Kundapra.com ಕುಂದಾಪ್ರ ಡಾಟ್ ಕಾಂ

ಡೀಮ್ಡ್ ಫಾರೆಸ್ಟ್ ಹೆಸರಿನಲ್ಲಿ ಬಡವರಿಗೆ ಅನ್ಯಾಯ: ಕುಂದಾಪುರ ತಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಕ್ರೋಶ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಲ್ಲೂರು ಗ್ರಾಪಂ ವ್ಯಾಪ್ತಿಯಲ್ಲಿ94ಸಿ ಕಾಯಿದೆಯಡಿ 125 ಕುಟುಂಬಗಳಿಗೆ ಹಕ್ಕುಪತ್ರ ಮಂಜೂರಾಗಿದೆ. 115 ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದೆ. 10 ಕುಟುಂಬಗಳಿಗೆ ಡೀಮ್ಡ್ ಫಾರೆಸ್ಟ್ ನೆಪದಲ್ಲಿ ಇನ್ನೂ ಹಕ್ಕು ಪತ್ರ ನೀಡಿಲ್ಲ. ನಿವೇಶನ ಮಂಜೂರು ಮಾಡಿದ ಬಳಿಕ ಡೀಮ್ಡ್ ಫರೆಸ್ಟ್ ನುಸುಳಿದ್ದು ಹೇಗೆ? ತಾಲೂಕಿನಾದ್ಯಂತ ಇಂತಹ ಪರಿಸ್ಥಿತಿ ಇದೆ. ಬಡವರು ಹಕ್ಕುಪತ್ರ ವಂಚಿರಾಗುವಂತಾಗಿದೆ ಎಂದು ತಾಪಂ ಸದಸ್ಯ ಕರಣ್ ಪೂಜಾರಿ ಅಸಮಾಧಾನ ಹೊರಹಾಕಿದರು.ಕುಂದಾಪುರ ತಾಪಂ ಸಭಾಂಗಣದಲ್ಲಿ ಬುಧವಾರ ಜರುಗಿದ ಕುಂದಾಪುರ ತಾಪಂ ಸಾಮನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು. ಸದಸ್ಯ ಸಿದ್ದಾಪುರ ವಾಸುದೇವ ಪೈ ಮಾತನಾಡಿ, ಅಂಪಾರು ಗ್ರಾಮದ ಸರ್ವೆ ನಂಬ್ರ15ರಲ್ಲಿ 40 ವರ್ಷಗಳಿಂದ ನೆಲೆಸಿರುವ ಕುಟುಂಬ ವೊಂದರ ಭೂಮಿ  ಡೀಮ್ಡ್ ಫಾರೆಸ್ಟ್‌ಗೆ ಸೇರಿದೆ. ಇಂತಹ ದೌರ್ಜನ್ಯ ಸರಿಯೇ ಎಂದು ಪ್ರಶ್ನಿಸಿದರು. ಸದಸ್ಯರಾದ ಜ್ಯೋತಿ ಪುತ್ರನ್, ದೇವದಾಸ ಶೆಟ್ಟಿ, ನಾರಾಯಣ ಗುಜ್ಜಾಡಿ ಡೀಮ್ಡ್ ಫಾರೇಸ್ಟ್ ಕಾನೂನಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಗಮನ ಸೆಳೆದರು.

ಕಂದಾಯ, ಅರಣ್ಯ ಇಲಾಖೆಯ ಗೊಂದಲಕಾರಿ ತೀರ್ಮಾನಗಳಿಂದ ಬಡವರು ನ್ಯಾಯಯುತವಾಗಿ ಪಡೆಯಬೇಕಾಗಿದ್ದ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಿರ್ಣಯಗಳಿಗೆ ಬೆಲೆಯಿಲ್ಲ: ತಾಪಂ ಸಾಮಾನ್ಯ ಸಭೆಗಳಲ್ಲಿ ತೆಗೆದುಕೊಳ್ಳುವ ನಿರ್ಣಯಗಳಿಗೆ ಬೆಲೆಯಿಲ್ಲ ಯಾವುದೇ ನಿರ್ಣಯ ಜಾರಿಯಾಗಿಲ್ಲ. ಅಧಿಕಾರಿಗಳು ತಾಪಂ ವ್ಯವಸ್ಥೆಯನ್ನು ನಿರ್ಲಕ್ಷ್ಯದಿಂದ ಕಾಣುತ್ತಿದ್ದಾರೆ ಎಂದು ಸದಸ್ಯ ಕರಣ್ ಪೂಜಾರಿ ಕಿಡಿಕಾರಿದರು.

ಕಸ ಎಸೆಯದಂತೆ ತಡೆಯಿರಿ: ಮುಳ್ಳಿಕಟ್ಟೆ ಗಂಗೊಳ್ಳಿ ನಡುವಿನ ಗುಜ್ಜಾಡಿ ಗೇರು ಪ್ಲಾಂಟೇಶನಲ್ಲಿ ಎಸೆಯಲಾಗುತ್ತಿರುವ ತ್ಯಾಜ್ಯವನ್ನು ಅರಣ್ಯ ಇಲಾಖೆ ಸ್ವಯಂಸ್ಪೂರ್ತಿಯಿಂದ ತೆರವುಗೊಳಿಸಿದೆ. ಆದರೆ ಅಷ್ಟೇ ಪ್ರಮಾಣದ ತ್ಯಾಜ್ಯ ಮತ್ತೆ ಬಂದು ಬಿದ್ದಿದೆ ಇದನ್ನು ತಡೆಯಲು ಯಾಕೆ ಆಗುತ್ತಿಲ್ಲ ಎಂದು ಸದಸ್ಯ ನಾರಾಯಣ ಗುಜ್ಜಾಡಿ ಪ್ರಶ್ನಿಸಿದರು.

