Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಅಭಿಷೇಕ್‌ ಶೆಟ್ಟಿಗೆ ಗೇಟ್ ಪರೀಕ್ಷೆಯಲ್ಲಿ 5ನೆ ರ‍್ಯಾಂಕ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಉಳ್ಳೂರು ಕಟ್ಟಿನಬೈಲಿನ ಅಭಿಷೇಕ್ ಶೆಟ್ಟಿ 2021ರ ಗೇಟ್ (ಗ್ರ್ಯಾಜುವೇಟ್ ಅಪ್ಟಿಟ್ಯೂಡ್ ಟೆಸ್ಟ್ ಇನ್ ಎಂಜಿನಿಯರಿಂಗ್) ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 5ನೆ ರ‍್ಯಾಂಕ್ ಗಳಿಸಿ ವಿಕ್ರಮ ಮೆರೆದಿದ್ದಾರೆ.

ತೀರ ಗ್ರಾಮೀಣ ಪ್ರದೇಶದ ಬಡ ಕುಟುಂಬಕ್ಕೆ ಸೇರಿರುವ ಅಭಿಷೇಕ್, ಪಿಯುಸಿ ವರೆಗಿನ ಶಿಕ್ಷಣವನ್ನು ಉಳ್ಳೂರು ಮತ್ತು ಶಂಕರನಾರಾಯಣದಲ್ಲಿ ಪಡೆದರು. ಆ ಬಳಿಕ ಮೈಸೂರಿನ ಎನ್‌ಐಇಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಯನ್ನು ಎರಡು ಚಿನ್ನದ ಪದಕಗಳೊಂದಿಗೆ ಗಳಿಸಿದರು. 2020ರ ಗೇಟ್ ಪರೀಕ್ಷೆಯಲ್ಲಿ ಅವರಿಗೆ ರಾಷ್ಟ್ರಮಟ್ಟದಲ್ಲಿ 789ನೆ ರ‍್ಯಾಂಕ್ ಬಂತು. ಇದರಿಂದ ತೃಪ್ತರಾಗದ ಅವರು ಛಲದೊಂದಿಗೆ ಸತತ ಅಧ್ಯಯನ ನಡೆಸಿ 2021ರಲ್ಲಿ ಎರಡನೆ ಬಾರಿ ಪರೀಕ್ಷೆ ಎದುರಿಸಿದರು. ಅದರಲ್ಲಿ ಗಳಿಸಿದ 5ನೆ ರ‍್ಯಾಂಕ್ ಇದೀಗ ಅವಕಾಶದ ಬಾಗಿಲುಗಳನ್ನು ತೆರೆದಿದೆ. ಅವರು ದೇಶದ ಪ್ರತಿಷ್ಠಿತ ಐಐಎಸ್‌ಸಿ, ಐಐಟಿ, ಎನ್‌ಐಟಿಗಳಲ್ಲಿ ತಮ್ಮ ಶಿಕ್ಷಣ ಮುಂದುವರಿಸಬಹುದು ಅಥವಾ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ, ಕೇಂದ್ರ ಸರ್ಕಾರದಲ್ಲಿ ಉದ್ಯೋಗ ಪಡೆಯಬಹುದು.

ಅವರ ತಂದೆ ಬೈಂದೂರು ತಾಲ್ಲೂಕಿನ ಹೇರೂರು ಗ್ರಾಮದ ಯರುಕೋಣೆ ಗೋವೆಬೆಟ್ಟು ಸುರೇಶ ಶೆಟ್ಟಿ, ತಾಯಿ ಕುಂದಾಪುರ ತಾಲ್ಲೂಕು ಉಳ್ಳೂರು ಕಟ್ಟಿನಬೈಲು ಸಂಪಾವತಿ ಶೆಟ್ಟಿ. ಅಭಿಷೇಕ್ ಅವರಷ್ಟೇ ಪ್ರತಿಭಾವಂತರಾಗಿರುವ ಸಹೋದರ ಕೀರ್ತನ್ ಶೆಟ್ಟಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ.

 

Exit mobile version