Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರದಲ್ಲಿ ಜಿ.ಎಸ್.ಬಿ. ಮಹಿಳೆಯರ ಚಂಡೆವಾದ್ಯಕ್ಕೆ ಚಾಲನೆ

ಕುಂದಾಪುರ: ವಿದ್ಯಾವಂತರಾಗಿ ಉನ್ನತ ಹುದ್ದೆ ನೌಕರಿ ನಿರೀಕ್ಷಿಸದೆ ಕುಟುಂಬದ ಹೊಣೆ ಅರಿತು ಮನೆಕೆಲಸಗಳಲ್ಲೆ ಖುಷಿ ಪಡುವ ಸಹಸ್ರಾರು ಮಾತೆಯರು ಕಾಣಸಿಗುತ್ತಾರೆ. ಆದರೆ ಮಹಿಳೆ ನಾಲ್ಕು ಗೋಡೆಯೊಳಗೆ ಯಶಸ್ವಿ ಗೃಹಿಣಿಯಾಗಿದ್ದರೆ ಸಾಲದು, ಸುತ್ತಲಿನ ತಮ್ಮ ಸಮಾಜದಲ್ಲೂ ಸಾಂಸ್ಕೃತಿಕವಾಗಿ ತೊಡಗಿಸಿಕೊಂಡು ತಮ್ಮೊಳಗಿನ ಪ್ರತಿಭೆ ಅನಾವರಣ ಗೊಳಿಸಿ ತನ್ಮೂಲಕ ಆತ್ಮವಿಶ್ವಾಸ ವೃದ್ಧಿಸಿಕೊಳ್ಳುವಂತಾಗಬೇಕು ಎಂದು ಸಾಹಿತಿ ಜಾದೂಗಾರ ಓಂಗಣೇಶ್ ಹೇಳಿದರು.

ಇಲ್ಲಿನ ಚಿಕ್ಕನ್ ಸಾಲ್ ರಸ್ತೆಯ ಶ್ರೀ ಬಗಳಾಂಬ ದೇವಸ್ಥಾನದಲ್ಲಿ ಜರುಗಿದ ಉಪ್ಪುಂದ-ನಾಯ್ಕನಕಟ್ಟೆ ಜಿ ಎಸ್ ಬಿ ಮಹಿಳಾ ರಂಗದ ಚಂಡೆವಾದನ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಧರ್ಮದರ್ಶಿ ಗಣಪತಿ ಸುವರ್ಣ ಸಭೆಯನ್ನು ಉದ್ಘಾಟಿಸಿ ತಮ್ಮ ಕೆಲಸದ ನಡುವೆಯೂ ಹವ್ಯಾಸಿಗಳಾಗಿ ಚಂಡೆವಾದನಕ್ಕೆ ಆಸಕ್ತಿ ವಹಿಸಿದ ಅಪರೂಪದ ಗ್ರಾಮೀಣ ಮಹಿಳೆಯರು ಇಂದಿನ ಯುವತಿಯರಿಗೆ ಮಾದರಿಯಾಗಿದ್ದಾರೆ ಇವರಿಗೆ ದೇವಿ ಅನುಗ್ರಹಿಸಲಿ ಎಂದು ಶುಭ ಹಾರೈಸಿದರು. ತರಬೇತಿಗೆ ಅನುವು ಮಾಡಿಕೊಟ್ಟ ಉಪ್ಪುಂದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ವಿಷ್ಣು ಪಡಿಯಾರ್ ಮುಖ್ಯ ಅತಿಥಿಯಾಗಿದ್ದರು. ಉದ್ಯಮಿಗಳಾದ ಬಿ ಶ್ರೀನಿವಾಸ ಪ್ರಭು, ಶಾಂತಾರಾಂ ಪ್ರಭು, ಪಾಂಡುರಂಗ ಪಡಿಯಾರ, ರಾಜೇಶ್ ಪೈ, ಧ್ವನಿ ಬೆಳಕು ವಲಯ ಕಾರ್ಯದರ್ಶಿ ವಿನಾಯಕ ಪ್ರಭು, ಗುರುಪ್ರಸಾದ್ ನಾಯಕ್, ಅಶೋಕ್ ಶ್ಯಾನುಭಾಗ್, ಸುಧೀರ್ ಬಿ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

ಮಹಿಳಾ ವಿದ್ಯಾರ್ಥಿಗಳಾದ ಸವಿತಾ ಎಸ್ ಪ್ರಭು, ನಿಧಿ ಜಿ ನಾಯಕ್, ಆಶಾ ಪಿ ಭಟ್, ನಿರ್ಮಲಾ ಆರ್ ಕಿಣಿ, ಪೂಜಾ ಪಿ ಭಟ್, ಗೌತಮಿ ಜಿ ಪ್ರಭು, ಕಾವ್ಯಾ ಕೆ ಕಿಣಿ, ಅಕ್ಷತಾ ಎ ಶ್ಯಾನುಭಾಗ್, ವಿನಯಾ ಕೆ ಪೈ, ರಕ್ಷಾ ಆರ್ ಶ್ಯಾನುಭಾಗ್, ರಾಜಶ್ರೀ ಎಸ್ ಪ್ರಭು, ವಿಜಯಾ ಜಿ ಕಾಮತ್ ಇವರಿಗೆ ಶ್ರೀಮತಿ ಜಲಜಾ ಗಣಪತಿ ಸುವರ್ಣರವರು ಫಲಪುಷ್ಪ ಕುಂಕುಮ ಪ್ರಸಾದ ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಶ್ರೀ ಚಿಕ್ಕಮ್ಮ ದೇವಿ ಬಗಳಾಂಬತಾಯಿ ಚಂಡೆ ಬಳಗದ ನಿರ್ದೇಶಕ ಹಾಗೂ ಚಂಡೆ ಶಿಕ್ಷಕ ಮಿಥುನ್ ಸುವರ್ಣರವರನ್ನು ಸಕಲ ವಿದ್ಯಾರ್ಥಿ ವೃಂದದವರು ಶಾಲು ಹಾರ ಕಾಣಿಕೆಯ ಮೂಲಕ ಸನ್ಮಾನಿಸಿದರು. ಮಹಿಳೆಯರು ಚಂಡೆ ಢೋಲು ತಾಳ ವಾದನದ ಮೂಲಕ ದೇವಿಗೆ ತಮ್ಮ ನಾಲ್ಕು ತಿಂಗಳ ಪ್ರಯತ್ನದ ಪ್ರಥಮ ಪ್ರದರ್ಶನ ಅರ್ಪಿಸಿದರು.

ಶ್ರೀಧರ ಸುವರ್ಣ ಪ್ರಾರ್ಥಿಸಿ ಚರಣ್ ಸುವರ್ಣ ಸ್ವಾಗತಿಸಿದರು. ಸುಧೀರ್ ಸುವರ್ಣ ವಂದಿಸಿದರು.

Exit mobile version