Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಪುರಸಭೆಯ ತೆರಿಗೆ ಹೊರೆ, ಪಾರ್ಕಿಂಗ್ ಸಮಸ್ಯೆಯ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪುರಸಭೆ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ತೆರಿಗೆ ಹೊರೆ, ಪೂರ್ಣಗೊಳ್ಳದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ, ನಗರದಲ್ಲಿನ ಪಾರ್ಕಿಂಗ್ ಸಮಸ್ಯೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.

ಪುರಜನರ ಬಗ್ಗೆ ಕಾಳಜಿ ಇಟ್ಟು ಜನರಿಗೆ ಹೊರೆಯಾಗದ ನಿರ್ಣಯ ತೆಗೆದುಕೊಳ್ಳಬೇಕಾದ ಕಾಲಘಟ್ಟದಲ್ಲಿ, ನೀವು ಬಿಜೆಪಿ ಸರ್ಕಾರ ಪರವಾದ ನಿರ್ಣಯ ತೆಗೆದುಕೊಳ್ಳುತ್ತಿದ್ದೀರಿ ಎಂದು ಪುರಸಭೆಯ ಕಾಂಗ್ರೆಸ್ ಸದಸ್ಯ ಕೆ. ಚಂದ್ರಶೇಖರ ಖಾರ್ವಿ ಅವರು ಮಾತು ಸಭೆಯಲ್ಲಿ ಆಡಳಿತ ವಿರೋಧ ಪಕ್ಷದ ನಡುವೆ ಕಾವೇರಿದ ಚರ್ಚೆಗೆ ಕಾರಣವಾಯಿತು.

ಕೊರೋನಾ ಕಾರಣದಿಂದ ದೇಶವೇ ಆರ್ಥಿಕ ಸಂಕಷ್ಟದಲ್ಲಿ ಇರುವ ಸಂದರ್ಭದಲ್ಲಿ ತೆರಿಗೆ ಏರಿಸುವ ಅವಶ್ಯಕತೆ ಏನಿತ್ತು. ತೆರಿಗೆ ಏರಿಕೆ ಮಾಡದಂತೆ ಆಗ್ರಹಿಸಿ ಸಭಾತ್ಯಾಗ ಮಾಡಿದ್ದರೂ, ತೆರಿಗೆ ಏರಿಕೆ ಮಾಡುವ ಪ್ರಾಸ್ತಾಪವನ್ನು ಸರ್ಕಾರಕ್ಕೆ ಕಳುಹಿಸುವ ಔಚಿತ್ಯವೇನಿತ್ತು. ತೆರಿಗೆ ಏರಿಕೆಯಿಂದ ಜನರಿಗೆ ಸಮಸ್ಯೆಯಾಗುವುದರಿಂದ ವರದಿಯನ್ನು ಇನ್ನೊಮ್ಮೆ ಪರಾಮರ್ಶೆ ಮಾಡುವಂತೆ ಆಗ್ರಹಿಸಿದರು.

ಆಡಳಿತ ಪಕ್ಷದ ಸದಸ್ಯ ಗಿರೀಶ್ ಜಿ.ಕೆ, ಮಾತನಾಡಿ, ತೆರಿಗೆ ಪರಿಷ್ಕರಣೆ ಕುರಿತಾದ ಸುತ್ತೋಲೆಯ ಕುರಿತು ಅಧಿಕಾರಿಗಳು ಸವಿವರವಾಗಿ ತಿಳಿಸಲು ಸಭೆಯಲ್ಲಿ ಸಿದ್ದವಿದ್ದರೂ, ತಾಳ್ಮೆ ಇಲ್ಲದೆ ಸಭಾತ್ಯಾಗ ಮಾಡಿದ ವಿರೋಧ ಪಕ್ಷದವರು, ಇದೀಗ ನಾವು ಜನಪರವಾಗಿದ್ದೇವೆ ಎಂದು ಜನರ ಕಣ್ಣಿಗೆ ಮಣ್ಣೇರಚುವುದು ಬೇಡ ಎಂದರು.

ಪೂರಕವಾಗಿ ಮಾತನಾಡಿದ ಕೆ. ಮೋಹನದಾಸ್ ಶೆಣೈ ಅವರು, ವಿರೋಧ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇನ್ನೊಂದು ಸಭೆಯನ್ನು ಮಾಡುವ, ಜನಪರವಾದ ಕೆಲಸಕ್ಕೆ ಎಲ್ಲರೂ ಒಟ್ಟಾಗಿ ಹೋಗುವ ಎಂದು ಸಲಹೆ ನೀಡಿದರು.

