Kundapra.com ಕುಂದಾಪ್ರ ಡಾಟ್ ಕಾಂ

ಬಗ್ವಾಡಿಯಲ್ಲಿ ಗುರಿಕಾರರ ಸಮಾವೇಶ: ಗ್ರಾ.ಪಂ. ಚುನಾಯಿತ ಪ್ರತಿನಿಧಿಗಳಿಗೆ ಅಭಿನಂದನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಕುಂದಾಪುರ ಶಾಖೆಯ ಆಶ್ರಯದಲ್ಲಿ ಗುರಿಕಾರರ ಸಮಾವೇಶ, ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಆಯ್ಕೆಯಾದ ಹೋಬಳಿ ವ್ಯಾಪ್ತಿಯ ಮೊಗವೀರ ಸಮಾಜದ ಪ್ರತಿನಿಧಿಗಳಿಗೆ ಅಭಿನಂದನಾ ಕಾರ್ಯಕ್ರಮ ಇಲ್ಲಿನ ಶ್ರೀಮಹಿಷಾಸುರಮರ್ದಿನಿ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಮೀನುಗಾರರ ಕ್ರಿಯಾ ಸಮಿತಿ ಅಧ್ಯಕ್ಷರಾದ ಜಯ ಸಿ. ಕೋಟ್ಯಾನ್ ಉದ್ಘಾಟಿಸಿ, ಮೊಗವೀರರೆಲ್ಲರೂ ಒಂದಾಗಬೇಕು. ಉಪ್ಪಳದಿಂದ ಶಿರೂರು ತನಕದ ಎಲ್ಲ ಮೊಗವೀರರನ್ನು ಒಂದಾಗಿಸುವ ಪ್ರಯತ್ನ ನಡೆಯುತ್ತಿದೆ. ಶೈಕ್ಷಣಿಕವಾಗಿ, ಆರ್ಥಿಕವಾಗಿ, ಧಾರ್ಮಿಕವಾಗಿ ಸಮಾಜ ಇನ್ನೂ ಮುಂದೆ ಬರಬೇಕು. ಆ ಹಿನ್ನೆಲೆಯಲ್ಲಿ ಸಮಾಜದ ಧಾರ್ಮಿಕ ಸ್ಥಳಗಳ ಜೀರ್ಣೋದ್ದಾರದ ಬಳಿಕ ಎಲ್ಲ ಸಮಾಜದವರು ನಮ್ಮ ಸಮಾಜವನ್ನು ನೋಡುವಂತಾಗಿದೆ. ಗುರಿಕಾರರು ಕೂಡಾ ಅಷ್ಟೆ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ, ಶುಭ ಅಶುಭ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಂಪ್ರದಾಯವನ್ನು ಮುಂದುವರಿಸುವುದು, ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಕಾರ್ಯ ಮಾಡಬೇಕಿದೆ ಎಂದರು.

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಕುಂದಾಪುರ ಶಾಖೆಯ ಅಧ್ಯಕ್ಷ ಕೆ.ಕೆ ಕಾಂಚನ್ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಯಕ್ಷಕವಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಪ್ರಸಾದ್ ಕುಮಾರ್ ಮೊಗೆಬೆಟ್ಟು, ಮೀನುಗಾರರ ಕ್ರಿಯಾ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಜಯ ಸಿ. ಕೋಟ್ಯಾನ್, ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ಕೆ.ಎಂ.ಶಿವರಾಮ್ ಇವರನ್ನು ಸನ್ಮಾನಿಸಲಾಯಿತು. ಬಗ್ವಾಡಿ ಹೋಬಳಿ ವ್ಯಾಪಿಯ ಗುರಿಕಾರರನ್ನು ಗೌರವಿಸಲಾಯಿತು. ೨೦೧೯ರ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರು, ಅಧ್ಯಕ್ಷರು ಉಪಾಧ್ಯಕ್ಷರನ್ನು, ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್, ಸದಸ್ಯರು, ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯೆ ರತ್ನ ರಮೇಶ ಕುಂದರ್ ಅವರನ್ನು ಸನ್ಮಾನಿಸಲಾಯಿತು.

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಕುಂದಾಪುರ ಶಾಖೆಯ ಮಾಜಿ ಅಧ್ಯಕ್ಷರಾದ ಎಮ್.ಎಮ್ ಸುವರ್ಣ, ಬಿ.ಹೆರಿಯಣ್ಣ, ಉಪಾಧ್ಯಕ್ಷ ಪುಂಡಲಿಕ ಬಂಗೇರ, ಜಿ.ಪಂ ಸದಸ್ಯೆ ಶೋಭಾ ಪುತ್ರನ್, ಹಕ್ಲಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಚೇತನ್ ಮೊಗವೀರ, ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್, ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯೆ ರತ್ನಾ ರಮೇಶ ಕುಂದರ್, ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕದ ಅಧ್ಯಕ್ಷ ರವೀಶ ಕೊರವಡಿ, ಕುಂದಾಪುರ ಘಟಕದ ಅಧ್ಯಕ್ಷ ಗಣೇಶ ಮೆಂಡನ್, ಹೆಮ್ಮಾಡಿ ಘಟಕದ ಅಧ್ಯಕ್ಷ ಪ್ರಭಾಕರ ಸೇನಾಪುರ, ಬೈಂದೂರು ಘಟಕದ ಅಧ್ಯಕ್ಷ ರವಿರಾಜ ಚಂದನ್, ಶಂಕರನಾರಾಯಣ ಹಾಲಾಡಿ ಘಟಕದ ಅಧ್ಯಕ್ಷ ಶೇಖರ ತೋಳಾರ್ ಉಪಸ್ಥಿತರಿದ್ದರು.

ಬಗ್ವಾಡಿ ಹೋಬಳಿ ಸ್ತ್ರೀಶಕ್ತಿಯ ನೂತನ ಅಧ್ಯಕ್ಷೆ ಸುಮತಿ ಆನಂದ ಮೊಗವೀರ, ಕಾರ್ಯದರ್ಶಿ ಭಾಗ್ಯವತಿ ಇವರಿಗೆ ಕಡತವನ್ನು ಹಸ್ತಾಂತರಿಸಲಾಯಿತು. ಚಿನ್ಮಯ್ ಪ್ರಾರ್ಥಿಸಿ, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಕುಂದಾಪುರ ಶಾಖೆಯ ಕಾರ್ಯದರ್ಶಿ ಸುರೇಶ ವಿಠಲವಾಡಿ ಟಿಪ್ಪಣಿ ವಾಚಿಸಿದರು. ಜತೆ ಕಾರ್ಯದರ್ಶಿ ರಾಜು ಶ್ರೀಯಾನ್ ಸ್ವಾಗತಿಸಿ, ಸುಧಾಕರ ಕಾಂಚನ್ ಸನ್ಮಾನಿತರ ಪರಿಚಯಿಸಿದರು. ಪಾಂಡುರಂಗ ಬೈಂದೂರು ಕಾರ್ಯಕ್ರಮ ನಿರ್ವಹಿಸಿ, ರಾಘವೇಂದ್ರ ನೆಂಪು ವಂದಿಸಿದರು.

 

Exit mobile version