Kundapra.com ಕುಂದಾಪ್ರ ಡಾಟ್ ಕಾಂ

ಶ್ರದ್ಧಾ ಕೇಂದ್ರಗಳಿಂದ ಸಮಾಜದಲ್ಲಿ ಜಾ‍ಗೃತಿ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರದ್ಧಾ ಕೇಂದ್ರಗಳು ಸಮಾಜದಲ್ಲಿ ಒಗ್ಗಟ್ಟು, ಜಾಗೃತಿ, ಸಾಂಸ್ಕೃತಿಕ ಪ್ರಜ್ಞೆ ಜಾಗೃತಗೊಳಿಸುತ್ತವೆ. ನಮ್ಮ ಶ್ರೇಷ್ಠ ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಲು ದೇವಸ್ಥಾನ, ದೈವಸ್ಥಾನಗಳು ಶಕ್ತಿಶಾಲಿ ವೇದಿಕೆಗಳು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ವಂಡ್ಸೆ ಯಕ್ಷೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನಡೆದ ಯಕ್ಷೀ ಅನ್ನಪೂರ್ಣೇಶ್ವರಿ ಯುವ ಸಂಘಟನೆ ದಶಮಾನೋತ್ಸವ ಶಿವರಾತ್ರಿ ಉತ್ಸವದಲ್ಲಿ ಮಾತನಾಡಿದರು.

ಉತ್ಸವವನ್ನು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿಲ್ಲೆಯ ಧಾರ್ಮಿಕ ಮುಂದಾಳು ಬಿ. ಅಪ್ಪಣ್ಣ ಹೆಗ್ಡೆ ಅವರನ್ನು ‘ಧಾರ್ಮಿಕ ಮಾಣಿಕ್ಯ’ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರನ್ನು ‘ನಮ್ಮೂರ ಮಾಣಿಕ್ಯ’ ಶೆಫ್‌ಕಾಟ್ ಫುಡ್ ಅಂಡ್ ಹಾಸ್ಪಿಟಾಲಿಟಿ ಸರ್ವಿಸಸ್ ಸಂಸ್ಥಾಪಕ ಗೋವಿಂದ ಬಾಬು ಪೂಜಾರಿ ಅವರನ್ನು ‘ಉದ್ಯೋಗ ಮಾಣಿಕ್ಯ’ ಬಿರುದಿ ನೀಡಿ ಸನ್ಮಾನಿಸಲಾಯಿತು.

ಯುವ ಸಂಘಟನೆ ಅಧ್ಯಕ್ಷ ಗಣೇಶ ದೇವಾಡಿಗ ಅಡಿಕೆಕೊಡ್ಲು ಅಧ್ಯಕ್ಷತೆ ವಹಿಸಿದ್ದರು. ಮಂಜುನಾಥ ಭಟ್ ಕಲ್ಯಾಣಪುರ ಆಶೀರ್ವಚನ ನೀಡಿದರು. ಉದ್ಯಮಿ ಗುರುರಾಜ್ ಪಂಜು ಪೂಜಾರಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯಕುಮಾರ ಶೆಟ್ಟಿ, ಸದಸ್ಯರಾದ ಪ್ರಶಾಂತ್ ಪೂಜಾರಿ, ಗೋವರ್ಧನ ಜೋಗಿ, ಉದ್ಯಮಿ ಗಣೇಶ ಶೆಟ್ಟಿ ಹೊಸೂರು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸತೀಶ ನಾಯ್ಕ, ಪ್ರೇಮಾನಂದ ಆಚಾರ್ಯ ಇದ್ದರು.

ಕ್ಷೇತ್ರದ ಮುಖ್ಯಸ್ಥ ಭಾಸ್ಕರ ಪ್ರಾಸ್ತಾವಿಕ ಮಾತನಾಡಿದರು. ಬಿ. ಎಂ. ಸುಕುಮಾರ ಶೆಟ್ಟಿ, ಉದಯಕುಮಾರ್ ಶೆಟ್ಟಿ, ಯುವ ಸಂಘಟನೆ ಮಾಜಿ ಅಧ್ಯಕ್ಷರನ್ನು ಗೌರವಿಸಲಾಯಿತು.

ವಾಸು ಜಿ.ನಾಯ್ಕ್ ಸ್ವಾಗತಿಸಿ, ನಿರೂಪಿಸಿದರು. ಮಾಜಿ ಅಧ್ಯಕ್ಷ ನಾಗರಾಜ ಆಚಾರ್ಯ ವರದಿ ವಾಚಿಸಿದರು. ಮಣಿಕಂಠ ಪೂಜಾರಿ ವಂದಿಸಿದರು. ರಾಜೇಂದ್ರ ಹಳ್ಳೂರ ತಂಡದಿಂದ ರಸಮಂಜರಿ, ರಾಘವೇಂದ್ರ ಭಜನಾ ಮಂಡಳಿಯಿಂದ ಭಜನೆ, ಮೊಗವೀರ ಪೇಟೆ ದುರ್ಗಾಪರಮೇಶ್ವರಿ ಚಂಡೆ ಬಳಗದಿಂದ ಚಂಡೆವಾದನ, ಕಲಾಸ್ಫೂರ್ತಿ ತಂಡದಿಂದ ನಾಟಕ ಪ್ರದರ್ಶನಗೊಂಡುವು.

 

Exit mobile version