Kundapra.com ಕುಂದಾಪ್ರ ಡಾಟ್ ಕಾಂ

ಶಿರೂರು ಗ್ರಾಪಂ ಕೋವಿಡ್ ಕಾರ್ಯಪಡೆ ಸಭೆ: ಕೊರೊನಾ ಎದುರಿಸಲು ವ್ಯಾಪಕ ಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪಂಚಾಯಿತಿ ವ್ಯಾಪ್ತಿಯ ಪರಿಸ್ಥಿತಿ ಎದುರಿಸಲು ಆರೋಗ್ಯ ಇಲಾಖೆ ಸನ್ನದ್ಧವಾಗಿದೆ. ಕಾಣಿಸಿಕೊಳ್ಳುತ್ತಿರುವ ಕೊರೋನಾ ಪಾಸಿಟಿವ್ ಪ್ರಕರಣಗಳ ಮೇಲೆ ನಿಗಾ ಇರಿಸಲಾಗುತ್ತಿದೆ. ಹೋಮ್ ಐಸೊಲೇಶನ್ ಬಗೆಗೆ ಮಾರ್ಗದರ್ಶನ ನೀಡಲಾಗುತ್ತಿದೆ. ಚಿಕಿತ್ಸೆ ಅಗತ್ಯ ಇರುವವರನ್ನು ಕೋವಿಡ್ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಸಾರ್ವಜನಿಕರು ಕೊರೊನಾ ತಡೆ ನಿಯಮಗಳನ್ನು ಚಾಚೂತಪ್ಪದೆ ಪಾಲಿಸಬೇಕು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸಹನಾ ಹೇಳಿದರು.

ಅವರು ಶಿರೂರು ಗ್ರಾಮ ಪಂಚಾಯಿತಿಯಲ್ಲಿ ನಡೆದ ಕೋವಿಡ್ ಕಾರ್ಯಪಡೆ ಸಭೆಯಲ್ಲಿ ಮಾತನಾಡಿದರು.

ಶಿರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ಗಣನೀಯವಾಗಿ ಏರುತ್ತಿದ್ದು, ಮೂರು ಸಾವು ಸಂಭವಿಸಿದೆ. ಜನರು ಇದನ್ನು ಗಂಭೀರವಾಗಿ ಪರಿಗಣಿಸದೆ ನಿಯಮಗಳನ್ನು ಉಲ್ಲಂಘಿಸುತ್ತಿರುವುದರಿಂದ ಎಲ್ಲದರ ನಿಯಂತ್ರಣಕ್ಕೆ ವ್ಯಾಪಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೋಮವಾರ ಮತ್ತು ಮಂಗಳವಾರ ಎರಡು ಹಂತದಲ್ಲಿ ನಡೆದ ಗ್ರಾಮ ಪಂಚಾಯಿತಿ ಕೋವಿಡ್ ಕಾರ್ಯಪಡೆ ಸಭೆಯಲ್ಲಿ ನಿರ್ಧರಿಸಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಿಲ್ಶಾದ್ ಬೇಗಂ ಅಧ್ಯಕ್ಷತೆ ವಹಿಸಿದ್ದರು. ಸ್ವಾಗತಿಸಿದ ಅಭಿವೃದ್ಧಿ ಅಧಿಕಾರಿ ಮಂಜುನಾಥ ಶೆಟ್ಟಿ, ವ್ಯಾಪ್ತಿಯಲ್ಲಿನ ಕೋವಿಡ್ ಸೋಂಕಿನ ಸ್ಥಿತಿ, ಅದನ್ನು ತಡೆಗಟ್ಟುವತ್ತ ಕಾರ್ಯಪಡೆಯ ಹೊಣೆ ಮತ್ತು ಅದರ ಮುಂದಿರುವ ಸವಾಲುಗಳನ್ನು ವಿವರಿಸಿದರು.

ಎರಡೂ ದಿನದ ಸಭೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ವಿಸ್ತೃತ ಚರ್ಚೆ ನಡೆಯಿತು. ವಸತಿ ಮಟ್ಟದಲ್ಲಿ ಜನಜಾಗೃತಿ ಮೂಡಿಸಲು, ನಿರ್ಬಂಧಗಳ ಉಲ್ಲಂಘನೆ ತಡೆಯಲು, ಅಗತ್ಯ ನೆರವು ಒದಗಿಸಲು ಕಾರ್ಯಪಡೆಯ ಸದಸ್ಯರನ್ನು, ಅಧಿಕಾರಿಗಳನ್ನು ಒಳಗೊಂಡ 14 ತಂಡಗಳನ್ನು ರಚಿಸಲಾಯಿತು. 6

ತಂಡಗಳಿಗೆ ಒಬ್ಬ ಪೊಲೀಸ್ ಸಿಬ್ಬಂದಿಯನ್ನು ನಿಯುಕ್ತಿಗೊಳಿಸಲಾಯಿತು. ಮುಂಚೂಣಿಯಲ್ಲಿದ್ದು ಕೆಲಸ ಮಾಡಲು ೧೦ ಜನ ಕೋವಿಡ್ ವಾರಿಯರ‍್ಸ್‌ಗಳನ್ನು ಆಯ್ಕೆಮಾಡಲಾಯಿತು. ಕೋವಿಡ್ ಸರಪಣಿ ತಪ್ಪಿಸಲು ವಿಧಿಸಿರುವ ಹದಿನಾಲ್ಕು ದಿನಗಳ ಜನತಾ ಕರ್ಫ್ಯೂ ನಿರ್ಬಂಧಗಳನ್ನು ಜನರು

ಕಟ್ಟುನಿಟ್ಟಾಗಿ ಪಾಲಿಸುವುದನ್ನು ಖಾತರಿ ಪಡಿಸಿಕೊಳ್ಳಲು ನಿರ್ಧರಿಸಲಾಯಿತು. ಸೋಂಕು ಇರುವ ಮನೆಯವರು ಅಗತ್ಯ ಸಾಮಗ್ರಿಗಳನ್ನು ನೆರೆಹೊರೆಯವರ ಮೂಲಕ ಅಥವಾ ಕಾರ್ಯಪಡೆಯ ನೆರವಿನಿಂದ ತರಿಸಿಕೊಳ್ಳಬಹುದು. ನಿರ್ಗತಿಕರು ಇದ್ದರೆ ಅವರಿಗೆ ಗ್ರಾಮ ಪಂಚಾಯಿತಿಯಿಂದ ಅಥವಾ ದಾನಿಗಳಿಂದ ಸಾಮಗ್ರಿ ಒದಗಿಸಬೇಕು ಎಂದು ತೀರ್ಮಾನಿಸಲಾಯಿತು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಪಟೇಲರಮನೆ, ಸದಸ್ಯರು, ಸಿಬ್ಬಂದಿ, ಶಾಲೆಗಳ ಮುಖ್ಯ ಶಿಕ್ಷಕರು, ಆರೋಗ್ಯ ಕಾರ್ಯಕರ್ತರು, ಅಂಗನವಾಡಿ, ಆಶಾ ಕಾರ್ಯಕರ್ತರು ಭಾಗವಹಿಸಿದ್ದರು. ಎಲ್ಲರಿಗೆ ಪಂಚಾಯಿತಿ ವತಿಯಿಂದ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಲಾಯಿತು.

Exit mobile version