ಶಾಸ್ತ್ರಿ ಸರ್ಕಲ್ ಬಳಿಯ ಫ್ಲೈ ಓವರ್ ಕಾಮಗಾರಿ ಇನ್ನೂ ಮುಗಿದಿಲ್ಲ, ನಗರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ೬೬ ಎಂದು ವಾಹನ ಸಂಚಾರಕ್ಕೆ ಮುಕ್ತವಾಗುತ್ತದೆ. ಮಾ.೩೧ ರ ಒಳಗೆ ಸಂಚಾರಕ್ಕೆ ಬಿಟ್ಟು ಕೊಡುತ್ತೇವೆ ಎಂದರೂ ಇನ್ನೂ ಕೆಲಸವೇ ಮುಗಿದಿಲ್ಲ. ಪ್ರತಿ ಬಾರಿಯೂ ಕುಂಟು ನೆವಗಳನ್ನು ಹೇಳಿ ಗಡುವು ಮುಂದುವರಿಸುತ್ತೀರಿ ಎಂದು ಆಕ್ಷೇಪಿಸಿದ ಸದಸ್ಯರಿಗೆ ಉತ್ತರಿಸಿದ ಗುತ್ತಿಗೆ ಕಂಪೆನಿ ಅಧಿಕಾರಿ, ಮಾ.೩೧ ಕ್ಕೆ ಬಿಟ್ಟು ಕೊಡುತ್ತೇವೆ ಎಂದಿರುವುದು ಹಾಗೂ ವಿಳಂಭವಾಗಿರವುದು ನಿಜ. ಜಲ್ಲಿ ಸಮಸ್ಯೆಯಿಂದಾಗಿ ಹೀಗಾಗಿದೆ ಎ.೧೫ ರಿಂದ ೨೦ ರ ಒಳಗೆ ಸಂಚಾರಕ್ಕೆ ಮುಕ್ತ ಮಾಡುವುದಾಗಿ ಹೊಸ ಭರವಸೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿರೋಧ ಪಕ್ಷ ನಾಯಕ ಚಂದ್ರಶೇಖರ ಖಾರ್ವಿ ಹೇಳಿದ ದಿನಾಂಕದ ಒಳಗೆ ಬಿಟ್ಟು ಕೊಡದೆ ಇದ್ದರೆ ಕಾಮಗಾರಿ ಸ್ಥಳದಲ್ಲಿ ಕುಳಿತು ಭಜನೆ ಮಾಡುವುದಾಗಿ ತಿಳಿಸಿದರು.

ನಗರದಲ್ಲಿನ ಪಾರ್ಕಿಂಗ್ ಸಮಸ್ಯೆ ಬಗ್ಗೆ ಪ್ರಾಸ್ತಾಪ ಮಾಡಿದ ಸದಸ್ಯ ಗಿರೀಶ್ ಜಿ.ಕೆ, ಪುರಸಭೆಯ ಜಾಗದಲ್ಲಿ ಬೋರ್ಡ್ ಹಾಕಿ ವಾಹನ ನಿಲುಗಡೆ ಮಾಡದಂತೆ ತಾಕೀತು ಮಾಡೋದು ಯಾವ ನ್ಯಾಯ ಎಂಬ ಮಾತಿಗೆ ಸದಸ್ಯರಾದ ಪ್ರಭಾವತಿ ಶೆಟ್ಟಿ, ಪ್ರಭಾಕರ ವಿ, ದೇವಕಿ ಪಿ. ಸಣ್ಣಯ್ಯ, ಚಂದ್ರಶೇಖರ ಖಾರ್ವಿ, ಅಶ್ಫಾಕ್ ಕೋಡಿ, ಶ್ರೀಧರ ಶೇರುಗಾರ, ಕೆ. ಮೋಹನಹಾಸ್ ಶೆಣೈ ಧ್ವನಿಗೂಡಿಸಿದರು.

ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಖಾಸಗಿ ಜಾಗದಲ್ಲಿ ಶೇ.೧ ಪುರಸಭೆಗೆ ಬಿಟ್ಟು ಕೊಡಬೇಕು. ಜಾಗ ಅವರ ಹೆಸರಿನಲ್ಲಿ ಇದ್ದರೂ, ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿಗೆ ಅದನ್ನು ಸೆಟ್ ಬ್ಯಾಕ್ ಆಗಿ ಬಳಕೆಯಾಗುತ್ತದೆ. ಅನಾವಶ್ಯಕವಾಗಿ ಫಲಕ ಅಳವಡಿಕೆ ಮಾಡಿದವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.

ಪುರಸಭಾಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಂದೀಪ್ ಖಾರ್ವಿ, ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ ಪೂಜಾರಿ, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.

Exit mobile version