ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಎರಡು ವೇತನಗಳ ನಡುವೆ ಗಣನೀಯ ವ್ಯತ್ಯಾಸವಿದೆ. ಇದರಿಂದ ಉದ್ಯೋಗ ಖಾತ್ರಿ ಕೂಲಿಕಾರರಿಗೆ ಅನ್ಯಾಯವಾಗುತ್ತಿದೆ. ಅಕುಶಲ ಕೆಲಸದ ಕಾರ್ಮಿಕರ ಎರಡು ಗುಂಪುಗಳ ಕೂಲಿಯಲ್ಲಿ ಮಾಡಿರುವ ತಾರತಮ್ಯ ಖಂಡನೀಯ. ಇದರ ವಿರುದ್ಧ ತೀವ್ರ ಹೋರಾಟ ನಡೆಸಬೇಕು ಎಂದು ಅಖಿಲ ಭಾರತ ಕೃಷಿಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಕೋಣಿ ಹೇಳಿದರು.
ಅವರು ಕೆರ್ಗಾಲಿನಲ್ಲಿ ನಡೆದ ಕೂಲಿಕಾರರ ಸಭೆಯಲ್ಲಿ ಸಭೆಯಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರ ಕೃಷಿಕಾರ್ಮಿಕರ ಕೂಲಿಯನ್ನು ಪರಿಷ್ಕರಿಸಿ ರೂ 424. 80ನಿಗದಿಗೊಳಿಸಿದೆ. ಆದರೆ ಕೇಂದ್ರದ ಯೋಜನೆಯಾದ ಮಹಾತ್ಮ ಗಾಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರರಿಗೆ ರೂ 289 ನೀಡಲಾಗುತ್ತಿದೆ. ಈ ತಾರತಮ್ಯವನ್ನು ನಿವಾರಿಸಬೇಕು ಎಂದು ಬೇಡಿಕೆ ದಿನಾಚರಣೆ ಅಂಗವಾಗಿ ಬೈಂದೂರು ತಾಲ್ಲೂಕಿನ ವಿವಿಧೆಡೆ ನಡೆದ ಕೂಲಿಕಾರರ ಸಭೆಗಳಲ್ಲಿ ಒತ್ತಾಯಿಸಲಾಯಿತು.
ಕೂಲಿಕಾರರ ಸಂಘದ ಮುಖಂಡರೂ, ಕಾಯಕ ಬಂಧುಗಳೂ ಆದ ಸಾಕು, ಸುಶೀಲಾ, ಜಯಂತಿ, ವೀಣಾ ಇದನ್ನು ಅನುಮೋದಿಸಿದರು. ಪ್ರಸಕ್ತ ವರ್ಷದಲ್ಲಿ ನರೇಗಾ ಕೂಲಿಕಾರರ ಹಕ್ಕಿನ 100 ದಿನಗಳ ಕೆಲಸವನ್ನು ಎಲ್ಲ ಕೂಲಿಕಾರರು ಕಡ್ಡಾಯವಾಗಿ ಪಡೆಯಲೇಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.