Kundapra.com ಕುಂದಾಪ್ರ ಡಾಟ್ ಕಾಂ

ಕಡಲಾಮೆ ಸಂರಕ್ಷಕ ದಾಸಿ ವೆಂಕಟ ಖಾರ್ವಿ ನಿಧನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ‘ಕಡಲಾಮೆಯ ಆಪ್ತಸಖ’ ಎಂಬ ಹೆಗ್ಗಳಿಕೆ ಪಡೆದಿರುವ ಸಹಸ್ರಾರು ಕಡಲಾಮೆಗಳ ಸಂರಕ್ಷಕ ಮರವಂತೆ ದಾಸಿ ವೆಂಕಟ ಖಾರ್ವಿ(86) ನಿಧನರಾದರು. ಅವರಿಗೆ ಇಬ್ಬರು ಪುತ್ರಿಯರಿದ್ದಾರೆ.

ಕಡಲಾಮೆಗಳ ಬಗೆಗಿನ ವಾತ್ಸಲ್ಯದಿಂದಾಗಿ ಸ್ವಯಂಪ್ರೇರಿತರಾಗಿ ಜೀವಿತದುದ್ದಕ್ಕೂ ಅವುಗಳ ರಕ್ಷಣೆ ಮಾಡಿಕೊಂಡು ಬಂದಿದ್ದರು. ಕಳೆದ ಕೆಲವು ಸಮಯದಿಂದ ಅನಾರೋಗ್ಯ ಪೀಡಿತರಾಗಿದ್ದರು. ಗಾಳಿಯ ಅಬ್ಬರ‍್ಕಕೆ ಮನೆಯೂ ಬಿದ್ದುಹೋಗಿತ್ತು. ಪುಟ್ಟ ಗುಡಿಸಲಿನಲ್ಲಿ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದರು.

ಹೊಟ್ಟೆಪಾಡಿಗಾಗಿ ಮೀನು ಹಿಡಿಯುವ ಕಾಯಕ ಮಾಡಿಕೊಂಡಿದ್ದ ಇವರು ಕಡಲಾಮೆ ಸಂರಕ್ಷಣೆ ಪ್ರವೃತ್ತಿಯನ್ನಾಗಿಸಿಕೊಂಡವರು. ಕಡಲಾಮೆ ಮೊಟ್ಟೆ ಮರಿಗಳ ರಕ್ಷಣೆಗೆಂದೇ ಜೀವನ ಸೆವೆಸಿರುವ ಇವರದ್ದು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದ ಸೇವೆ. ಕಡಲತೀರದುದ್ದಕ್ಕೂ ಮೀನುಗಾರಿಕೆಯ ಕಸುಬಿನ ಬಳಿಕ ಪ್ರತಿದಿನ ಓಡಾಡುತ್ತಾ 45 ಸಾವಿರಕ್ಕೂ ಅಧಿಕ ಕಡಲಾಮೆ ಮೊಟ್ಟೆ ರಕ್ಷಿಸಿದ್ದಾರೆ. ನೂರಕ್ಕೂ ಹೆಚ್ಚು ಗಾಯಾಳು ಕಡಲಾಮೆಗಳ ಆರೈಕೆ ಮಾಡಿ ಕಡಲಿಗೆ ಮರಳಿಸಿದ್ದಾರೆ ಬಾಲ್ಯದಿಂದಲೂ ಕಡಲಾಮೆಗಳ ರಕ್ಷಣೆ ಮಾಡಿಕೊಂಡು ಬರುತ್ತಿದ್ದರು. ಕರಾವಳಿಯಲ್ಲಿ ಕಡಲಾಮೆ ಸಂರಕ್ಷಣೆಯಲ್ಲಿ ಮುಂಚೂಣಿಯ ಪಾತ್ರ ವಹಿಸಿದವರು. ಅನಾಥ ಶವಗಳ ಸಂಸ್ಕಾರ ಕಾರ್ಯದಲ್ಲಿಯೂ ತೊಡಗಿಸಿಕೊಂಡಿದ್ದರು. ಎಫೆಎಸ್‌ಎಲ್ ಇಂಡಿಯಾ ಅವರ ಸೇವೆ ಗುರುತಿಸಿ ಗೌರವಧನ ನೀಡುತ್ತಾ ಬಂದಿದೆ. ಅರಣ್ಯ ಇಲಾಖೆ ಗೌರವ ಅರಣ್ಯ ರಕ್ಷಕ ಜವಾಬ್ದಾರಿ ವಹಿಸಿತ್ತು. ಅನಾವೃಷ್ಟಿಯಿಂದ ಬಿದ್ದು ಮನೆ ಎದ್ದಿಲ್ಲ ಅವರ ಮಕ್ಕಳ ಬದುಕಿಗಾದರೂ ಸರಕಾರ ಮತ್ತು ಸಂಬಂಧಿಸಿದ ಇಲಾಖೆ ಗಮನಹರಿಸಬೇಕು.

Exit mobile version