ್ರಕ ಲಸಿಕೆ ಪಡೆಯುವ ಕುರಿತು ಮಾರ್ಗದರ್ಶನ ನೀಡಿದರು.
ಕೋಪರೇಟಿವ್‌ನ ಅಧ್ಯಕ್ಷ ಎಸ್. ರಾಜು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಂ. ವಿನಾಯಕ ರಾವ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಿಟ್ಟಣ್ಣ ರೈ ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ನಿರೂಪಿಸಿದರು. ಸಂಸ್ಥೆಯ ಹಿರಿಯ ಸದಸ್ಯ ಎಸ್. ಜನಾರ್ದನ ಮರವಂತೆ ಇದ್ದರು. ಕೊರೊನಾ ಉಲ್ಬಣಿಸಿದ್ದ ವೇಳೆ ಶ್ರಮ ವಹಿಸಿ ದುಡಿದ ಡಾ. ಸನ್ಮಾನ್ ಶೆಟ್ಟಿ ಮತ್ತು ಸಂಗೀತಾ ಅವರನ್ನು ಸನ್ಮಾನಿಸಲಾಯಿತು.

Exit mobile version