Kundapra.com ಕುಂದಾಪ್ರ ಡಾಟ್ ಕಾಂ

ಜಿ-ಟೌನ್ ಸೊಸೈಟಿ ಸಮೀಕ್ಷೆ: ಭಾರತದ 50 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಡಾ. ಬಾಲಕೃಷ್ಣ ಎಸ್. ಮದ್ದೋಡಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನವದೆಹಲಿಯ ಜಿ-ಟೌನ್ ಸೊಸೈಟಿ ನಡೆಸಿದ 2020ರ ಭಾರತದ ಅಗ್ರ 50 ಪ್ರಭಾವಿ ವ್ಯಕ್ತಿಗಳ ಸಮೀಕ್ಷೆಯಲ್ಲಿ ಮಣಿಪಾಲ ಎಂಐಟಿ ಉಪನ್ಯಾಸಕ ಡಾ. ಬಾಲಕೃಷ್ಣ ಎಸ್. ಮದ್ದೋಡಿ ಅವರು ಆಯ್ಕೆಯಾಗಿದ್ದು, ಪರಿಸರ ಸಂರಕ್ಷಣೆ ವಿಭಾಗದಲ್ಲಿ ಡಾ. ಬಾಲಕೃಷ್ಣ ಎಸ್. ಮದ್ದೋಡಿ ಅವರನ್ನು ಆಯ್ಕೆ ಮಾಡಲಾಗಿದ್ದು, ಇತ್ತಿಚಿಗೆ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಳೆದ ಕೆಲವು ವರ್ಷಗಳಲ್ಲಿ ಬಾಲಕೃಷ್ಣ ಮದ್ದೋಡಿ ಅವರು ಕೈಗೊಂಡ ಪರಿಸರ ಸಂರಕ್ಷಣೆ ಬಗೆಗಿನ ಕಾರ್ಯಗಳು, 100 ವರ್ಷಗಳಿಗಿಂತ ಹೆಚ್ಚು ಹಳೆಯದಾದ 5 ಮರಗಳನ್ನು ಮರು ನೆಡುವಿಕೆ, 2000ಕ್ಕಿಂತ ಹೆಚ್ಚಿನ ಸಸಿಗಳನ್ನು ನೆಡುವುದು, 60 ಮರಗಳನ್ನು ಕಡಿಯುವುದನ್ನು ತಡೆಗಟ್ಟುವಲ್ಲಿ ಅವರ ಕೊಡುಗೆಯನ್ನು ಸಮೀಕ್ಷೆ ತೀರ್ಪುಗಾರರು ಪರಿಗಣಿಸಿ ಆಯ್ಕೆಮಾಡಲಾಗಿದೆ. ಹಸಿರು ಅಭಿವೃದ್ಧಿ, ಗ್ರೀನಥಾನ್ ಕಾರ್ಯಕ್ರಮದ ಮೂಲಕ ಕರ್ನಾಟಕದ ಸುಮಾರು 20,000 ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಕಾರ್ಯಕ್ರಮ ಅವರು ಸಂಘಟಿಸಿದ್ದಾರೆ. ವಿಶ್ವ ಜಲ ದಿನ, ವಿಶ್ವ ಪರಿಸರ ದಿನ, ವಿಶ್ವ ಭೂ ದಿನ, ವಿಶ್ವ ಓಝೋನ್ ದಿನವನ್ನು ಆಯೋಜಿಸಿ ಯುವಕರಲ್ಲಿ ಜಾಗೃತಿ ಮೂಡಿಸಿದ್ದಾರೆ. ಇವರ ಈ ಕೆಲಸ ಜಾಗತಿಕ ಪರಿಸರದ ಮೇಲೆ ಉತ್ತಮ ಪ್ರಭಾವ ಬೀರಿದೆ. ಪರಿಸರ, ಜಲ ಸಂರಕ್ಷಣೆ, ತ್ಯಾಜ್ಯ ನಿರ್ವಹಣೆ, ನೀರು ಮತ್ತು ನೈರ್ಮಲ್ಯವನ್ನು ಉಳಿಸಲು 20,000 ಯುವಕರಿಗೆ ತರಬೇತಿ ನೀಡುವಲ್ಲಿ ಅವರ ದೃಷ್ಟಿಕೋನವು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಯಿತು.

ಗೋವಾದಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಬಾಲಿವುಡ್ ನಟಿ ಪ್ರಾಚಿ ದೇಸಾಯಿ ಪ್ರಶಸ್ತಿ ನೀಡಿ ಗೌರವಿಸಿದರು. ಬೈಂದೂರು ಮಯ್ಯಾಡಿಯವರಾದ ಬಾಲಕೃಷ್ಣ ಮದ್ದೋಡಿಯವರು ಶ್ರೀನಿವಾಸ ರಾಮಕೃಷ್ಣ ಮದ್ದೋಡಿ ಮತ್ತು ಲೀಲಾವತಿ ಮದ್ದೋಡಿ ಅವರ ಪುತ್ರರಾಗಿದ್ದು, ಪ್ರಸ್ತುತ ಉಡುಪಿಯಲ್ಲಿ ನೆಲೆಸಿದ್ದಾರೆ. ಉತ್ತಮ ಸಂಘಟಕ, ವಾಗ್ಮಿ, ಸಮಾಜ ಸೇವಕ, ಸಂಪನ್ಮೂಲ ವ್ಯಕ್ತಿಯಾಗಿ ಸಾಮಾಜಿಕ ಹಾಗೂ ಶೈಕ್ಷಣಿಕ ರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

Exit mobile version