Kundapra.com ಕುಂದಾಪ್ರ ಡಾಟ್ ಕಾಂ

ದೇವರಾಜ್ ಅರಸು ಹಿಂದುಳಿದ ವರ್ಗಗಳ ಸೂರ್ಯ

ಕುಂದಾಪುರ: ಹಿಂದುಳಿದ ವರ್ಗಗಳ ಮುಂದಿರುವ ಸವಾಲುಗಳು, ಮಿತಿಗಳನ್ನು ಬಹಳಷ್ಟು ಅರ್ಥಸಿಕೊಂಡ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಅರಸು ಅವರು ಮೇಲ್ಪಂಕ್ತಿಯಲ್ಲಿ ಕಾಣಿಸುತ್ತಾರೆ.  ಇಂದು ಯಾವುದೇ ಕ್ಷೇತ್ರದಲ್ಲಿ ದಲಿತರಿಗೆ, ಹಿಂದುಳಿದವರಿಗೆ ಬಡವರ್ಗಕ್ಕೆ ಸಮಾನತೆಯ ನೀತಿಯ ಕೊಡುಗೆಯನ್ನು ನೀಡಿದ್ದೇ ದೇವರಾಜು ಅರಸುವರ ಚಿಂತನೆಗಳು ಹಾಗೂ ಆದರ್ಶಗಳು. ಅವರೊಬ್ಬ ಹಿಂದುಳಿದ ವರ್ಗಗಳ ಸೂರ್ಯ ಎಂದರು ಕೋಟ ಪಡುಕೆರೆಯ ಸೋಮ ಬಂಗೇರ ಸರಕಾರಿ  ಪ್ರಥಮ ದರ್ಜೆ ಕಾಲೇಜಿನ  ಪ್ರಾಂಶುಪಾಲ ಡಾ|ರಾಜೇಂದ್ರ ಎಸ್.ನಾಯಕ್ ಹೇಳಿದರು.

ಅವರು ಕುಂದಾಪುರ ತಾ.ಪಂ.ನಲ್ಲಿ  ಗುರುವಾರ ತಾಲೂಕು ಆಡಳಿತ, ತಾ.ಪಂ. ಕುಂದಾಪುರ, ಪುರಸಭೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಆಶ್ರಯದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ದಿ| ಡಿ.ದೇವರಾಜ್ ಅರಸು ಅವರ ಜನ್ಮ ಶತಮಾನೋತ್ಸವ ದಿನಾಚರಣೆಯಂದು ದೇವರಾಜ್ ಅರಸು-ಬದುಕು-ಸಾಧನೆ-ಚಿಂತನೆ ಬಗ್ಗೆ ಉಪನ್ಯಾಸ ನೀಡಿದರು.

ಸಮಾರಂಭವನ್ನು ಉದ್ಘಾಟಿಸಿದ ಕುಂದಾಪುರ ಪುರಸಭೆಯ ಅಧ್ಯಕ್ಷೆ ಕಲಾವತಿ ಯು.ಎಸ್. ಮಾತನಾಡಿ, ಹಿಂದುಳಿದ ವರ್ಗಗಳ ಧೀಮಂತ ನಾಯಕ, ಪರಿವರ್ತನೆಯ ಹರಿಕಾರ ಮಾಜಿ ಮುಖ್ಯಮಂತ್ರಿ ದಿ| ಡಿ.ದೇವರಾಜ್ ಅರಸ್ ಅವರ ಸಾಧನೆ ನಮ್ಮೆಲ್ಲರಿಗೂ ಮಾರ್ಗದರ್ಶಿಯಾಗಿದೆ. ಅವರು ಹಿಂದುಳಿದ ವರ್ಗಗಳ ಅಭಿವೃದ್ಧಿಗೋಸ್ಕರ ಮಾಡಿದ ಕಾರ್ಯ ಶ್ಲಾಘನೀಯವಾದದು. ಅವರು ದೀನ ದಲಿತರಿಗಾಗಿ ತೆಗೆದುಕೊಂಡ ನಿರ್ಧಾರಗಳು, ಯೋಜನೆಗಳು ಇಂದಿಗೂ ಪ್ರಸತುತವಾಗಿದೆ. ಅವರ ರಾಜಕೀಯ ನಡೆ, ಚಿಂತನೆ ಇಂದಿನ ರಾಜಕಾರಣಿಗಳಿಗೆ ಮಾರ್ಗದರ್ಶಕ ಎಂದರು.

ತಾ.ಪಂ.ಅಧ್ಯಕ್ಷ ಭಾಸ್ಕರ ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಹಿರಿಯಣ್ಣ, ಜಿ.ಪಂ. ಉಪಾಧ್ಯಕ್ಷ ಪ್ರಕಾಶ್ ಟಿ.ಮೆಂಡನ್, ತಾ.ಪಂ.ಸದಸ್ಯ  ರಾಜು ಪೂಜಾರಿ, ಪುರಸಭೆಯ ಸದಸ್ಯರು  ಉಪಸ್ಥಿತರಿದ್ದರು.

ಕುಂದಾಪುರ ತಹಶೀಲ್ದಾರ್ ಗಾಯತ್ರಿ ನಾಯಕ್ ಶೆಟ್ಟಿ ಸ್ವಾಗತಿಸಿದರು. ನರಸಿಂಹ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.

Exit mobile version