Kundapra.com ಕುಂದಾಪ್ರ ಡಾಟ್ ಕಾಂ

ಡಾ. ಬಿ. ಬಿ. ಹೆಗ್ಡೆ ಕಾಲೇಜು: ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅತ್ಯಂತ ಕಿರು ಅವಧಿಯಲ್ಲಿ ಕ್ರೀಡೆಯಲ್ಲಿ ಉತ್ಕೃಷ್ಟ ಸಾಧನೆ ಮಾಡುವ ಮೂಲಕ ಮಂಗಳೂರು ವಿಶ್ವವಿದ್ಯಾನಿಲಯದ ಗಮನ ಸೆಳೆದ ಸಂಸ್ಥೆ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು. ವಿದ್ಯಾರ್ಥಿದೆಸೆಯಲ್ಲಿ ನನ್ನ ಕ್ರೀಡಾಪ್ರತಿಭೆಯನ್ನು ಗುರುತಿಸಿದ ಸಂಸ್ಥೆಗೆ ನಾನು ಅಭಾರಿಯಾಗಿದ್ದೇನೆ. ಕ್ರೀಡಾಪಟುಗಳು ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಶಿಸ್ತು ಮತ್ತು ನಿರಂತರ ಪರಿಶ್ರಮ ಮುಖ್ಯ ಎಂದು ಖಾಸಗಿ ಕಂಪೆನಿ ಉದ್ಯೋಗಿ ಪೂರ್ವ ವಿದ್ಯಾರ್ಥಿ ಮನೀಷ್ ಪೂಜಾರಿ ಹೇಳಿದರು.

ಅವರು ನಗರದ ಗಾಂಧಿ ಮೈದಾನದಲ್ಲಿ ನಡೆದ ಕುಂದಾಪುರದ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ದ್ವಿತೀಯ ಬಿ.ಕಾಂ. ‘ಸಿ’ವಿಭಾಗದ ಕಾರ್ತಿಕ್, ಪ್ರಥಮ ಬಿ.ಕಾಂ. ‘ಎ’ ವಿಭಾಗದ ಸೌಮ್ಯ ಖಾರ್ವಿ ವೈಯಕ್ತಿಕ ಕ್ರೀಡಾ ಚಾಂಪಿಯನ್ ಆದರು. ಅಂತಿಮ ಬಿ.ಕಾಂ. ‘ಡಿ’ ವಿಭಾಗ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಹಾಗೂ ಪ್ರಥಮ ಬಿ.ಕಾಂ. ‘ಎ’ ವಿಭಾಗ ರನ್ನರ್ ಆಫ್ ಸಮಗ್ರ ಪ್ರಶಸ್ತಿ ಪಡೆದರು. ಆಕರ್ಷಕ ಪಥಸಂಚಲನದಲ್ಲಿ ಪ್ರಥಮ ಬಿ.ಕಾಂ. ’ಎ’ ವಿಭಾಗ ಪ್ರಥಮ ಸ್ಥಾನ, ಪ್ರಥಮ ಬಿ.ಸಿ.ಎ. ದ್ವಿತೀಯ ಸ್ಥಾನ ಹಾಗೂ ಬಿ.ಬಿ.ಎ. ತೃತೀಯ ಸ್ಥಾನ ಪಡೆದರು.

ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿಯಾದ ಸೀತಾರಾಮ ನಕ್ಕತ್ತಾಯ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ| ರೋಶನ್ ಕುಮಾರ್ ಶೆಟ್ಟಿ, ವಿಶ್ವಸ್ಥ ಮಂಡಳಿಯ ಸದಸ್ಯರಾದ ಅರುಣ್ ಕುಮಾರ್ ಶೆಟ್ಟಿ, ದೈಹಿಕ ಶಿಕ್ಷಣ ನಿರ್ದೇಶಕರಾದ ರಂಜಿತ್ ಟಿ.ಎನ್., ಕ್ರೀಡಾ ಸಂಘದ ಕಾರ್ಯದರ್ಶಿಗಳಾದ ಲಕ್ಷ್ಮೀಶ ಮಂಜ, ನಿವೇದಿತಾ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಪ್ರಾಸ್ತಾವಿಸಿದರು. ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿದರು. ವಾಣಿಜ್ಯ ಉಪನ್ಯಾಸಕರುಗಳಾದ ಯೋಗೀಶ್ ಶ್ಯಾನುಭೋಗ್ ವಂದಿಸಿ, ಪ್ರಥ್ವಿಶ್ರೀ ಜಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Exit mobile version