Kundapra.com ಕುಂದಾಪ್ರ ಡಾಟ್ ಕಾಂ

ಜೂನ್.7ರ ತನಕ ಮದುವೆ ಕಾರ್ಯಕ್ರಮಕ್ಕೆ ಅನುಮತಿ ರದ್ದು: ಉಡುಪಿ ಜಿಲ್ಲಾಧಿಕಾರಿ ಆದೇಶ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಮದುವೆ ಕಾರ್ಯಕ್ರಮಗಳಿಂದಾಗಿ ಕೋವಿಡ್ ಪ್ರಕರಣಗಳು ಹರಡುತ್ತಿರುವ ಹಿನ್ನೆಲೆಯಲ್ಲಿ ಮೇ.25ರಿಂದ ಜೂನ್.7ರ ತನಕ ಯಾವುದೇ ಮದುವೆ ಕಾರ್ಯಕ್ರಮ ನಡೆಸಲು ಹೊಸತಾಗಿ ಅನುಮತಿ ನೀಡುವುದಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚಿಸಿದ್ದಾರೆ.

ಸೋಮವಾರ ಉಡುಪಿಯಲ್ಲಿ ಶಾಸಕರೊಂದಿಗೆ ಸಭೆ ನಡೆಸಿದ ಬಳಿಕ ಈ ಮಹತ್ವದ ನಿರ್ಧಾರ ಪ್ರಕಟಿಸಿದ್ದು, ಕೋವಿಡ್ ನಿಯಂತ್ರಣಕ್ಕಾಗಿ ಎಲ್ಲಾ ಕಾರ್ಯಕ್ರಮಗಳಿಗೂ ಕಡಿವಾಣ ಹಾಕುವುದು ಅನಿವಾರ್ಯವಾಗಿದೆ. ಈಗಾಗಲೇ ಅನುಮತಿ ನೀಡಲಾಗಿರುವ ಮದುವೆ ಕಾರ್ಯಕ್ರಮಗಳನ್ನು 40 ಜನರ ಮಿತಿಯಲ್ಲಿ ನಡೆಸಬಹುದಾಗಿದ್ದು, ಹೊಸದಾಗಿ ಯಾವುದೇ ಮದುವೆ ಕಾರ್ಯಕ್ರಮಕ್ಕೆ ಅನುಮತಿ ನೀಡದಂತೆ ಆಯಾ ತಾಲೂಕುಗಳ ತಹಶೀಲ್ದಾರರಿಗೆ ಸೂಚನೆ ನೀಡಲಾಗಿದೆ.

ಕೋವಿಡ್ ನಿಷೇಧಾಜ್ಞೆ ಜಾರಿ ಇರುವ ಸಂದರ್ಭ ಮೆಹಂದಿ, ಎಂಗೆಜ್‌ಮೆಂಟ್ ಮಾಡುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಅನಗತ್ಯವಾಗಿ ಗುಂಪುಗೂಡಿ ಆಟವಾಡುವುದು ಕಂಡಬರುತ್ತಿದ್ದು, ಅಂತವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದರು.

ಬೇಕರಿಗಳಲ್ಲಿರುವ ಕೆಲವು ಉತ್ಪನ್ನಗಳು ಹಾಳಾಗುತ್ತಿದ್ದು ಬೇಕರಿ ತೆರೆಯಲು ಅನುಮತಿ ನೀಡುವಂತೆ ಮನವಿ ಬಂದಿದ್ದು, ಅದರಂತೆ ಬುಧವಾರ ಒಂದು ದಿನ ಮಾತ್ರ ಬೆಳಿಗ್ಗೆ 6 ಗಂಟೆಯಿಂದ 10  ಗಂಟೆಯ ತನಕ ಬೇಕರಿ ತೆರೆಯಲು ಅನುಮತಿ ನೀಡಲಾಗಿದೆ. ಬುಧವಾರ ಒಂದು ದಿನ ಮಾತ್ರ ಬೆಳಿಗ್ಗೆ 6 ಗಂಟೆಯಿಂದ 10  ಗಂಟೆಯ ತನಕ ಇಲೆಕ್ಟ್ರಿಕಲ್ ಉತ್ಪನ್ನಗಳನ್ನು ಮಾರಾಟ ಮಾಡಲು ಅನುಮತಿ ನೀಡಲಾಗಿದೆ.

ಅನಗತ್ಯವಾಗಿ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸಂಚಾರ ಮಾಡಿದರೆ ಅವರ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದವರು ಈ ಸಂದರ್ಭ ತಿಳಿಸಿದರು.

Exit mobile version