Kundapra.com ಕುಂದಾಪ್ರ ಡಾಟ್ ಕಾಂ

ಕರಾವಳಿ ಮೀನುಗಾರರಿಗೂ ಆರ್ಥಿಕ ಪ್ಯಾಕೇಜ್ ನೀಡಿ: ನಾಗೇಶ ಖಾರ್ವಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಲಾಕ್‌ಡೌನ್ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ವಿವಿಧ ದುಡಿಯುವ ವರ್ಗಗಳಿಗೆ ಮುಖ್ಯ ಮಂತ್ರಿಗಳು ನೆರವಿನ ಪ್ಯಾಕೇಜ್ ಘೋಷಿಸಿದ್ದಾರೆ. ಈ ವೇಳೆ ದುಡಿಮೆ ಕಳೆದುಕೊಂಡು, ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಅಸಂಘಟಿತ ವಲಯಕ್ಕೆ ಸೇರಿರುವ ಕರಾವಳಿ ಮೀನುಗಾರರಿಗೂ ನೆರವು ನೀಡಬೇಕು ಎಂದು ಬೈಂದೂರು ಬ್ಲಾಕ್ ಕಾಂಗ್ರೆಸ್ ಮೀನುಗಾರಿಕಾ ಘಟಕದ ಅಧ್ಯಕ್ಷ ನಾಗೇಶ ಖಾರ್ವಿ ಅಳ್ವೆಕೋಡಿ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದಾರೆ.

ಲಾಕ್‌ಡೌನ್‌ನಿಂದ ಮೀನುಗಾರರು ದುಡಿಮೆ ಕಳೆದುಕೊಂಡಿದ್ದಾರೆ. ಅದಕ್ಕಿಂತ ಹಿಂದಿನ ನಾಲ್ಕು ತಿಂಗಳ ಕಾಲ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುವ ಮೀನುಗಾರರು ಮತ್ಸ್ಯಕ್ಷಾಮದಿಂದ ಕಂಗೆಟ್ಟಿದ್ದಾರೆ. ಈಚಿಗಿನ ತೌಕ್ತೆ ಚಂಡಮಾರುತದಿಂದ ಮೀನುಗಾರಿಕಾ ಸಲಕರಣೆಗಳಿಗೂ ಹಾನಿಯಾಗಿದೆ. ಅವರ ವಸತಿ ಪ್ರದೇಶಗಳು ಕಡಲ್ಕೊರೆತದಿಂದ ನಲುಗಿವೆ. ಮೀನುಗಾರಿಕೆಯನ್ನೇ ಅವಲಂಬಿಸಿರುವ ಅವರಿಗೆ ಇವೆಲ್ಲದರಿಂದ ದೊಡ್ಡ ಹೊಡೆತ ಬಿದ್ದಿದೆ. ದೋಣಿ, ಬಲೆ, ಎಂಜಿನ್, ಇತರ ಸಲಕರಣೆಗಳನ್ನು ಖರೀದಿಸಲು ಬ್ಯಾಂಕ್ ಸಾಲ ಪಡೆದವರು ಸಾಲ ಮರುಪಾವತಿ ಮಾಡಲಾರದೆ ಬಡ್ಡಿಯ ಹೊರೆ ಹೊರುವಂತಾಗಿದೆ. ಕೃಷಿಕರಂತೆ ಮೀನುಗಾರರು ಜನರಿಗೆ ಆಹಾರ ಪೂರೈಸುತ್ತಾರೆ. ಅವರ ಸಂಕಷ್ಟ ಕಾಲದಲ್ಲಿ ಅವರ ನೆರವಿಗೆ ಬರಬೇಕಾದುದು ಸರ್ಕಾರದ ಹೊಣೆ. ಆದುದರಿಂದ ಮೀನುಗಾರರಿಗೆ ಮತ್ತು ಮೀನುಗಾರಿಕೆ ಸಂಬಂಧಿ ಕಾರ್ಮಿಕರಿಗೆ ಸರ್ಕಾರ ತಕ್ಷಣ ನೆರವು ನೀಡಬೇಕು ಎಂದು ಅವರು ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

Exit mobile version