Kundapra.com ಕುಂದಾಪ್ರ ಡಾಟ್ ಕಾಂ

‘ನಮ್ಮ ಗ್ರಾಮ ನಮ್ಮ ಆರೋಗ್ಯ’ ತಂಡದಿಂದ ವೈದ್ಯಕೀಯ ಸಲಕರಣೆ ಕೊಡುಗೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸರ್ಕಾರ ಜನರಿಗೆ ಆರೋಗ್ಯ ಸೇವೆ ಒದಗಿಸಲು ಗಣನೀಯ ಪ್ರಮಾಣದ ವೆಚ್ಚ ಮಾಡುತ್ತಿದೆ. ಆದರೆ ಅದಕ್ಕೆ ಬೇಕಾಗಿರುವ ಎಲ್ಲ ಅಗತ್ಯಗಳನ್ನು ಪೂರೈಸಲು ಸರ್ಕಾರಕ್ಕೆ ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಸಾರ್ವಜನಿಕರು ಮತ್ತು ಸಂಘಟನೆಗಳು ಮುಂದೆ ಬಂದರೆ ಆರೋಗ್ಯ ಸೇವೆಯನ್ನು ಇನ್ನಷ್ಟು ವಿಸ್ತರಿಸಲು ಸಾಧ್ಯವಾಗುತ್ತದೆ ಎಂದು ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸನ್ಮಾನ್ ಶೆಟ್ಟಿ ಹೇಳಿದರು.

ಮರವಂತೆ-ನಾವುಂದ ವ್ಯಾಪ್ತಿಯ ‘ನಮ್ಮ ಗ್ರಾಮ ನಮ್ಮ ಆರೋಗ್ಯ’ ತಂಡ ಗುರುವಾರ ಕೇಂದ್ರಕ್ಕೆ ಒದಗಿಸಿದ 30 ಪಲ್ಸ್ ಒಕ್ಸಿಮೀಟರ್ ಮತ್ತು ಒಂದು ನೆಬ್ಯುಲೈಸರ್ ಸ್ವೀಕರಿಸಿ ಅವರು ಮಾತನಾಡಿದರು.

ತಂಡದ ಸದಸ್ಯ ವೆಂಕಟೇಶ ನಾವುಂದ ಮಾತನಾಡಿ ಎರಡು ಗ್ರಾಮದ ಸಮಾನ ಮನಸ್ಕರು ಇಲ್ಲಿನ ಆರೋಗ್ಯ ಕುರಿತಾದ ಕಾಳಜಿಯಿಂದ ತಂಡ ರೂಪಿಸಿಕೊಂಡಿದ್ದಾರೆ. ತಂಡದಲ್ಲಿ ದೇಶ ಮತ್ತು ವಿದೇಶದಲ್ಲಿ ಇರುವ ಊರಿನ ಯುವಕರು ಇದ್ದಾರೆ. ಅದು ಇಲ್ಲಿನ ಕೊರತೆ ನೀಗಲು, ಜನರಲ್ಲಿ ಆರೋಗ್ಯ ರಕ್ಷಣೆಯೆಡೆಗೆ ಅರಿವು ಮೂಡಿಸಲು ಆರೋಗ್ಯ ಕೇಂದ್ರ ಕೇಂದ್ರಿತವಾಗಿ ಕೆಲಸ ಮಾಡಲು ಉದ್ದೇಶಿಸಿದೆ. ಕೇಂದ್ರಕ್ಕೆ ಅದು ಈಗ ನೀಡಿರುವ ಒಕ್ಸಿಮೀಟರ್‌ಗಳನ್ನು ತೊಂದರೆಗೊಳಗಾದವರು ಅಗತ್ಯವಿರುವ ಅವಧಿಯಲ್ಲಿ ಮನೆಗಳಲ್ಲಿ ಬಳಕೆ ಮಾಡಲು ಅವಕಾಶವಿದೆ. ಅದಕ್ಕೆ ನನ್ನ 9448812254 ಅಥವಾ ನಾಗೇಶ್ ಕೆ. ಎಂ. ಅವರ 9880006421 ಸಂಖ್ಯೆಯ ದೂರವಾಣಿಗಳಿಗೆ ಕರೆ ಮಾಡಬಹುದು ಎಂದರು.

ನಾಗೇಶ್ ಕೆ. ಎಂ. ವಂದಿಸಿದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್. ಜನಾರ್ದನ ಮರವಂತೆ, ಹಿರಿಯ ಆರೋಗ್ಯ ಸಹಾಯಕಿ ವಿಜಯಾ ದೇಸಾಯಿ, ಶುಶ್ರೂಷಕಿ ರತ್ನಾವತಿ, ಫಾರ್ಮಸಿ ಅಧಿಕಾರಿ ರಾಘವೇಂದ್ರ ಹೊಳ್ಳ ಇದ್ದರು.

Exit mobile version