Kundapra.com ಕುಂದಾಪ್ರ ಡಾಟ್ ಕಾಂ

ಹಾಡಹಗಲೇ ಸರಗಳ್ಳತನ: ಪೊಲೀಸರೆದುರೇ ಪರಾರಿಯಾದ ಕಳ್ಳರು

ಕುಂದಾಪುರ: ತಾಲೂಕಿನ ತಲ್ಲೂರು ಬಸ್ ನಿಲ್ದಾಣದಲ್ಲಿ ಕುಂದಾಪುರ ಬರಲು ಬಸ್ಸಿಗಾಗಿ ಕಾಯುತ್ತಿದ್ದ ಮಹಿಳೆಯೋರ್ವಳ ಕುತ್ತಿಗೆಯಿಂದ ಕರಿಮಣಿ ಸರವನ್ನು ಹರಿದ ಬೈಕಿನಲ್ಲಿ ಬಂದ ಆಗಂತುಕರು, ಪೊಲೀಸರಿಗೂ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ ಘಟನೆ ಇಂದು ಮಧ್ಯಾಹ್ನದ ವರದಿಯಾಗಿದೆ.

ಘಟನೆಯ ವಿವರ:

ಕುಂದಾಪುರ ತಾಲೂಕಿನ ನೇರಳಕಟ್ಟೆ ಹಿಲ್ಕೋಡುವಿನ ನಿವಾಸಿಯಾದ ತೇಜ ಗಾಣಿಗ ಹಾಗೂ ಅವರ ಪತ್ನಿ ಸೀತಾ ಗಾಣಿಗ ಎಂಬುವವರು ತಲ್ಲೂರಿನ ಅಶ್ವಿನಿ ಆಯುರ್ವೇದಿಕ್ ಆಸ್ಪತ್ರೆ ತೆರಳಿ ಅಲ್ಲಿಂದ ಕುಂದಾಪುರಕ್ಕೆ ತೆರಳುವ ಬಸ್ಸಿಗಾಗಿ ತಲ್ಲೂರಿನ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದರು. ಅದೇ ವೇಳೆಗೆ ಅಲ್ಲಿಗೆ ಕಪ್ಪು ಬಣ್ಣದ ೨೨೦ ಸಿಸಿ ಪಲ್ಸರ್ ಬೈಕಿನಲ್ಲಿ ಬಂದ ಮಧ್ಯ ವಯಸ್ಸಿನ ಯುವಕರೀರ್ವರು ಒಮ್ಮೆಲೆ ಸೀತಾ ಗಾಣಿಗ ಅವರ ಕತ್ತಿಗೆಗೆ ಕೈ ಹಾಕಿ ಅವರ ಕರಿಮಣಿ ಸರವನ್ನು ಎಗರಿಸಿ ಕೂಡಲೇ ಅಲ್ಲಿಂದ ಪರಾರಿಯಾಗಿದ್ದಾರೆ.

ಪೊಲೀಸರಿಗೆ ಸರಗಳ್ಳತನದ ಮಾಹಿತಿ ದೊರಕುತ್ತಿದ್ದಂತೆ ಕುಂದಾಪುರದ ಶಾಸ್ತ್ರೀ ವೃತ್ತದ ಬಳಿ ನಾಕಬಂಧಿ ಹಾಕಿ ನಿಂತಿದ್ದರು. ಆದರೆ ಅತಿವೇಗದಿಂದ ಬಂದ ಬೈಕ್ ಸವಾರರು ಅಲ್ಲಿಯೂ ಬೈಕ್ ನಿಲ್ಲಿಸದೇ ಪರಾರಿಯಾಗಿದ್ದಾರೆ. ತಕ್ಷಣ ಅವರನ್ನು ಎರಡು ಪೊಲೀಸ್ ಜೀಪು ಹಾಗೂ ಇಂಟರ್‌ಸೆಪ್ಟರ್ ಮೂಲಕ ಬೆನ್ನತ್ತಿದರೂ ಕೂಡ ಅತಿವೇಗದಲ್ಲಿದ್ದ ಬೈಕನ್ನು ನಿಲ್ಲಿಸದೇ ನೋಡನೋಡುತ್ತಿದ್ದಂತೆಯೇ ಕಣ್ಮರೆಯಾಗಿದ್ದಾರೆ.

ಕೂಡಲೇ ಕೋಟೇಶ್ವರ, ಕೋಟ, ಬಸ್ರೂರು-ಕಂಡ್ಲೂರು, ಶಂಕರನಾರಾಯಣ ಮುಂತಾದೆಡೆ ನಾಕಬಂಧಿ ಹಾಕಿದರೂ ಕೂಡ ಬೈಕ್ ಸವಾರರು ಎತ್ತ ಸಾಗಿದರು ಎಂಬುದು ಮಾತ್ರ ತಿಳಿಯಲಿಲ್ಲ.

ಇಂದು ಬೆಳಿಗ್ಗೆ ಬೈಕ್ ಸವಾರರು ಕಾರವಾರ, ಭಟ್ಕಳದಲ್ಲಿಯೂ ಸರಣಿ ಸರಗಳ್ಳತನಗೈದು ತಲ್ಲೂರಿನಲ್ಲಿಯೂ ಈ ಕೃತ್ಯ ಏಸಗಿದ್ದಾರೆ ಎನ್ನಲಾಗಿದೆ. ಕಳ್ಳರು ಕಪ್ಪು ಪಲ್ಸರ್ ಬೈಕಿನಲ್ಲಿ ಕಪ್ಪು ಬಣ್ಣದ ಅಂಗಿಯನ್ನು ಹಾಗೂ ಹೆಲ್ಮೆಟ್ ಧರಿಸಿದ್ದರು. ಕುಂದಾಪುರದ ಶಾಸ್ತ್ರೀ ವೃತ್ತದ ಬಳಿ ಇರುವ ಸಿಸಿ ಕ್ಯಾಮರಾದಲ್ಲಿ ಬೈಕ್ ಹೋಗಿರುವುದು ದಾಖಲಾಗಿದೆ.

ಸೀತಾ ಗಾಣಿಗ ಕುಂದಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಹೆಚ್ಚಿನ ತನಿಕೆ ಕೈಗೊಂಡಿದ್ದಾರೆ.

Exit mobile version