ಸ್ಮಶಾನಕ್ಕೆ ಜಾಗ ಕಾದಿರಿಸಿ: ಕೂರ್ಗಿ ಗ್ರಾಮದಲ್ಲಿ ಸ್ಮಶಾನಕ್ಕೆ ಕಾದಿರಿಸಿದ 4ಎಕರೆ ಜಾಗದಲ್ಲಿ3 ಎಕರೆ ಜಾಗ ನಿವೇಶನ ಹಂಚಿಕೆಗೆ ಸೇರಿದೆ. ಪ್ರದೇಶದಲ್ಲಿ ಸ್ಮಶಾನಕ್ಕೆ ಜಾಗವಿಲ್ಲ ಉಳಿದ 1 ಎಕರೆ ಜಾಗವನ್ನಾದರೂ ಸ್ಮಾಶನಕ್ಕೆ ಮೀಸಲಿರಿಸಿ ತಾಲೂಕು ಆಡಳಿತ ಗಡಿ ಗುರುತು ಹಾಕಬೇಕು. ತಹಸೀಲ್ದಾರರು ಈ ವಿಷಯಕ್ಕೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸದಸ್ಯೆ ಶೈಲಶ್ರೀ ಆರೋಪಿಸಿದರು.
ಹಕ್ಲಾಡಿ ಗುಡ್ಡೆ ನಿವಾಸಿಗಳು ಕುಡಿಯುವ ನೀರಿಲ್ಲದೆ ಸಂಕಷ್ಟಪಡುತ್ತಿದ್ದಾರೆ ತಹಸೀಲ್ದಾರರ ಕಚೇರಿಗೆ ಭೇಟಿ ನೀಡಿ ನೀರು ಸರಬರಾಜಿಗೆ ಕ್ರಮ ವಹಿಸುವಂತೆ ಮನವಿ ಮಾಡಿಕೊಂಡಿದ್ದೆ. ಆದರೆ ಈ ವರೆಗೆ ಯಾವುದೆ ಕ್ರಮ ಕೈಗೊಂಡಿಲ್ಲ ಎಂದು ತಾಪಂ ಅಧ್ಯಕ್ಷೆ ಇಂದಿರಾ ಶೆಟ್ಟಿ ಗರಂ ಆದರು ಜತೆಗೆ ಕಂದಾಯ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.

39 ಗ್ರಾಪಂ ಹೊಂದಿರುವ ವಂಡ್ಸೆ ಹೋಬಳಿಯಲ್ಲಿ 12 ಗ್ರಾಮ ಲೆಕ್ಕಿಗರಿದ್ದಾರೆ. ಒಬ್ಬೊಬ್ಬರು 2-4 ಗ್ರಾಪಂಗಳ ಹೊಣೆ ಹೊರಬೇಕು ತಹಸೀಲ್ದಾರರು ಈ ವಿಚಾದಲ್ಲಿ ಏನು ಮಾತನಾಡುತ್ತಿಲ್ಲ ಅವರು ಸಭೆಗೆ ಸಹ ಬರಲ್ಲ ತಾಪಂ ಸದಸ್ಯರ ಭಾವನೆಗಳಿಗೆ ಸ್ಪಂದಿಸುವ ವ್ಯವಧಾನ ಅಧಿಕಾರಿ ವರ್ಗಕ್ಕೆ ಇಲ್ಲದಿರುವುದು ನೋವಿನ ಸಂಗತಿ ಎಂದು ಸದಸ್ಯ ಉದಯ ಪೂಜಾರಿ ಹೇಳಿದರು.

ತಾಪಂನ ಒಂದೇ ಒಂದು ಸಭೆಗೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಬಂದಿಲ್ಲ ಕುಂದಾಪುರದಲ್ಲಿ ನಡೆಯುವ ಬೇರೆಲ್ಲ ಸಭೆಗೆ ಅವರು ಬರುತ್ತಾರೆ. ಅವರು ಬರಲು ವಿಶೇಷ ತೋರಣ ಕಟ್ಟಬೇಕಾ? ಹೆದ್ದಾರಿ ದುಸ್ಥಿತಿಯಿಂದ ಜನ ಪಡುತ್ತಿರುವ ಪಾಡಿಗೆ ನಾವು ಅವರ ಕಾಲು ಹಿಡಿಯಬೇಕೇ? ಅವರ ವಿರುದ್ದ ನೋಟಿಸ್ ಜಾರಿಗೊಳಿಸಿ ಎಂದು ಸದಸ್ಯ ಕರಣ್ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು. ತಾಪಂ ಅಧ್ಯಕ್ಷೆ ಇಂದಿರಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಾಮ್‌ಕಿಶನ್ ಹೆಗ್ಡೆ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ರೂಪಾ ಪೈ, ತಾಪಂ ಇಒ ಕೇಶವ ಶೆಟ್ಟಿಗಾರ್, ಪ್ರೊಬೆಷನರಿ ಇಒ ಪ್ರತಿಭಾ ಇದ್ದರು.

Exit mobile version