Kundapra.com ಕುಂದಾಪ್ರ ಡಾಟ್ ಕಾಂ

ನೈಕಂಬ್ಳಿ ಪ್ರೇರಣೋತ್ಸವದಲ್ಲಿ ಕೃಷಿ ಋಷಿ , ಚಪ್ಪಾಳೆ ಹಾಗೂ ಪ್ರೇರಣಾ ಪುರಸ್ಕಾರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಚಿತ್ತೂರು ಗ್ರಾಮದ ನೈಕಂಬ್ಳಿಯಲ್ಲಿ ಪ್ರೇರಣಾ ಯುವ ವೇದಿಕೆ ನೈಕಂಬ್ಳಿ ಹಮ್ಮಿಕೊಂಡಿರುವ ಪ್ರೇರಣೋತ್ಸವ-2021 ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶಿಷ್ಟವಾಗಿ ಜರುಗಿತು.

ವಿಭಿನ್ನವಾಗಿ ವಿಳ್ಯದೆಲೆ ಹಾಗೂ ಶಲ್ಯದೊಂದಿಗೆ ವೇದಿಕೆಗೆ ಗಣ್ಯರನ್ನು ಸ್ವಾಗತಿಸಿಲಾಯಿತು. ತೆಂಗಿನ ಗಿಡಕ್ಕೆ ನೀರೆರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಮ್ ಎಸ್ ಮಂಜ ಚಾರಿಟಬಲ್ ಟ್ರಸ್ಟ್ ನ ಪ್ರವರ್ತಕರಾದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ವಹಿಸಿದ್ದರು.

ಸ್ಮರಣಿಕೆಯಾಗಿ ಸಮರ ಭೈರವಿ ಎಂಬ ಸೈನ್ಯದ ಕುರಿತಾದ ಪುಸ್ತಕವನ್ನು ಅತಿಥಿಗಳಿಗೆ ನೀಡಲಾಯಿತು. ಪ್ರೇರಣಾ ಪುರಸ್ಕಾರವನ್ನು ನಿವೃತ್ತ ಶಿಕ್ಷಕರಾದ ನಾರಾಯಣ ಶೆಟ್ಟಿ ಕುಂಜ್ಞಾಡಿ ಮೇಲ್ಮನೆ ಅವರಿಗೆ ಪ್ರದಾನಿಸಲಾಯಿತು. ಕೃಷಿ ಋಷಿ ಪ್ರಶಸ್ತಿಯನ್ನು ರಘುರಾಮ ಶೆಟ್ಟಿ ಬೆಟ್ಟಿನಮನೆ ಅವರಿಗೂ ಹಾಗೂ ಚಪ್ಪಾಳೆಯನ್ನು ಸಿ.ಎ.ಗುರುರಾಜ್ ಶೆಟ್ಟಿ ಅವರಿಗೆ ಸಮ್ಮಾನಿಸಿ ಗೌರವಿಸಲಾಯಿತು. ಅಗಲಿದ ದಂಪತಿಗಳ ನೆನಪಿನ ‘ವಿದ್ಯಾಚೇತನ’ ಪುರಸ್ಕಾರವನ್ನು ಸಮೀಕ್ಷಾ ಮತ್ತು ಮಿಥುನ್ ಪುಟಾಣಿಗಳಿಗೆ ನೀಡಿ ಗೌರವಿಸಲಾಯಿತು.

ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ನೈಕಂಬ್ಳಿಯ ಹತ್ತು ವಿದ್ಯಾರ್ಥಿನಿಯರನ್ನು ವೇದಿಕೆಯಲ್ಲಿ ಗುರುತಿಸಲಾಯಿತು. ನವೀನ್ ಕೋಟ ನಿರ್ದೇಶನದಲ್ಲಿ ಸ್ಥಳೀಯ ಪುಟಾಣಿ ಮಕ್ಕಳಿಂದ ಪಂಚವಟಿ ಯಕ್ಷಗಾನ ರೂಪಕದಿಂದ ಕಾರ್ಯಕ್ರಮ ಆರಂಭಗೊಂಡಿತು. ನಂತರ ನೈನಾ ತಂಡದವರು ನಾದಾರ್ಚನೆ ಕಾರ್ಯಕ್ರಮ ನೆಡೆಸಿದರು. ನಂತರ ಉಡುಪಿ ಜಿಲ್ಲೆಯ ಆರು ಹೆಸರಾಂತ ನಾಟಕ ತಂಡಗಳಿಂದ ಪ್ರಹಸನ ಸ್ಪರ್ಧೆ ನೆಡಯಿತು. ಪ್ರಥಮ ಬಹುಮಾನವನ್ನು ವಿಆರ್ ಪ್ರೆಂಡ್ಸ್ ಸಾಸ್ತಾನ ಹಾಗೂ ದ್ವಿತೀಯ ಬಹುಮಾನವನ್ನು ಕಲಾದೇಗುಲ ಉಪ್ಪೂರು ಪಡೆದುಕೊಂಡರು.

ಈ ಸಂದರ್ಭದಲ್ಲಿ ಬೈಂದೂರು ಶಾಸಕರಾದ ಬಿ.ಎಂ ಸುಕುಮಾರ್ ಶೆಟ್ಟಿ, ಕೆರಾಡಿ ಚಂದ್ರಶೇಖರ ಶೆಟ್ಟಿ, ದೀಪಕ್ ಕುಮಾರ್ ಶೆಟ್ಟಿ ಬಾರ್ಕೂರು , ಜನಸೇವಾ ಟ್ರಸ್ಟ್ನ ವಸಂತ್ ಗಿಳಿಯಾರ್, ವೇದಿಕೆಯ ಗೌರವಾದ್ಯಕ್ಷರಾದ ರಾಮಚಂದ್ರ ಮಂಜ, ಪಂಚಾಯತ್ ಅಧ್ಯಕ್ಷರಾದ ಜಯಂತಿ ಪೂಜಾರಿ, ತಾ.ಪಂಚಾಯತ್ ಸದಸ್ಯ ಉದಯ್ ಜಿ ಪೂಜಾರಿ, ಹಾಗೂ ಪ್ರಮುಖರಾದ ದಿವಾಕರ್ ಆಚಾರ್ಯ ಮಾರಣಕಟ್ಟೆ, ಡಾ. ಅತುಲ್ ಕುಮಾರ್ ಶೆಟ್ಟಿ, ಪ್ರೀತಮ್ ಶೆಟ್ಟಿ, ಕರುಣಾಕರ್ ಶೆಟ್ಟಿ, ಗುಣಕರ ಶೆಟ್ಟಿ ನಂದ್ರೊಳ್ಳಿ , ಸುಧಾಕರ ಶೆಟ್ಟಿ ಚಾರುಕೊಟ್ಟಿಗೆ , ಸುರೇಶ ಶೆಟ್ಟಿ ಕಲ್ಗದ್ದೆ ಉಪಸ್ಥಿತರಿದ್ದರು.

ಸ್ಪರ್ಧೆಯ ತೀರ್ಪುಗಾರರರಾಗಿ ಮನು ಹಂದಾಡಿ, ಸತ್ಯ ನಾ ಕೊಡೇರಿ ಹಾಗೂ ಚೇತನ್ ಶೆಟ್ಟಿ ಕೊವಾಡಿಯವರು ನಿರ್ವಹಿಸಿದರು. ಅಂತರಾಷ್ಟ್ರೀಯ ಜಾದುಗಾರ ಸತೀಶ್ ಕೆ ಹೆಮ್ಮಾಡಿ ತಂಡದವರಿಂದ ಮಾಯಾಜಾಲ ಜಾದೂ ಪ್ರದರ್ಶನ ನೆಡೆಯಿತು. ರಾಘವೇಂದ್ರ ಶೆಟ್ಟಿ ಸ್ವಾಗತಿಸಿ , ಉದಯ ಆಚಾರ್ಯ ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ರೆಡ್ ಎಫ್ ಎಮ್ನ ರೆಡಿಯೋ ಜಾಕಿ ಪ್ರಸನ್ನ ನಿರೂಪಿಸಿದರು.

Exit mobile version