Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ರಾಜ್ಯ ಮಟ್ಟದ ಪುರುಷ, ಮಹಿಳೆಯರ ಕುಣಿತ ಭಜನಾ ಸ್ಪರ್ಧೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದೇವರು ಧರ್ಮದ ಕೇಂದ್ರ ಬಿಂದು. ರಾಮ, ಕೃಷ್ಣ ದುಷ್ಟರ ನಾಶ, ಶಿಷ್ಟರ ರಕ್ಷಣೆ, ನಿಸ್ವಾರ್ಥ ಬದುಕಿನಿಂದಾಗಿ ಅವರು ದೈವತ್ವಕ್ಕೇರಿದರು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

ಇಲ್ಲಿಗೆ ಸಮೀಪದ ಕೋಟೇಶ್ವರದಲ್ಲಿ ಶಿವರಾತ್ರಿ ಪ್ರಯುಕ್ತ ಶ್ರೀರಾಮ ಕೋಟೀಶ್ವರ ಕಲಾ ಸಂಘದ ಆಶ್ರಯದಲ್ಲಿ ನಡೆದ ಎರಡು ದಿನಗಳ ರಾಜ್ಯ ಮಟ್ಟದ ಪುರುಷ ಮತ್ತು ಮಹಿಳೆಯರ ಕುಣಿತ ಭಜನಾ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ಭಜನೆ, ನಾಮ ಸಂಕೀರ್ತನೆಗಳಿಂದ ನಮ್ಮ ಮನಸ್ಸಿನ ದೃಢತೆ ಹಾಗೂ ಏಕಾಗ್ರತೆ ಸಾಧಿಸಬಹುದು. ಭಜನೆ ಎಂದೂ ಸಂಸಾರಗಳನ್ನು ವಿಭಜನೆ ಮಾಡುವುದಿಲ್ಲ. ಜನರನ್ನು ದೈವ ಚಿಂತನೆಗಳಿಂದ ವಿಮುಖಗೊಳಿಸುವ ಯತ್ನಗಳು ನಡೆಯುತ್ತಿರುವ ಕಾಲಘಟ್ಟದಲ್ಲಿ ಭಜನೆ ಸಂಸ್ಕೃತಿ ಎಲ್ಲೆಡೆ ಮತ್ತೆ ಬೆಳೆಯುತ್ತಿರುವುದು ಸಂತೋಷದ ವಿಚಾರ ಎಂದು ಅವರು ಹೇಳಿದರು.

ಶ್ರೀರಾಮ ಕೋಟೀಶ್ವರ ಕಲಾ ಸಂಘದ ಅಧ್ಯಕ್ಷ ಬಿ. ಜಿ. ಸೀತಾರಾಮ ಧನ್ಯ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಎಚ್. ರಾಮಚಂದ್ರ ವರ್ಣ, ಉಪಾಧ್ಯಕ್ಷ ಸುಬ್ರಹ್ಮಣ್ಯ ಶೆಟ್ಟಿ, ಕಾರ್ಯದರ್ಶಿ ದಿನೇಶ್ ಎಚ್. ಸುವರ್ಣ, ಪ್ರಧಾನ ಸಂಚಾಲಕ ರಮೇಶ್ ಪುತ್ರನ್ ಸುಮಂಗಲಿಯರು ಪೂರ್ಣಕುಂಭ ಸ್ವಾಗತದೊಂದಿಗೆ ಗಣ್ಯರನ್ನು ಬರಮಾಡಿಕೊಂಡರು. ಹಳೆ ಅಳಿವೆಯ ಶ್ರೀರಾಮ ಭಜನಾ ಮಂಡಳಿ ಮಹಿಳೆಯರು ಕುಣಿತ ಭಜನೆ ಮತ್ತು ಬಂಡಿಮಠ ನಾಗರಾಜ ಅಡಿಗ ಭಕ್ತಿ ಗೀತೆಗಳನ್ನು ಹಾಡಿ ರಂಜಿಸಿದರು.

ಫಲಿತಾಂಶ: ಮಹಿಳಾ ಕುಣಿತ ಭಜನಾ ಸ್ಪರ್ಧೆಯಲ್ಲಿ 14 ತಂಡಗಳು ಭಾಗವಹಿಸಿದ್ದವು. ಮಂಗಳೂರು ಹೊಸಬೆಟ್ಟಿನ ಬಾಲವಿಕಾಸ ಭಜನಾ ಮಂಡಳಿ ಪ್ರಥಮ ಬಹುಮಾನ ₹ 25,555, ಉಡುಪಿ ಮುಳ್ಳುಗುಡ್ಡೆ ಬನಶಂಕರಿ ಮಹಿಳಾ ಭಜನಾ ಮಂಡಳಿ ದ್ವಿತೀಯ ₹15,555 ಹಾಗೂ ಕಾರ್ಕಳ ಕಡ್ತಲದ ದುರ್ಗಾಪರಮೇಶ್ವರಿ ಭಜನಾ ಮಂಡಳಿಗೆ ತೃತೀಯ ಬಹುಮಾನ ₹ 10,555 ನೀಡಲಾಯಿತು.

ಬಿ. ಜಿ. ಸೀತಾರಾಮ ಧನ್ಯ, ಪಿ. ಗಣಪಯ್ಯ ಚಡಗ, ರವೀಂದ್ರ ಐತಾಳ್ ಹಾಗೂ ಭಾಗ್ಯಲಕ್ಷ್ಮಿ ತೀರ್ಪುಗಾರರಾಗಿದ್ದರು. ಸುಮಶ್ರೀ ಧನ್ಯ ಪ್ರಾರ್ಥಿಸಿದರು, ಕಲಾಸಂಘದ ಗೌರವ ಸಲಹೆಗಾರ ಎಂ. ಪ್ರಭಾಕರ ಶೆಟ್ಟಿ ಸ್ವಾಗತಿಸಿದರು, ಗೌರವ ಸಲಹೆಗಾರ ಕೆ. ಜಿ. ವೈದ್ಯ ನಿರೂಪಿಸಿದರು.

Exit mobile version