Kundapra.com ಕುಂದಾಪ್ರ ಡಾಟ್ ಕಾಂ

ಜಾಮಿಯಾಥುಲ್ ಮುಸ್ಲಿಮಿನ್ ಟ್ರಸ್ಟ್‌ನಿಂದ ಮನೆ ಮನೆಗೆ ತೆರಳಿ ಕೋವಿಡ್ ಪರೀಕ್ಷೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಗಂಗೊಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಗಂಗೊಳ್ಳಿಯ ಜಾಮಿಯಾಥುಲ್ ಮುಸ್ಲಿಮಿನ್ ಟ್ರಸ್ಟ್ ಕರೋನಾ ಮಹಾಮಾರಿ ಕಟ್ಟಿಹಾಕಲು ಮಾದರಿ ಕಾರ್ಯ ಮಾಡುವ ಮೂಲಕ ಗಮನ ಸೆಳೆದಿದೆ.

ಗಂಗೊಳ್ಳಿ ಪರಿಸರದಲ್ಲಿ ಕೋವಿಡ್ ಸೋಂಕಿನ ಕುರಿತು ಪರಿಸರದ ಜನರಲ್ಲಿ ಜಾಗೃತಿ ಮೂಡಿಸುದರೊಂದಿಗೆ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ಆಶಾ ಕಾರ್ಯಕರ್ತೆಯೊಡಗೂಡಿ ಮನೆ ಮನೆಗೆ ತೆರಳಿ ಕೋವಿಡ್ ಪರೀಕ್ಷೆ ನಡೆಸಿ ಗ್ರಾಮದಲ್ಲಿ ಸೋಂಕು ನಿವಾರಣೆಯಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.

ಜಾಮಿಯಾಥುಲ್ ಮುಸ್ಲಿಮಿನ್ ಟ್ರಸ್ಟ್ ಅಧ್ಯಕ್ಷ ಪಿ.ಎಂ.ಹಸೈನಾರ್ ಮತ್ತು ಕಾರ್ಯದರ್ಶಿ ಜಿ.ರೆಹಾನ್ ಅಹ್ಮದ್ ಹಾಗೂ ಟ್ರಸ್ಟ್‌ನ ಸದಸ್ಯರ ಮುಂದಾಳುತ್ವದಲ್ಲಿ ಗಂಗೊಳ್ಳಿಯ ಮೂರು ವಠಾರಗಳಲ್ಲಿನ ಸುಮಾರು ೧೫೦ ಕ್ಕೂ ಮಿಕ್ಕಿ ಮನೆಯ ಸದಸ್ಯರನ್ನು ಕೋವಿಡ್ ಪರೀಕ್ಷೆ ಒಳಪಡಿಸಲಾಗಿದೆ. ಪಾಸಿಟಿವ್ ಇದ್ದವರನ್ನು ಹೋಮ್ ಐಸೋಲೇಶನ್ ಮಾಡಿಸಿ ಅವರ ಚಲನವಲನಗಳ ಮೇಲೆ ನಿಗಾ ಇರಿಸುವ ಕೆಲಸವನ್ನೂ ಮಾಡಲಾಗುತ್ತಿದೆ ಅಲ್ಲದೆ ತುರ್ತು ಚಿಕಿತ್ಸೆ ಅಗತ್ಯವಿದ್ದವರನ್ನು ಆಸ್ಪತ್ರೆಗೆ ದಾಖಲಿಸಲು ಕ್ರಮಕೈಗೊಳ್ಳಲಾಗುತ್ತಿದೆ.

ವ್ಯಾಪಕವಾಗಿ ಕರೋನಾ ಸೋಂಕು ಹಬ್ಬುತ್ತಿರುವಾಗ ಸೂಕ್ತ ಸಮಯದಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಒಂದು ವೇಳೆ ಪಾಸಿಟಿವ್ ಬಂದರೆ ಸರಿಯಾದ ಚಿಕಿತ್ಸೆ ಪಡೆಯುವುದರಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದು. ಹಾಗೆಯೇ ಸೋಂಕು ಹರಡುವುದನ್ನು ತಡೆಯಬಹುದು. ಹೀಗಾಗಿ ವಿವಿಧ ವಠಾರಗಳಲ್ಲಿ ಸಾಮೂಹಿಕವಾಗಿ ಕೋವಿಡ್ ಪರೀಕ್ಷೆ ನಡೆಸಲು ಆರೋಗ್ಯ ಇಲಾಖೆ ಜೊತೆ ಕೈಜೋಡಿಸಿ ಕೆಲಸ ಮಾಡಲಾಗುತ್ತಿದೆ ಎಂದು ಟ್ರಸ್ಟ್ ಅಧ್ಯಕ್ಷ ಪಿ.ಎಂ.ಹಸೈನಾರ್ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಪ್ರತಿದಿನ 500ಕ್ಕಿಂತ ಅಧಿಕ ಮಂದಿಗೆ ಕರೋನಾ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಗ್ರಾಮೀಣ ಭಾಗದಿಂದ ಹೆಚ್ಚು ಕರೋನಾ ಪ್ರಕರಣಗಳು ವರದಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಾಮೂಹಿಕ ಪರೀಕ್ಷೆಗಳು ನಡೆಸಿ ಸೋಂಕು ಹರಡದಂತೆ ಕಡಿವಾಣ ಹಾಕಲು ಮುಂದಾಗಿರುವ ಟ್ರಸ್ಟ್‌ನ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ.

 

Exit mobile version